ಕಳಸ ಲೈವ್ ವರದಿ
ದಕ್ಷಿಣಕಾಶಿ ಕಳಸ ಕಲಶೇಶ್ವರ ದೇವಾಲಯದಲ್ಲಿ ಶಿವರಾತ್ರಿ ಪ್ರಯುಕ್ತ ವಿಶೇಷವಾಗಿ ಪೂಜಾ ವಿಧಿವಿಧಾನಗಳು ನೆರವೇರಿದವು.
ಶಿವರಾತ್ರಿಯ ಮುಂಜಾನೆ ಭಕ್ತಾದಿಗಳು ಪಂಚ ತೀರ್ಥಗಳಾದ ವಶಿಷ್ಠತೀರ್ಥ, ರುದ್ರತೀರ್ಥ, ಅಂಬಾತೀರ್ಥ, ಕೋಟಿತೀರ್ಥ, ನಾಗತೀರ್ಥಗಳಲ್ಲಿ ತೀರ್ಥ ಸ್ನಾನ ಮಾಡಿ ಭಕ್ತರು ದೇವಸ್ಥಾನಕ್ಕೆ ತೆರಳಿದರು.
ದೇವಾಲಯದಲ್ಲಿ ದಿನವಿಡೀ ಪೂಜೆ, ಉಪವಾಸ, ರುದ್ರಪಠಣ, ಶಿವಸ್ತುತಿ ಜಾಗರಣೆ ನಡೆಯಿತು. ಹಗಲು ರಾತ್ರಿಯಿಡೀ ದೇವಸ್ಥಾನವು ತೆರೆದಿದ್ದು, ಅಭಿಷೇಕ ಸೇವೆ, ಶತರುದ್ರಾಭಿಷೇಕ, ಏಕವಾರುರುದ್ರಾಭಿಷೇಕ, ರಂಗಪೂಜೆಗಳು ನೆರವೇರಿದವು.
ತಾಲ್ಲೂಕಿನ ನೂರಾರು ಭಕ್ತರು ದೇವಸ್ಥಾನದಲ್ಲಿ ತೀರ್ಥಸ್ನಾನ ಮಾಡಿ ಬಿಲ್ವಪತ್ರೆ ಅರ್ಪಿಸಿ, ಕಷ್ಟ ಕಾಲಕ್ಕೆ ಹೇಳಿದ ಹರಕೆ ತೀರಿಸಿಕೊಂಡರು.
ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಸಂಜೆ ಮಹಿಳಾ ತಂಡದವರಿಂದ ಭಜನೆ ಕಾರ್ಯಕ್ರಮ ಮತ್ತು ಕಲಾ ಸಿಂಚನ ಮಹಿಳಾ ತಂಡವರಿAದ ಭರತನಾಟ್ಯ ಕಾರ್ಯಕ್ರಮ, ಹೊಳ್ಳಾಸ್ ಶ್ರೀ ಚನ್ನಕೇಶವ ಯಕ್ಷಗಾನ ಕಲಾ ಪ್ರತಿಷ್ಠಾನ ಗೊರಸುಕುಡಿಗೆ ಬಾಳೆಹೊಳೆ ಇವರಿಂದ “ಪ್ರಸಂಗ ಭೀಷ್ಮ ಪ್ರತಿಜ್ಞೆ ಮತ್ತು ಮೀನಾಕ್ಷಿ ಕಲ್ಯಾಣ” ಎಂಬ ಯಕ್ಷಗಾನ ಬಯಲಾಟ ಕಾರ್ಯಕ್ರಮ ನಡೆಯಿತು.
ಇಲ್ಲಿಯ ಕುದುರೆಮುಖದ ವೇದವೇಶ್ವರ ಸ್ವಾಮಿ ಸನ್ನಿಧಿಯಲ್ಲಿ ಶಿವರಾತ್ರಿಯನ್ನು ಆಚರಿಸಲಾಯಿತು. ದೇವರಿಗೆ ಶಾಲ್ಯನ್ನ ಅಲಂಕಾರ ಸೇವೆ, ಹೂವಿನ ಪೂಜೆ, ಮಹಾನ್ಯಾಸಪೂರ್ವಕ ಏಕಾದಶ ರುದ್ರಾಭಿಷೇಕ, ಏಕವಾರ ರುದ್ರಾಭಿಷೇಕ, ಪಂಚಾಮೃತ ಅಭಿಷೇಕ, ರುದ್ರತ್ರಿಷತಿ ಪೂಜೆಗಳು ನಡೆಯಿತು. ರಾತ್ರಿ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಯಕ್ಷಗಾನ ನಡೆಯಿತು.
ಕುದುರೆಮುಖ,ಜಾಂಬ್ಲೆ,ನೆಲ್ಲಿಬೀಡು,ಸAಸೆ ಮುಂತಾದ ಬಾಗಗಳಿಂದ ನೂರಾರು ಭಕ್ತರು ಆಗಮಿಸಿ ಪೂಜೆ ಸಲ್ಲಿಸಿದರು.
ಸಂಸೆ ಶ್ರೀ ಎಡಮುರೇಶ್ವರಸ್ವಾಮಿ ದೇವಸ್ಥಾನದಲ್ಲಿ ಮಹಾಶಿವರಾತ್ರಿ ಪ್ರಯುಕ್ತ ವಿಶೇಷ ಧಾರ್ಮಿಕ ಕಾರ್ಯಕ್ರಮಗಳು ನಡೆಯಿತು.ಶ್ರೀ ಎಡಮುರೇಶ್ವರಸ್ವಾಮಿಗೆ ಬೆಳಿಗ್ಗೆ ಪುಣ್ಯಾಹವಾಚನ, ಕಲಾಸಾನಿಧ್ಯ ಹೋಮ, ಮತ್ತು ಕಲಶಾಭಿಷೇಕ, ಮಹಾಪೂಜೆ ಮಂಗಳಾರತಿ ನಡೆಯಿತು.ರಾತ್ರಿ ಶ್ರೀ ಸ್ವಾಮಿಯವರಿಗೆ ರುದ್ರಾಭಿಷೇಕ, ರಂಗಪೂಜೆ, ದೀಪಾರಾಧನೆ, ತೀರ್ಥಪ್ರಸಾದ ವಿನಿಯೋಗ. ನಂತರ ಊರಿನ ಗ್ರಾಮಸ್ಥರ ಪರವಾಗಿ ಕಪ್ಪಿನಭೂತ, ಒಂಟಿ ಪಂಜುರ್ಲಿ, ಹೊಸಮಕ್ಕಿ ಭೂತ ಮತ್ತು ಬೆಳ್ಳದ ಚೌಂಡಿ ದೈವಗಳ ನೇಮೋತ್ಸವ ನಡೆಯಿತು.
Related Stories
September 6, 2024