ಕಳಸ ವೈವ್ ವರದಿ
ಸುಧೀಶ್ ಸುವರ್ಣ ಕಳಸ
ಸ್ವಾತಂತ್ರ್ಯ ಪೂರ್ವದಲ್ಲಿ ಕಳಸ-ಬಾಳೆಹೊನ್ನೂರು ರಸ್ತೆ ಮಧ್ಯ ಭದ್ರಾ ನದಿಗೆ ಕಟ್ಟಿದ ಹಳುವಳ್ಳಿ ಸೇತುವೆ ಶಿಥಿಲಾವಸ್ಥೆ ತಲುಪಿದೆ. ಸೇತುವೆ ಗುಣಮಟ್ಟ ಪರಿಶೀಲನೆ ನಡೆಸಿ ದುರಸ್ತಿಗೆ ವರದಿ ಸಲ್ಲಿಸಿದ್ದರೂ ಅನುದಾನ ಬಿಡುಗಡೆ ಆಗಿಲ್ಲ. ಹೀಗಾಗಿ ಪಿಡಬ್ಲ್ಯುಡಿ ಅಧಿಕಾರಿಗಳು ಕೈಚೆಲ್ಲಿ ಕುಳಿತಿದ್ದಾರೆ. ಈ ವರ್ಷ ಮಳೆಗಾಲದಲ್ಲಿ ಸೇತುವೆ ಮೇಲೆ ಉಸಿರು ಬಿಗಿಹಿಡಿದು ಸಂಚರಿಸುವಂತಿದೆ.
1941ರಲ್ಲಿ ನಿರ್ಮಿಸಿದ ಸೇತುವೆಯನ್ನು ಮೈಸೂರು ರಾಜ ಜಯಚಾಮರಾಜೇಂದ್ರ ಒಡೆಯರ್ ಉದ್ಘಾಟಿಸಿದ್ದರು. ಆದರೆ ಸೇತುವೆ ನಾಲ್ಕು ವರ್ಷಗಳಿಂದ ಶಿಥಿಲಗೊಂಡಿದೆ. ಸೇತುವೆಯ ಮೂರು ಆಧಾರ ಸ್ತಂಭಗಳು ಸಂಪೂರ್ಣ ಶಿಥಿಲಗೊಂಡು ಕಬ್ಬಿಣದ ರಾಡುಗಳು ಮೇಲೆದ್ದು ಬಂದಿವೆ. ಮಳೆಗಾಲದಲ್ಲಿ ನೀರಲ್ಲಿ ತೇಲಿ ಬರುವ ಮರದ ದೊಡ್ಡ ದಿಮ್ಮಿಗಳು ಹೊಡೆದು ಬಹಳಷ್ಟು ಹಾನಿಯಾಗಿದೆ. ಇದರಿಂದ ಸೇತುವೆ ಕುಸಿಯುವ ಸಾಧ್ಯತೆ ಹೆಚ್ಚಾಗಿದೆ.
ಕಳಸ-ಬಾಳೆಹೊನ್ನೂರು ಸಂಪರ್ಕಿಸುವ ಮುಖ್ಯರಸ್ತೆಯಾಗಿದೆ. ಅಲ್ಲದೆ ಮಂಗಳೂರು, ಕಾರ್ಕಳ. ಶೃಂಗೇರಿ, ಹೊರನಾಡು, ಶಿವಮೊಗ್ಗ ಸೇರಿದಂತೆ ಹಲವಾರು ಊರುಗಳನ್ನು ಸಂಪರ್ಕಿಸುವ ಮುಖ್ಯ ರಸ್ತೆ ಇದಾಗಿದೆ. ಪ್ರತಿನಿತ್ಯ ನೂರಾರು ಸರಕು ವಾಹನ, ಬಸ್ ಇತರ ವಾಹನಗಳು ಈ ಸೇತುವೆ ಮುಖಾಂತರ ಸಂಚರಿಸುತ್ತವೆ. ಈ ಸೇತುವೆ ಸಂಪರ್ಕ ಕಡಿತಗೊಂಡರೆ ವಾಹನ ಸಂಚಾರಕ್ಕೆ ತೀವ್ರ ತೊಂದರೆ ಉಂಟಾಗಲಿದೆ.
ಎರಡು ವರ್ಷಗಳ ಹಿಂದೆ ಯೋಜನೆ ಮತ್ತು ರಸ್ತೆಗಳ ಆಸ್ತಿ ನಿರ್ವಾಹಣಾ ಕೇಂದ್ರದಿಂದ ಇಂಜಿನಿಯರ್ಗಳ ತಂಡ ಸೇತುವೆಯ ಗುಣಮಟ್ಟ ಪರೀಕ್ಷಿಸಿತ್ತು. ಸೇತುವೆಯ ಎರಡು ಅಧಾರ ಸ್ತಂಭಗಳು ಅಪಾಯದಲ್ಲಿದೆ ಎನ್ನುವ ವರದಿ ಕೂಡ ನೀಡಲಾಗಿತ್ತು. ಆದರೆ ನಂತರದಲ್ಲಿ ಇಲಾಖೆ ಮಾತ್ರ ಇದನ್ನು ಮರೆತಂತಿದೆ.
ಅಲ್ಲದೆ ಆ ಸಂದರ್ಭದಲ್ಲಿ ಇದ್ದ ಲೋಕೋಪಯೋಗಿ ಇಲಾಖೆ ಇಂಜಿನಿಯರ್ ಮಂಜುನಾಥ್, ಹಳುವಳ್ಳಿ ಸೇತುವೆ ತುಂಬ ಶಿಥಿಲಗೊಂಡಿದೆ. ಸದ್ಯಕ್ಕೆ ಏನೂ ತೊಂದರೆ ಇಲ್ಲವಾದರೂ ಐದಾರೂ ವರ್ಷದ ನಂತರ ಹೊಸ ಸೇತುವೆಯ ಅಗತ್ಯ ಇದೆ. ಅದಕ್ಕಾಗಿ ಹೊಸ ಸೇತುವೆಗೆ ಅನುದಾನಕ್ಕೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸುತ್ತೇವೆ ಎಂದು ತಿಳಿಸಿದ್ದರು. ಇದಾಗಿ ಎರಡು ವರ್ಷಗಳಾದರೂ ಸೇತುವೆ ದುರಸ್ತಿಯಾಗಲಿ ಅಥವಾ ಹೊಸ ಸೇತುವೆಗೆ ಅನುದಾನವಾಗಲಿ ಬಿಡುಗಡೆಗೊಂಡಿಲ್ಲ.
ಕಳಸ ತಾಲೂಕಿನಲ್ಲಿ ಭದ್ರಾ ನದಿಗೆ, ಕೋಟೆಹೊಳೆ, ಹೆಬ್ಬಾಳೆ, ಹೊಸೂರು ಎಂಬ ಪ್ರದೇಶಗಳಲ್ಲಿ ಸೇತುವೆಗಳನ್ನು ನಿರ್ಮಾಣ ಮಾಡಲಾಗುತ್ತಿದೆ. ಆದರೆ ಅಗತ್ಯವಾಗಿ ಬೇಕಾದ ಹಳುವಳ್ಳಿ ಸೇತುವೆಯನ್ನು ಮಾತ್ರ ಮರೆತಂತಿದೆ. ಪಿಡಬ್ಲ್ಯುಡಿ ಹೇಗಾದರೂ ದುರಸ್ಥಿ ಮಾಡದಿದರೆ ಅಪಾಯ ನಿಶ್ಚಿತ