ಕಳಸ ಲೈವ್ ವರದಿ
ಕಳಸ ತಾಲ್ಲೂಕು ಕಛೇರಿಯ ಆಡಳಿತ ವೈಖ್ಯರಿಯಿಂದ ಬೇಸೆತ್ತ ಸಾರ್ವಜನಿಕರು ಅಧಿಕಾರಿಗಳಿಗೆ ಹಿಡಿಶಾಪಹಾಕುತ್ತಿದ್ದಾರೆ.
ಅಧಿಕಾರಿಗಳ ಬೇಜವಾಬ್ದಾರಿ ಜನಪ್ರತಿನಿಧಿಗಳ ನಿರ್ಲಕ್ಷ್ಯದಿಂದ ಕಳಸ ತಾಲ್ಲೂಕು ಕಛೇರಿಯಲ್ಲಿ ಆಗಬೇಕಾದ ಕೆಲಸಗಳು ಸಾಮಾನ್ಯ ಜನರಿಗೆ ಉಕ್ಕಿನ ಕಡಲೆಯಂತಾಗಿದೆ.
ಕಳಸ ತಾಲ್ಲೂಕಿನಲ್ಲಿರುವ ತಹಶೀಲ್ದಾರ್ ಅವರ ಕೈಲಿ ಯಾವುದೇ ಕೆಲಸ ಕೂಡ ಆಗುತ್ತಿಲ್ಲ. ಅವರು ಕಚೇರಿಯಲ್ಲಿ ಇರೋದೆ ಇಲ್ಲ. ಜನ ಪ್ರತೀ ದಿನ ಕಛೇರಿಗೆ ಅಲೆದಾಡಿ ಅಲೆದಾಡಿ ಸುಸ್ತಾಗಿದ್ದಾರೆ. ಜನಸಾಮಾನ್ಯರ ಯಾವುದೇ ಕೆಲಸವನ್ನು ಮಾಡಿಕೊಡುವುದಿಲ್ಲ. ದಾಖಲಾತಿಗೆ ಸಹಿ ಆಗಬೇಕಾದರೆ ಲಂಚದ ಬೇಡಿಕೆಯೊಡ್ಡುತ್ತಾರೆ ಎಂದು ಮಾಜಿ ತಾ.ಪಂ ಸದಸ್ಯ ಮಹಮ್ಮದ್ ರಫೀಕ್ ಆರೋಪ ಮಾಡುತ್ತಾರೆ.
ಕಳೆದ ಆರು ತಿಂಗಳುಗಳಿಂದ 94 ಸಿ ಅಡಿಯಲ್ಲಿ ಹಕ್ಕು ಪತ್ರವನ್ನು ನೀಡುತ್ತಿಲ್ಲ.ಎಲ್ಲಾ ದಾಖಲಾತಿಗಳನ್ನು ಒದಗಿಸಿದರು ಕೂಡ ಕಚೇರಿಗೆ ಅಲೆದಾಡಿಸುತ್ತಾರೆ ಹೊರತು ಕೆಲಸವನ್ನು ಮಾಡುತ್ತಿಲ್ಲ. ನನ್ನ ಬಳಿಯೂ ಲಂಚಕ್ಕೆ ಬೇಡಿಕೆ ಇಟ್ಟಿದ್ದಾರೆ. ಕೇವಲ ಜಾತಿ ಮತ್ತು ಆದಾಯ ದಾಖಲಾತಿಗೆ ಸಹಿ ಹಾಕುವ ತಹಶೀಲ್ದಾರ್ ಆಗಿದ್ದಾರೆ. ಜನ ಸಾಮಾನ್ಯರ ಕೆಲಸಗಳಿಗೆ ಸ್ಪಂದಿಸದ ತಹಶೀಲ್ದಾರ್ ನಮಗೆ ಬೇಡ ಇವರನ್ನು ಇಲ್ಲಿಂದ ಕೂಡಲೇ ವರ್ಗಾಯಿಸಿ ಎಂದು ರಫೀಕ್ ಒತ್ತಾಯಿಸುತ್ತಾರೆ.
ಈ ಬಗ್ಗೆ ತಹಶೀಲ್ದಾರ್ ಬಸವರಾಜ್ ಅವರನ್ನು ವಿಚಾರಿಸಿದಾಗ ಮಹಮ್ಮದ್ ರಫೀಕ್ ಅವರು ಮಾಡುವ ಆರೋಪ ಸತ್ಯಕ್ಕೆ ದೂರವಾಗಿದ್ದು, ನಾನು ಯಾವುದೇ ಕಡತಗಳಿಗೆ ಸಹಿ ಮಾಡಲು ಲಂಚದ ಬೇಡಿಕೆಯೊಡ್ಡಿಲ್ಲ. ಅಲ್ಲದೆ ದಾಖಲಾತಿ ಸರಿ ಇಲ್ಲದೆ ಇರುವುದರಿಂದ ನಾನು ಕೆಲ ಕಡತಗಳಿಗೆ ಸಹಿ ಮಾಡಲಿಲ್ಲ.ಸಾರ್ವಜನಿಕರಿಗೆ ತೊಂದರೆ ಆಗೋ ರೀತಿಯಲ್ಲಿ ನಾನು ವರ್ತಿಸಿಲ್ಲ ಎಂದು ಹೇಳುತ್ತಾರೆ.
ಕಳಸ ತಾಲ್ಲೂಕು ಕಚೇರಿಗೆ ಕಳೆದ ಒಂದು ವರ್ಷದ ಅವಧಿಯಲ್ಲಿ ಬರೋಬ್ಬರಿ ಆರು ಜನ ತಹಶೀಲ್ದಾರ್ ಕಾರ್ಯನಿರ್ವಹಿಸಿದ್ದಾರೆ ಎಂದರೆ ಕಳಸ ತಾಲ್ಲೂಕಿನ ಜನರ ಮೇಲೆ ಹಿರಿಯ ಅಧಿಕಾರಿಗಳಿಗೆ ಎಷ್ಟೊಂದು ಕಾಳಾಜಿ ಇದೆಯೆಂದು ಅರ್ಥವಾಗುತ್ತದೆ. ಇಲ್ಲಿದ್ದ ಆರು ಜನ ವಿಎಗಳ ಪೈಕಿ ಮೂವರನ್ನು ಕಳಸದಿಂದ ವರ್ಗಾವಣೆ ಮಾಡಿದ್ದರಾದರೂ ಬದಲಿ ವ್ಯವಸ್ಥೆಯನ್ನು ಮಾಡಲಿಲ್ಲ. ರೆವಿನ್ಯೂ ಇನ್ಸ್ಪೆಕ್ಟರನ್ನು ಕೂಡ ಇಲ್ಲಿಂದ ವರ್ಗಾವಣೆ ಮಾಡಿಸಿದ್ದರಾದರೂ ಬದಲಿ ವ್ಯವಸ್ಥೆ ಆಗಲಿಲ್ಲ. ಎಸ್ಡಿಎ ಮೂರು ಹುದ್ದೆಗಳು ಇಲ್ಲಿ ಖಾಲಿ ಇದೆ. ಇಲ್ಲಿಯ ಕೆಲ ಅಧಿಕಾರಿಗಳ ಅಸಡ್ಡೆತನ ಮತ್ತು ಸಾರ್ವಜನಿಕರ ಜೊತೆ ಸ್ಪಂದಿಸದೆ ಇರೋದ್ರಿಂದ ಇಲ್ಲಿ ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸುತ್ತಿರುವ ಅಧಿಕಾರಿಗಳು ಇಲ್ಲಿಂದ ನಾವು ವರ್ಗಾವಣೆ ಆಗಿ ಹೋದ್ರೆ ಸಾಕು ಅನ್ನೋ ಮಟ್ಟಕ್ಕೆ ಬಂದಿದ್ದಾರೆ. ಕಚೇರಿಯಲ್ಲಿರುವ ಬೆರಳೆಣಿಕೆಯ ಅಧಿಕಾರಿಗಳು ಕಳಸ ತಾಲ್ಲೂಕಿನ ಎಲ್ಲಾ ಜವಾಬ್ಧಾರಿಗಳನ್ನು ನಿಭಾಯಿಸುವ ಹೊರೆಯಾಗಿದೆ.
ಕಳಸ ತಾಲ್ಲೂಕು ಕೇಂದ್ರ, ಹಳ್ಳಿ ಪ್ರದೇಶ, ಇಲ್ಲಿ ಹೆಚ್ಚಾಗಿ ಕೂಲಿ ಕಾರ್ಮಿಕರು, ಪ.ಜಾತಿ ಮತ್ತು ಪ.ಪಂಗಡದವರು ವಾಸಿಸುತ್ತಿದ್ದಾರೆ. ಗ್ರಾಮದ ಕಟ್ಟ ಕಡೆಯ ಗ್ರಾಮಸ್ಥನಿಗೂ ತಾಲ್ಲೂಕು ಕಚೇರಿಯಿಂದ ಆಗಬೇಕಾದ ಕೆಲಸಗಳು ಕಾಲ ಕಾಲಕ್ಕೆ ಆಗಬೇಕು ಎನ್ನುವ ಸಣ್ಣ ಕಾಲಾಜಿ ಕೂಡ ಕಂದಾಯ ಇಲಾಖೆಯ ಹಿರಿಯ ಅಧಿಕಾರಿಗಳಿಗೆ ಹಾಗೂ ನಮ್ಮನ್ನಾಳುವ ಜನಪ್ರತಿನಿಧಿಗಳಿಗೆ ಇಲ್ಲದಂತಾಗಿದೆ.
Related Stories
September 6, 2024