ಕಳಸ ಲೈವ್ ವರದಿ
ಮದ್ಯವರ್ಜನ ಶಿಬಿರ ಇದು ಕುಟುಂಬ ಕಟ್ಟುವ ಕಾರ್ಯಕ್ರಮ, ಹೆಣ್ಮಕ್ಕಳ ಕಣ್ಣೀರು ಒರೆಸುವ ಪವಿತ್ರ ಕಾರ್ಯಕ್ರಮ ಎಂದು ಜನಜಾಗೃತಿ ವೇದಿಕೆಯ ಚಿತ್ರದುರ್ಗ ಪ್ರಾದೇಶಿಕ ವ್ಯಾಪ್ತಿಯ ಯೋಜನಾಧಿಕಾರಿ ನಾಗರಾಜ್ ಹೇಳಿದರು.
ಕಳಸದಲ್ಲಿ ಜೂನ್ ತಿಂಗಳಲ್ಲಿ ನಡೆಯಲಿರುವ ಮದ್ಯವರ್ಜನ ಶಿಬಿರದ ಬಗ್ಗೆ ಬುಧವಾರ ಪೂರ್ವಭಾವಿ ಸಮಾಲೋಚನಾ ಸಭೆಯಲ್ಲಿ ಮಾತನಾಡಿದ ಅವರು ಮದ್ಯಪಾನ ಮತ್ತು ಮಾದಕ ವಸ್ತುಗಳ ಚಟ ದುಡಿಯುವ ವರ್ಗದ ಶತ್ರುವಾಗಿದೆ. ಒಂದು ವ್ಯಸನಿಯ ಕುಟುಂಬ ಪರಿವರ್ತನೆ ಮಾಡುವುದು ಮತ್ತು ದೇವಸ್ಥಾನದ ಜೀರ್ಣೋದ್ಧಾರ ಮಾಡುವುದು ಒಂದೇ..ಇದು ಒಂದು ಪುಣ್ಯದ ಕಾರ್ಯಕ್ರಮ ಇದರಲ್ಲಿ ತಾವುಗಳು ಕೈ ಜೋಡಿಸುವಂತೆ ಮನವಿ ಮಾಡಿದರು. ವೀರೇಂದ್ರ ಹೆಗ್ಗಡೆಯವರು ಜನಜಾಗೃತಿ ವೇದಿಕೆಯ ಮೂಲಕ ಸ್ವಾಸ್ಥ್ಯ ಸಮಾಜ ನಿರ್ಮಾಣ ಮಾಡಲು ಪಣತೊಟ್ಟಿದ್ದು ವ್ಯಸನಿಯ ಮನಪರಿವರ್ತನೆ ಅಲ್ಲದೆ, ಶಾಲಾ ಕಾಲೇಜುಗಳಲ್ಲಿ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮದ ಮೂಲಕ ವಿದ್ಯಾರ್ಥಿಗಳು, ಯುವಜನತೆ ದಾರಿ ತಪ್ಪದಂತೆ ಎಚ್ಚರ ವಹಿಸುವಂತೆ ಅನೇಕ ಕಾರ್ಯಕ್ರಮಗಳನ್ನು ಸಮಾಜಕ್ಕೆ ನೀಡಿದ್ದಾರೆ. ಇತ್ತೀಚಿನ ದಿನಗಳಲ್ಲಿ ಮದ್ಯ ವ್ಯಸನಿಗಳಿಂದ ಸಮಾಜದಲ್ಲಿ ಆಗುವಂಥ ದುರಂತಗಳು, ಕುಟುಂಬ ಮತ್ತು ಮಕ್ಕಳ ಮೇಲೆ ಕೆಟ್ಟ ಪರಿಣಾಮ ಬೀರುತ್ತಿದ್ದು, ಸಾಮಾಜಿಕ ಸಮಸ್ಯೆ ಆದ ಕಾರಣ ಸಮಾಜದ ಎಲ್ಲ ಗೌರವಾನ್ವಿತರು ಈ ಕಾರ್ಯಕ್ರಮದಲ್ಲಿ ತೊಡಗಿಸಿಕೊಳ್ಳುವಂತೆ ತಿಳಿಸಿದರು.
ಮದ್ಯವರ್ಜನ ಶಿಬಿರದ ಸಮಿತಿಗೆ ವ್ಯವಸ್ಥಾಪನಾ ಸಮಿತಿಯ ಗೌರವ ಅಧ್ಯಕ್ಷರಾಗಿ ಶ್ರೀ ವೆಂಕಟ ಸುಬ್ಬಯ್ಯ, ಅಧ್ಯಕ್ಷರಾಗಿ ಕೆ.ಸಿ ಧರಣೇಂದ್ರ, ಉಪಾಧ್ಯಕ್ಷರಾಗಿ ರಂಗನಾಥ್ ಭಟ್, ಶ್ರೀಧರ್ ಶೆಟ್ಟಿ, ರುದ್ರಯ್ಯ ಆಚಾರ್, ಪ್ರವೀಣ್ ಜೈನ್ ಬಲಿಗೆ, ಉμÁ ವಿಶ್ವನಾಥ್, ಎಂ.ಎ. ಶೇಷಗಿರಿ , ಕೆ.ಕೆ. ಬಾಲಕೃಷ್ಣ ಭಟ್, ರಂಗನಾಥ್, ಆಶಾಲತಾ ಜೈನ್, ಗೌರವ ಸಲಹೆಗಾರರಾಗಿ ಸುಜಯಾ ಸದಾನಂದ, ಬ್ರಹ್ಮದೇವ, ಕೀರ್ತಿ ಜೈನ್, ಗಜೇಂದ್ರ ಕೊಟ್ಟಿಗೆಹಾರ ಇವರನ್ನು ಸಭೆಯಲ್ಲಿ ಆಯ್ಕೆ ಮಾಡಲಾಯಿತು.
ಯೋಜನಾಧಿಕಾರಿಗಳಾದ ಸುರೇಶ್, ಶೌರ್ಯ ವಿಪತ್ತು ಘಟಕದ ಕ್ಯಾಪ್ಟನ್ ಬಿ.ಕೆ.ಮಹೇಶ್, ಮಾಸ್ಟರ್ ಅಜಿತ್, ಶೌರ್ಯ ಸ್ವಯಂ ಸೇವಕರು, ನವಜೀವನ ಸದಸ್ಯರು, ಒಕ್ಕೂಟದ ಸದಸ್ಯರು, ಮೇಲ್ವಿಚಾರಕರು ಆರೋಗ್ಯ ಸಹಾಯಕರು, ನವಜೀವನ ಪೆÇೀಷಕ ಸೇವಾ ಪ್ರತಿನಿಧಿಗಳು ಉಪಸ್ಥಿತರಿದ್ದರು.