ಕಳಸ ಲೈವ್ ವರದಿ
ಇಲ್ಲಿಯ ಮಟ್ಟಿಗೆ ಆ ಹೆಸರೇ ಒಂದು ಕಾರ್ಣಿಕ ಶಕ್ತಿ. ಭಕ್ತಿಯಿಂದ ಆ ಹೆಸರು ಕೂಗಿದರೆ ಎಂಥಾ ಸಂಕಷ್ಟಕ್ಕೂ ಕ್ಷಣಾರ್ಧದಲ್ಲಿ ಪರಿಹಾರ ಸಿಕ್ಕ ಉದಾಹರಣೆಯಿದೆ ಯಾವುದೇ ವಸ್ತುಗಳು ಕಳೆದು ಹೋದರೂ ಕೂಡ ಭಕ್ತರು ಕರೆಯುವುದೇ ಆ ದೈವದ ಹೆಸರು. ಶತಮಾನಗಳಿಂದಲೂ ದೈವೀ ಶಕ್ತಿಯ ದರ್ಶನ ಮಾಡಿಸುತ್ತಿರುವ ಆ ನಂಬಿಕೆಯ ದೈವವೇ ಕುಂಬಳಡಿಕೆ ಸ್ವಾಮಿ ಕೊರಗಜ್ಜ.
ಈ ಭಾಗದ ಅದೆಷ್ಟೋ ಜನ ತಮ್ಮ ವಸ್ತುಗಳು ಕಾಣೆಯಾದರೆ ಮೊದಲ ಪೊಲೀಸ್ ಠಾಣೆಯ ಮೆಟ್ಟಿಲು ಹತ್ತುವುದಿಲ್ಲ. ಬದಲಾಗಿ ತಾವಿದ್ದ ಜಾಗದಲ್ಲೇ ಕಾರ್ಣಿಕ ಪುರುಷ ಕೊರಗಜ್ಜನ ನೆನೆದು ಭಕ್ತಿಯಿಂದ ಪ್ರಾರ್ಥಿಸಿಕೊಳ್ಳುತ್ತಾರೆ. ಇಷ್ಟಾದರೆ ಸಾಕು ತಾವು ಕಳೆದುಕೊಂಡ ವಸ್ತುಗಳು ಮತ್ತೆ ಕೈ ಸೇರುವುದು ಸೂರ್ಯನಷ್ಟೇ ಸತ್ಯ ಎನ್ನುವುದು ಕೊರಗಜ್ಜನ ಭಕ್ತರ ನಂಬಿಕೆಯ ನುಡಿ. ಇಲ್ಲಿ ಆರಾಧ್ಯ ದೈವವಾಗಿ ಕೊರಗಜ್ಜ ಎಂದು ಕರೆಯಲ್ಪಡುವ ಕೊರಗ ತನಿಯನನ್ನು ಶ್ರದ್ಧಾ ಭಕ್ತಿಯಿಂದ ಆರಾಧಿಸಲಾಗುತ್ತಿದೆ.
ಇಲ್ಲಿ ಹರಕೆ ರೂಪವಾಗಿ ಅಜ್ಜನಿಗೆ ವೀಳ್ಯದೆಲೆ, ಅಡಿಕೆ ಸುಣ್ಣ, ಬೀಡಿ, ಚಕ್ಕುಲಿ, ಮದ್ಯ, ಶೇಂದಿಯನ್ನು ಭಕ್ತರು ಸಲ್ಲಿಸುತ್ತಾರೆ.
ಇಲ್ಲಿ ಸ್ವಾಮಿ ಕೊರಗಜ್ಜ ವರ್ಷಾವಧಿ ನೇಮೋತ್ಸವವು ಶನಿವಾರ ರಾತ್ರಿ ನಡೆಯಿತು.
ಕುಂಬಳಡಿಕೆ ಕೊರಗಜ್ಜ ಕ್ಷೇತ್ರದಲ್ಲಿ ಪ್ರಥಮ ವರ್ಷದ ವರ್ಧಂತ್ಯುತ್ಸವದ ಪ್ರಯುಕ್ತ ನಾರಾವಿ ಕೃಷ್ಣ ತಂತ್ರಿಯವರ ಅಮೃತ ಹಸ್ತದಿಂದ ಸ್ವಾಮಿ ಕೊರಗಜ್ಜ ಹಾಗೂ ಗುಳಿಗ ದೈವಗಳಿಗೆ ಸಾನಿಧ್ಯ ಕಲಶಾಭಿಷೇಕ ಬೆಳಿಗ್ಗೆ ನಡೆದು, ಮಧ್ಯಾಹ್ನ ಸಾರ್ವಜನಿಕ ಅನ್ನಸಂತರ್ಪಣೆ,
ಸಂಜೆ ಗುಳಿಗ ದೈವದ ಕೋಲ ಹಾಗೂ ರಾತ್ರಿ ಸ್ವಾಮಿ ಕೊರಗಜ್ಜ ದೈವ ನರ್ತನ ಸೇವೆ ದೊಂದಿ ಬೆಳಕಿನೊಂದಿಗೆ ನಡೆಯಿತು.
ತಾಲ್ಲೂಕಿನ ವಿವಿಧ ಭಾಗಗಳಿಂದ ನೂರಾರು ಭಕ್ತರು ಆಗಮಿಸಿ ದೈವದ ಸಿರಿಮುಡಿ ಗಂದ ಪ್ರಸಾದವನ್ನು ಸ್ವೀಕರಿಸಿದರು.ಅಲ್ಲದೆ ಕಷ್ಟಕಾಲಕ್ಕೆ ಹೇಳಿ ಕೊಂಡಿದ್ದ ಹರಕೆಯನ್ನು ತೀರಿಸಿದಲ್ಲದೆ, ತಮಗೆ ಬಂದಿರುವ ಕಷ್ಟ ಕಾರ್ಪಣ್ಯಗಳ ಬಗ್ಗೆ ಕೊರಗಜ್ಜ ದೈವದ ಬಳಿ ನಿವೇದನೆ ಮಾಡಿಕೊಂಡು ಸಮಸ್ಯೆಗಳಿಗೆ ಪರಿಹಾರವನ್ನು ಕಂಡುಕೊAಡರು.