ಸುದೀಶ್ ಸುವರ್ಣ, ಕಳಸ
ಕಳಸ ಲೈವ್ ವರದಿ
ಸರ್ಕಾರಿ ಅಂಗನವಾಡಿಗಳೆಂದರೆ ಮೂಗು ಮುರಿಯುವವರೇ ಹೆಚ್ಚು. ಬಹುತೇಕ ಅಂಗನವಾಡಿಗಳು ಹಳೇ ಕಟ್ಟಡದಲ್ಲಿರುತ್ತವೆ, ಅವ್ಯವಸ್ಥೆಯಿಂದ ಕೂಡಿರುತ್ತವೆ ಎಂಬುದು ಸಹಜ ಆರೋಪ. ಆದರೆ ತಾಲೂಕಿನ ಕಲ್ಲುಬಾವಿ ಅಂಗನವಾಡಿ ಮಾತ್ರ ಮಾದರಿಯಾಗಿ ರೂಪುಗೊಂಡಿದೆ.
ಕಳಸ ಗ್ರಾಪಂ ಕಲ್ಲುಬಾವಿ ಅಂಗನವಾಡಿ ಕಾರ್ಯಕರ್ತೆ ಸರೋಜಾ ಅತ್ಯಂತ ಕಾಳಜಿಯಿಂದ ಅಂಗನವಾಡಿಯನ್ನು ಮಾದರಿಯನ್ನಾಗಿಸಿದ್ದಾರೆ. ಪಾಲಕರು, ಊರಿನ ಜನರ ಸಹಕಾರದಿಂದ ಸೌಲಭ್ಯ ಕಲ್ಪಿಸಿದ್ದಾರೆ. ಆಟಿಕೆಗಳು, ಕಲಿಕಾ ಸಾಮಗ್ರಿಗಳು, ಪೀಠೋಪಕರಣ ಸೇರಿದಂತೆ ಅಗತ್ಯ ಸಾಮಗ್ರಿಗಳನ್ನು ಅಂಗನವಾಡಿಯಲ್ಲಿ ಸಂಗ್ರಹಿಸಿರುವುದರಿಂದ ಮಕ್ಕಳನ್ನು ಬರ ಸೆಳೆಯುತ್ತಿದೆ. ಉತ್ತಮ ಕಲಿಕೆ ಜತೆಗೆ ಗುಣಮಟ್ಟದ ಆಹಾರವನ್ನು ಮಕ್ಕಳಿಗೆ ನೀಡಲಾಗುತ್ತಿದೆ. ಆ ಮೂಲಕ ಅಂಗನವಾಡಿ ಮಕ್ಕಳಿಗೆ ಮೆಚ್ಚುಗೆಯಾಗಿದೆ. ನೃತ್ಯ, ಹಾಡು, ಇಂಗ್ಲಿμï ರೈಮ್ಸ್, ಅಕ್ಷರಮಾಲೆ, ಜಾರುಬಂಡಿ, ಗೋಡೆಗಳ ಮೇಲಿನ ಕಾರ್ಟೂನ್ ಲೋಕಕ್ಕೆ ಮಕ್ಕಳು ಮಾರು ಹೋಗಿದ್ದಾರೆ. ಸರೋಜಾ ಈ ಅಂಗನವಾಡಿಯಲ್ಲಿ ಹದಿನೈದು ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದಾರೆ. ಇವರು ಅಂಗನವಾಡಿಗೆ ಬರುವಾಗ 5 ಮಕ್ಕಳಿದ್ದರು. ಈಗ ಬರೋಬ್ಬರಿ 40 ಮಕ್ಕಳು ಇಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಇಲ್ಲಿಗೆ ಬರುವ ಮಕ್ಕಳಿಗೆ ಆರಂಭಿಕ ಶಿಕ್ಷಣ, ಶಿಸ್ತು, ಆಟಿಕೆಗಳು, ಸಮಯಕ್ಕೆ ಸರಿಯಾಗಿ ನೀಡುವ ಹಾಲು, ಮೊಟ್ಟೆ, ಕಿಚಡಿ, ಅನ್ನ-ಸಾಂಬಾರು, ಮಿಲೆಟ್ ಹೆಲ್ತ್ ಪೌಡರ್, ಪುಷ್ಟಿ ಲಡ್ಡು, ಜಂತು ಹುಳದ ಮಾತ್ರೆ, ವಿಟಮಿನ್ ಎ ದ್ರಾವಣ, ಮಕ್ಕಳ ಜನ್ಮದಿನಾಚರಣೆ, ಗರ್ಭಿಣಿಯರಿಗೆ ಸೀಮಂತ ಶಾಸ್ತ್ರ, ತಾಯಂದಿರ ಸಭೆ, ಬಾಲಮೇಳ ಕಾರ್ಯಕ್ರಮಗಳಿಂದ ಮಕ್ಕಳನ್ನು ಇದೇ ಅಂಗನವಾಡಿಗೆ ಸೇರಿಸಬೇಕು ಎಂದು ಪಾಲಕರು ಸರತಿ ಸಾಲಿನಲ್ಲಿ ನಿಲ್ಲುತ್ತಾರೆ.
ಒಬ್ಬ ಶಿಕ್ಷಕಿ ಮನಸ್ಸು ಮಾಡಿದರೆ ಸರ್ಕಾರಿ ಸೌಲಭ್ಯಕ್ಕೆ ಸೀಮಿತವಾಗದೆ ಊರಿನ ಜನರು, ಪಾಲಕರ ನೆರವು ಪಡೆದು ಮಾದರಿ ಅಂಗನವಾಡಿಯನ್ನು ನಿರ್ಮಾಣ ಮಾಡಬಹುದು ಎಂಬುದಕ್ಕೆ ಕಲ್ಲುಬಾವಿ ಅಂಗನವಾಡಿ ಉತ್ತಮ ಉದಾಹರಣೆ. ಅಂಗನವಾಡಿ ಶಿಕ್ಷಣದ ತಳಹದಿ, ಗ್ರಾಮೀಣ ಭಾಗದಲ್ಲಿ ಇಂಥ ಅಂಗನವಾಡಿ ಇರುವುದರಿಂದ ಬಡ ಜನರ ಮಕ್ಕಳಿಗೆ ಅತ್ಯುಪಯುಕ್ತವಾಗಿದೆ..
ಕಲ್ಲುಬಾವಿ ಅಂಗನವಾಡಿ ಶಿಕ್ಷಕಿ ಸರೋಜಾ, ಸಹಾಯಕಿ ನಿರ್ಮಲಾ ಅವರ ಮಕ್ಕಳಂತೆ ಕೇಂದ್ರಕ್ಕೆ ಬರುವ ಚಿಣ್ಣರನ್ನು ಪೆÇೀಷಿಸುತ್ತಿದ್ದಾರೆ. ಅಂಗನ ವಾಡಿಯಲ್ಲಿ ಪೌಷ್ಟಿಕ ಆಹಾರ, ಸ್ವಚ್ಛತೆ ಹಾಗೂ ಮಕ್ಕಳನ್ನು ವಿವಿಧ ಚಟುವಟಿಕೆಗಳೊಂದಿಗೆ ಕ್ರಿಯಾಶೀಲರನ್ನಾಗಿ ಮಾಡುವಲ್ಲಿ ಶ್ರಮವಹಿಸಿದ್ದಾರೆ. ಪ್ರತಿನಿತ್ಯ ಮಕ್ಕಳು ಅಂಗನ ವಾಡಿಗೆ ಆಗಮಿಸುವುದರಿಂದ ಹಿಡಿದು ಮನೆಗೆ ಹಿಂದಿರುಗುವ ವರೆಗೂ ಕಾಳಜಿ ವಹಿಸುತ್ತಾರೆ. ಪ್ರತಿ ಮಗುವಿನ ಆರಂಭದ ಶಿಕ್ಷಣಕ್ಕೆ ಬುನಾದಿಯಾಗಿದ್ದಾರೆ ಎಂದು ನಿಧಿ ವಿ ಶೆಟ್ಟಿ ಹೇಳುತ್ತಾರೆ.
ಸೇವೆಗೆ ಒಲಿದ ಪ್ರಶಸ್ತಿ
ಅಂಗನವಾಡಿ ಅಭಿವೃದ್ಧಿಗೆ ಕಾರಣೀ ಭೂತರಾದ ಕಾರ್ಯಕರ್ತೆ ಸರೋಜಾ ಅವರಿಗೆ ರಾಜ್ಯ ಪ್ರಶಸ್ತಿ ಲಭಿಸಿದೆ. ಇವರನ್ನು ರಾಜ್ ಕನ್ನಡ ಸಂಘ.ಅನ್ನಪೂರ್ಣೇಶ್ವರಿ ಮಹಿಳಾ ಮಂಡಳಿ, ಸಂಗೀತಾ ಕಲಾವೃಂದ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಕರ್ನಾಟಕ ರಕ್ಷಣಾ ವೇದಿಕೆ, ಆಟೋ ಚಾಲಕರ ಸಂಘ, ಕಳಸ ಜೆಸಿಐ, ರೋಟರಿ ಸಂಸ್ಥೆ, ಕಲ್ಮಕ್ಕಿ ಬಾಲಗಣಪತಿ ಸೇವಾ ಸಮಿತಿ, ಪಾಲಕರಿಂದ ಸನ್ಮಾನಿಸಲಾಗಿದೆ.