ಕಳಸ ಲೈವ್ ವರದಿ
ಹೊರನಾಡು-ಶೃಂಗೇರಿಗೆ ತೆರಳುವ ರಸ್ತೆಯ ಮೆಣಸಿನಹಾಡ್ಯ ಎಂಬಲ್ಲಿ ಸೇತುವೆಯೊಂದು ಶಿಥಿಲಗೊಂಡು ಆರು ವರ್ಷ ಕಳೆದರೂ ಕೂಡ ದುರಸ್ಥಿ ಮಾಡದೆ ಇರುವ ಹಿನ್ನಲೆಯಲ್ಲಿ ರಸ್ತೆ ಸಂಪರ್ಕ ಕಡಿತಗೊಳ್ಳುವ ಭೀತಿ ಎದುರಾಗಿದೆ.
2019ರಲ್ಲಿ ಸುರಿದ ಮಹಾ ಮಳೆಗೆ ಮೆಣಸಿನಹಾಡ್ಯದಲ್ಲಿ ಸೇತುವೆಯೊಂದು ಶಿಥಿಲಗೊಂಡಿತ್ತು.ಈ ಬಗ್ಗೆ ಸ್ಥಳಿಯ ಗ್ರಾಮ ಪಂಚಾಯಿತಿ ಹಾಗೂ ಗ್ರಾಮಸ್ಥರಿಂದ ಸಂಬಂದಪಟ್ಟವರಿಗೆ ಶೀಘ್ರ ದುರಸ್ಥಿಗಾಗಿ ಮನವಿಯನ್ನು ಸಲ್ಲಿಸಲಾಗಿತ್ತು. ಆದರೆ ಸೇತುವೆ ಶಿಥಿಲಗೊಂಡು ಆರು ವರ್ಷ ಸಂದರೂ ಕೂಡ ಈ ಸೇತುವೆಯ ದುರಸ್ಥಿಗೆ ಯಾರೂ ದೊಡ್ಡ ಮನಸ್ಸು ಮಾಡದೆ ಇರುವುದು ವಿಪರ್ಯಸವೇ ಸರಿ. ಪರಿಣಾಮ ಈ ಸೇತುವೆ ಕುಸಿಯುವ ಹಂತಕ್ಕೆ ತಲುಪಿದ್ದಲ್ಲದೆ ವಾಹನ ಸವಾರರು ಸ್ವಲ್ಪ ಯಾಮಾರಿದರೂ ಕೂಡ ದೊಡ್ಡ ಅನಾಹುತವನ್ನೆ ಎದುರಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.
ನಕ್ಸಲ್ ಪೀಡಿತ ಪ್ರದೇಶವಾದ ಮೆಣಸಿನಹಾಡ್ಯದಲ್ಲಿ 2005ರಲ್ಲಿ ನಕ್ಸಲ್ ಮುಖಂಡ ಸಾಕೇತ್ ರಾಜನ್ ನನ್ನು ಇದೇ ಮೆಣಸಿನಹಾಡ್ಯದಲ್ಲಿ ಎನ್ಕೌಂಟರ್ ಮಾಡಲಾಗಿತ್ತು.ಈ ಸಂದರ್ಭದಲ್ಲಿ ಮೆಣಸಿನಹಾಡ್ಯ ರಸ್ತೆಯನ್ನು ಅಭಿವೃದ್ಧಿಗೊಳಿಸಿ ಅಲ್ಲಿ ಗಿರಿಜನ ಆಶ್ರಮ ಶಾಲೆ ಸೇರಿದಂತೆ ಆ ಪ್ರದೇಶಕ್ಕೆ ಸಾಕಷ್ಟು ಮೂಲಭೂತ ಸೌಲಭ್ಯಗಳನ್ನು ನೀಡಲಾಗಿತ್ತು.
ಈ ರಸ್ತೆಯ ಅಭಿವೃದ್ಧಿಯಿಂದಾಗಿ ಬಲಿಗೆ, ಹೊರನಾಡು, ಕೊಗ್ರೆ, ಗೌರಿಕಟ್ಟೆ ಕಾಲೋನಿ, ಕಲ್ಲುಗುಡ್ಡೆ, ಸಾತ್ಕುಡಿಗೆ ಮುಂತಾದ ಗ್ರಾಮಗಳಲ್ಲಿ ವಾಸಿಸುವ ನೂರಾರು ಕುಟುಂಬಗಳಿಗೆ ಸಾಕಷ್ಟು ಉಪಯೋಗವಾಯ್ತು. ಈ ರಸ್ತೆಯಲ್ಲಿ ವಾಹನಗಳು ಓಡಾಟ ಪ್ರಾರಂಭವಾದವು ಬಸ್ಸು ಸಂಚಾರವೂ ಆಯಿತು.ಅಲ್ಲದೆ ಹೊರನಾಡು-ಶೃಂಗೇರಿಗೆ ತೆರಳಲು ಬಹು ಹತ್ತಿರದ ರಸ್ತೆ ಸಂಪರ್ಕವೂ ಆಯಿತು. ಇದರಿಂದ ಪ್ರತಿ ನಿತ್ಯ ನೂರಾರು ವಾಹನಗಳು ಇದೇ ರಸ್ತೆಯನ್ನು ಅವಲಂಬಿತಗೊಂಡವು.ಅಲ್ಲದೆ ಈ ಪ್ರದೇಶ ಅಭಿವೃದ್ಧಿ ಆಗುವುದರ ಜೊತೆಗೆ ನಕ್ಸಲ್ ಚಟುವಟಿಕೆಯೂ ಕಡಿಮೆಯಾಯಿತು.
2012ರಲ್ಲಿ ನಕ್ಸಲ್ ಪೀಡಿತ ಪ್ರದೇಶಗಳ ಅಭಿವೃದ್ಧಿಗಾಗಿ 5 ಕೋಟಿ ಅನುದಾನ ಮಂಜೂರಾಗಿತ್ತು.ನಂತರಲ್ಲಿ ಯಾವುದೇ ರೀತಿಯ ಅನುದಾನ ಮಂಜುರಾಗದೆ ಇರುವುದರಿಂದ ನಕ್ಸಲ್ ಪೀಡಿತ ಬಹುತೇಕ ಗ್ರಾಮಗಳ ರಸ್ಥೆಗಳು ಶಿಥಿಲಾವಸ್ಥೆ ತಲುಪಿದೆ.