ಕಳಸ ಲೈವ್ ವರದಿ
* ಸುಧೀಶ್ ಸುವರ್ಣ ಕಳಸ
ಸ್ವಚ್ಛ ಭಾರತ ಅಭಿಯಾನದಲ್ಲಿ ದೇಶವನ್ನು ಸ್ವಚ್ಛವಾಗಿಡಬೇಕೆಂಬ ಪ್ರಯತ್ನ ನಿರಂತರವಾಗಿದ್ದರೂ ಕೆಲವರ ಉದಾಸೀನ ಧೋರಣೆಯಿಂದ ನದಿಗಳೂ ಕಲುಷಿತಗೊಳ್ಳುತ್ತಿವೆ. ಪಂಚತೀರ್ಥಗಳನ್ನು ಒಳಗೊಂಡ ಭದ್ರಾ ನದಿ ದಡದಲ್ಲಿ ಅಪಾಯಕಾರಿ ಪ್ಲಾಸ್ಟಿಕ್ ಸೇರಿದಂತೆ ಎಲ್ಲ ತ್ಯಾಜ್ಯ ಸುರಿಯುವ ಮೂಲಕ ಕುಡಿಯುವ ನೀರಿಗೆ ಹಾನಿಕಾರಕ ಅಂಶ ಸೇರಿಸುತ್ತಿದ್ದಾರೆ.
ಭದ್ರಾ ನದಿಯ ತಟಗಳು ಕೋಟಿ ತೀರ್ಥ, ವಸಿಷ್ಟ ತೀರ್ಥ, ಅಂಬಾ ತೀರ್ಥ, ನಾಗ ತೀರ್ಥ ಹಾಗೂ ರುದ್ರ ತೀರ್ಥ ಸೇರಿ ಪಂಚ ಪಂಚತೀರ್ಥ ಗಳಾಗಿವೆ. ಒಂದೊಂದು ತೀರ್ಥವೂ ತನ್ನದೇ ಆದ ಪಾವಿತ್ರ್ಯ ಪಡೆದಿವೆ. ಆದರೆ ನದಿಯ ತಟದಲ್ಲಿ ತ್ಯಾಜ್ಯ ಸುರಿದು ಪರಿಸರದ ಅಂದ ಹಾಳು ಮಾಡುವುದಲ್ಲದೆ, ಕುಡಿಯುವ ನೀರನ್ನು ಮಲಿನಗೊಳಿಸಲಾಗುತ್ತಿದೆ.
ಕಳಸ ಸಮೀಪದ ಕೋಟೆ ಹೊಳೆಯ ಭದ್ರಾ ನದಿಯ ತಟ ಪಂಚ ತೀರ್ಥಗಳಲ್ಲಿ ಒಂದಾಗಿದೆ. ಆದರೆ ನದಿಯ ಶ್ರೇಷ್ಠತೆ ಲೆಕ್ಕಿಸದೆ ಎಲ್ಲ ತರಹದ ಪ್ಲಾಸ್ಟಿಕ್ ತ್ಯಾಜ್ಯ, ಹಳೇ ಮನೆಯ ತ್ಯಾಜ್ಯ ಸುರಿಯಲಾಗಿದೆ. ಜತೆಗೆ ಊಟದ ಬಳಿಕ ಉಳಿದ ತ್ಯಾಜ್ಯವನ್ನೂ ತಂದು ನದಿಗೆ ಎಸೆಯಲಾಗುತ್ತಿದೆ. ಸಮಾರಂಭಗಳಲ್ಲಿ ಬಳಸಿದ ಪ್ಲಾಸ್ಟಿಕ್ ಬಾಟಲಿಗಳನ್ನು ನದಿಯ ದಡದಲ್ಲಿ ಸುರಿದಿರುವುದನ್ನು ಗಮನಿಸಿದರೆ ಜವಾಬ್ದಾರಿಯೇ ಇಲ್ಲದವರು ನಮ್ಮ ನಡುವೆ ಇರುವುದಕ್ಕೆ ಅಸಹ್ಯ ಹುಟ್ಟಿಸುತ್ತದೆ.
ಭದ್ರಾ ನದಿಯ ವಸಿಷ್ಠ ತೀರ್ಥ ಪುರಾಣಗಳಲ್ಲಿ ಅತ್ಯಂತ ಶ್ರೇಷ್ಠ ಸ್ಥಳ. ಇಲ್ಲಿ ನದಿಗೆ ನಿರ್ಮಿಸಿದ ತೂಗುಸೇತುವೆ ಕಣ್ಮನ ಸೆಳೆಯುತ್ತದೆ. ಇದನ್ನು ವೀಕ್ಷಿಸಲು ನಿತ್ಯ ನೂರಾರು ಪ್ರವಾಸಿಗರು ಆಗಮಿಸುತ್ತಾರೆ. ತೂಗುಸೇತುವೆ ಅಂದವೇ ಈಗ ನದಿಗೆ ಮಾರಕವಾಗಿದೆ. ಪ್ರವಾಸಿಗರು ಹಾಗೂ ಸ್ಥಳೀಯರು ತುಗುಸೇತುವೆ ಪಕ್ಕದಲ್ಲೇ ಮದ್ಯಪಾನ ಮಾಡುತ್ತಾರೆ. ಮದ್ಯದ ಖಾಲಿ ಬಾಟಲಿಗಳನ್ನು, ಪ್ಲಾಸ್ಟಿಕ್ ಬಾಟಲಿಗಳನ್ನು ಎಸೆದು ಇಲ್ಲಿಯ ಪಾವಿತ್ರ್ಯಕ್ಕೆ ಧಕ್ಕೆಯನ್ನುಂಟು ಮಾಡುತ್ತಿದ್ದಾರೆ. ನದಿಯ ಇನ್ನೊಂದು ಪ್ರಮುಖ ಸ್ಥಳ ಹೆಬ್ಬಾಳೆ. ಹೊರನಾಡಿಗೆ ಹೋಗುವ ಭಕ್ತಾದಿಗಳು ಹೆಬ್ಬಾಳೆ ಸೇತುವೆ ದಾಟಬೇಕು. ಇಲ್ಲಿ ಸಾಗುವ ಯಾತ್ರಿಗಳು ನದಿಯಲ್ಲಿ ಸ್ನಾನ ಮಾಡಿ ಹೋಗುತ್ತಾರೆ. ಆದರೆ ವಾಹನಗಳನ್ನೂ ನದಿಗೆ ಇಳಿಸಿ ತೊಳೆಯುತ್ತಾರೆ. ತ್ಯಾಜ್ಯವನ್ನು ನದಿಗೆ ಎಸೆದು ನೀರನ್ನು ಮಲಿನಗೊಳಿಸುತ್ತಿದ್ದಾರೆ. ನದಿಯ ದಡದಲ್ಲಿ ಪ್ರವಾಸಿಗರು ಬಹಿರ್ದೆಸೆಗೆ ಹೋಗಿ ಕಲುಷಿತಗೊಳಿಸುತ್ತಿದ್ದಾರೆ.
ಗ್ರಾಮ ಪಂಚಾಯಿತಿ ಸ್ವಚ್ಛತೆಗೆ ಮುತುವರ್ಜಿವಹಿಸಿದೆ. ಇದಕ್ಕಾಗಿಯೇ ಟಿಪ್ಪರ್ ಒಂದನ್ನು ಖರೀದಿಸಿ ಅದನ್ನು ಪ್ರತಿ ನಿತ್ಯ ಮನೆ ಬಾಗಿಲಿಗೆ ಕಳುಹಿಸಿ ತ್ಯಾಜ್ಯ ಸಂಗ್ರಹಿಸಲಾಗುತ್ತಿದೆ. ಪ್ರತ್ಯೇಕ ಸ್ಥಳದಲ್ಲಿ ತ್ಯಾಜ್ಯ ವಿಲೇವಾರಿ ಮಾಡಲಾಗುತ್ತಿದೆ. ಮದುವೆ ಇತರ ಶುಭ ಸಮಾರಂಭದ ತ್ಯಾಜ್ಯ, ಇತರ ತ್ಯಾಜ್ಯ ಹಾಕಲು ಅನುಮತಿ ನೀಡಲಾಗುತ್ತಿದೆ. ಸ್ವಚ್ಛತೆಗಾಗಿ ಲಕ್ಷಗಟ್ಟಲೆ ಹಣ ವ್ಯಯ ಮಾಡಲಾಗುತ್ತಿದೆ. ಆದರೆ ಪ್ರವಾಸಿಗರ ಜತೆ ಸ್ಥಳೀಯರು ತ್ಯಾಜ್ಯವನ್ನು ನದಿಗೆ ಸುರಿದು ಮಲಿನಗೊಳಿಸುತ್ತಿರುವುದು ದುರಾದೃಷ್ಟ.