ಕಳಸ ಲೈವ್ ವರದಿ
ಕಳಸದಲ್ಲಿ ಹುಟ್ಟಿ ಬೆಳೆದು “ಕೆಂಡ ಸಂಪಿಗೆ” ಸಿನಿಮಾದ ಮೂಲಕ ಸಿನೀಮಾರಂಗಕ್ಕೆ ಹೆಜ್ಜೆ ಇಟ್ಟು ಸಕ್ಸೆಸ್ ಪುಲ್ ನಟಿಯಾಗಿ ಹೊರಹೊಮ್ಮಿ ಸಾಕಷ್ಟು ಸಿನಿಮಾಗಳಲ್ಲಿ ನಾಯಕಿ ನಟಿಯಾಗಿ ಹೆಸರು ಮಾಡಿದ ಮಾನ್ವಿತ ಕಾಮತ್ ಮೇ 1ರಂದು ಕಳಸದಲ್ಲಿಯೇ ಹಸೆಮಣೆ ಏರುತ್ತಿದ್ದಾರೆ.
ಕಳಸ ಕೆನರಾಬ್ಯಾಂಕ್ ನಲ್ಲಿ ನೌಕರಿ ಮಾಡಿಕೊಂಡಿದ್ದ ಹರೀಶ್ ಕಾಮತ್ ಮತ್ತು ಅಂಚೆಕಛೇರಿಯಲ್ಲಿ ಪಿಗ್ಮಿ ಕಲೆಕ್ಟರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಸುಜಾತ ಕಾಮತ್ ಅವರ ಒಬ್ಬರೇ ಮಗಳು ಮಾನ್ವಿತಾ ಕಾಮತ್(ಶ್ವೇತಾ ಕಾಮತ್). ಕಳಸದ ಜೆಇಎಂ ಆಂಗ್ಲ ಮಾಧ್ಯಮದಲ್ಲಿ 10ನೇ ತರಗತಿ ವರೆಗೆ ವ್ಯಾಸಂಗ ಮಾಡಿ, ನಂತರ ಮಂಗಳೂರಿನಲ್ಲಿ ತನ್ನ ವ್ಯಾಸಂಗದ ಜೊತೆಗೆ ರೆಡಿಯೋ ಜಾಕಿ(ಆರ್ ಜೆ) ಯಾಗಿದ್ದ ಶ್ವೇತಾ ಕಾಮತ್ ಸಿನಿಮಾ ರಂಗಕ್ಕೆ ಕಾಲಿರಿಸಿ ತನ್ನ ಹೆಸರನ್ನು ಮಾನ್ವಿತಾ ಕಾಮತ್ ಆಗಿ ಬದಲಾಯಿಸಿಕೊಂಡಿದ್ದರು.
ದುನಿಯಾ ಸೂರಿ ನಿರ್ದೇಶನದ ʻಕೆಂಡಸಂಪಿಗೆʼ ಚಿತ್ರದಲ್ಲಿ ನಾಯಕಿಯಾಗಿ ಚಿತ್ರರಂಗಕ್ಕೆ ಬಲಗಾಲಿಟ್ಟು ಮೊದಲ ಚಿತ್ರದಲ್ಲಿಯೇ ಸೈಮಾ ಪ್ರಶಸ್ತಿ ಪಡೆದು, ಬಳಿಕ ಶಿವಣ್ಣನ ʻಟಗರುʼ ಸಿನಿಮಾದಲ್ಲಿ ಬಣ್ಣ ಹಚ್ಚಿ ʻಟಗರು ಪುಟ್ಟಿʼಯಾಗಿ ಕರುನಾಡ ಪ್ರೇಕ್ಷಕರ ಮನ ಗೆದ್ದರು. ಕನಕ, ರಿಲ್ಯಾಕ್ಸ್ ಸತ್ಯ, ಶಿವ143, ತಾರಕಾಸುರ, ಇಂಡಿಯಾ ವರ್ಸ್ಸ್ ಇಂಗ್ಲೆಂಡ್, ಅಪ್ಪ ಐ ಲವ್ ಯು, ಚೌಕ ಮುಂತಾದ ಸಿನಿಮಾಗಳಲ್ಲಿ ನಟಿಸಿದ್ದು, ಮರಾಠಿಯಲ್ಲಿ ನಿರ್ಮಾಣವಾಗಿರುವ ಹ್ಯಾಪಿಲೀ ಮ್ಯಾರಿಡ್, ಬ್ಯಾಡ್, ರಾಜಸ್ಥಾನ್ ಡೈರಿಸ್ ಚಿತ್ರಗಳು ಬಿಡುಗಡೆ ಆಗಬೇಕಾಗಿದೆ.
ಈ ಸುಂದರಿ ಈಗ ಹಸೆಮಣೆ ಏರಲು ರೆಡಿಯಾಗಿದ್ದಾರೆ. ಇನ್ನು ವಿಶೇಷ ಅಂದರೆ ಮಾನ್ವಿತಾ ಅಮ್ಮ ಹುಡುಕಿದ ಹುಡುಗನನ್ನೇ ವರಿಸುತ್ತಿದ್ದಾರೆ.
ಕೆಲ ವರ್ಷಗಳ ಹಿಂದೆ ತಂದೆಯನ್ನು ಕಳೆದುಕೊಂಡಿದ್ದ ಮಾನ್ವಿತ, ಕಳೆದ ವರ್ಷ ತಾಯಿಯನ್ನು ಕಳೆದುಕೊಂಡಿದ್ದರು. ಮಾನ್ವಿತಾ ಕಾಮತ್ ಅವರ ತಾಯಿ ಸುಜಾತಾ ಕಾಮತ್ ಮಗಳ ಮದುವೆ ನೋಡಬೇಕು ಎಂದು ಕನಸು ಕಂಡಿದ್ದರು. ಆದರೆ ಅದಾಗಲೇ ತಾಯಿ ಕಿಡ್ನಿ ವೈಫಲ್ಯದಿಂದಾಗಿ ಬಾರದ ಲೋಕಕ್ಕೆ ಹೋಗಿ ಬಿಟ್ಟರು. ತಾವು ಬದುಕಿದ್ದಾಗಲೇ ಮಗಳಿಗೆಂದು ಗಂಡು ಹುಡುಕುವ ಕೆಲಸದಲ್ಲೂ ತೊಡಗಿಸಿಕೊಂಡಿದ್ದರು. ಹೀಗಿರುವಾಗಲೇ ಅರುಣ್ ಕುಮಾರ್ ಅವರ ತಾಯಿ ಶಾಲಿನಿ ಅವರ ಜತೆ ಮಾತನಾಡಿ ವಾಟ್ಸ್ಆ್ಯಪ್ ಮೂಲಕ ಮಾನ್ವಿತಾ ಅವರ ಫೋಟೊ ರವಾನಿಸಿದ್ದರು. ಈಗ ಮಾನ್ವಿತಾ ಅವರು ಅರುಣ್ ಜತೆ ಮದುವೆಗೆ ಸಜ್ಜಾಗಿದ್ದಾರೆ.
ಅರುಣ್ ಕುಮಾರ್ ಯಾರು?
ಸಂಗೀತ ಕ್ಷೇತ್ರದಲ್ಲಿ ಹೆಸರು ಮಾಡಿರುವ ಮ್ಯೂಸಿಕ್ ಪ್ರೋಡ್ಯೂಸರ್ ಆಗಿ ಗುರುತಿಸಿಕೊಂಡಿರುವ ಅರುಣ್ ಕುಮಾರ್ ಅವರ ಜತೆಗೆ ಮಾನ್ವಿತಾ ಮದುವೆ ಆಗುತ್ತಿದ್ದಾರೆ. ಮಾನ್ವಿತಾ ಕಾಮತ್ ಹಾಗೂ ಅರುಣ್ ಕುಮಾರ್ ಕೊಂಕಣಿ ಸಂಪ್ರದಾಯದಂತೆ (ಜಿಎಸ್ಬಿ ಸಂಪ್ರದಾಯದಂತೆ) ಮೇ 1ಕ್ಕೆ ಕಳಸದ ಜಿಎಸ್ ಬಿ ಸಭಾ ಭವನದಲ್ಲಿ ಹೊಸಬಾಳಿಗೆ ಹೆಜ್ಜೆ ಇಡಲಿದ್ದಾರೆ. ಅದಕ್ಕೂ ಮುನ್ನ ಏಪ್ರಿಲ್ 29ಕ್ಕೆ ಮೆಹಂದಿ, ಏಪ್ರಿಲ್ 30 ಅರಿಶಿನ ಶಾಸ್ತ್ರ ಜರುಗಿದರೆ, ಏಪ್ರಿಲ್ 30ರಂದು ಸಂಗೀತ ಕಾರ್ಯಕ್ರಮಗಳು ನಡೆಯಲಿವೆ.