ಕಳಸ ಲೈವ್ ವರದಿ
ತಿಂಗಳುಗಳಿಂದ ಆತುರದಿಂದ ಕಾಯುತ್ತಿದ್ದ ವರ್ಷಕೊಮ್ಮೆ ನಡೆಯೋ ನಮ್ಮೂರಿನ ಕಳಸ ಕಲಶೇಶ್ವರ ಸ್ವಾಮಿ ದೇವರ ಜಾತ್ರೆ ಮಗಿದೇ ಹೋಯ್ತು ಆದರೆ ಆ ಜಾತ್ರೆಯ ಜನಜಂಗುಳಿಯೊಳಗಿನ ವಿಶೇಷತೆಗಳು ಮರೆಯಲಾಗದು.
ಒಂಬತ್ತು ದಿನಗಳ ಕಾಲ ನಡೆದ ಈ ಜಾತ್ರೆ ಜಿಲ್ಲೆಯಲ್ಲಿ ಅತಿ ದೊಡ್ಡ ಜಾತ್ರೆಯೂ ಹೌದು. ಈಶ್ವರನಿಗೆ ಪೂಜೆ ಸಲ್ಲಿಸಿ, ಬ್ರಹ್ಮ ರಥದಲ್ಲಿ ಕುಳಿತ ಆ ದಿವ್ಯ ಮೂರ್ತಿಯನ್ನು ಕಣ್ತುಂಬಿಸಿಕೊಳ್ಳು ಉತ್ಸಾಹ. ಜಾತ್ರೆ ಎಂದರೆ ಅವು ಭಕ್ತಿ ಸಹಬಾಳ್ವೆ, ವೈವಿಧ್ಯತೆಯಲ್ಲಿ ಏಕತೆ ಸಾರುವ ಆದರ್ಶಗಳನ್ನು ಹೊಂದಿರುತ್ತದೆ.ಇದರ ಜತೆ ವಾಣಿಜ್ಯ ಆಯಾಮವೂ ಇರುತ್ತದೆ. ಜಾತ್ರೆ ಊರವರ ಪಾಲಿಗೆ ಒಂದು ದೊಡ್ಡ ಹಬ್ಬದಂತಯೇ ಮನೆಗೆ ನೆಂಟರಿಷ್ಟರು, ಸಂಬಂಧಿಕರ ಆಗಮನದಿಂದ ಸಂತಸ. ಹಬ್ಬದ ಸಂಭ್ರಮ, ಸಿಹಿ, ಖಾರ ಊಟ ಎಲ್ಲಾ ಸೇರಿ ಉಮೇದಿಯಿಂದ ಓಡುತ್ತಾ ಆಡುತ್ತಾ, ಮಾತಾಡುತ್ತಾ, ಕೈಗೆ ಸಿಕ್ಕಿದ್ದು ಮೆಲ್ಲುತ್ತಾ ಸಂಭ್ರಮಿಸುತ್ತಿದ್ದುದು ಈ ಜಾತ್ರೆ.
ಜಾತ್ರೆಯೇ ಒಂದು ಮೋಜು. ಜಾತ್ರಾ ದೇವರ ಪೂಜೆ, ಪುನಸ್ಕಾರಗಳು ತಂದು ಕೊಡುವ ಪುಣ್ಯ ಒಂದೆಡೆಯಾದರೆ, ಮತ್ತೊಂದೆಡೆ ಪ್ರಿಯರ ಸಾನಿಧ್ಯ ಉಂಟು ಮಾಡುವ ಖುಷಿ, ಅಲ್ಲಿನ ನೋಟ, ಓಟ , ಮಾಟವೇ ಮುಖ್ಯ, ಆ ಹೊತ್ತಿಗೆ ವರ್ಷದಿಂದ ಜಾತ್ರೆಗಾಗೇ ಕೂಡಿಟ್ಟ ದುಡ್ಡು ಈಚೆ ಬಂದು ಏನೆಲ್ಲಾ ನೋಡುವ, ತಿನ್ನುವ, ಕೊಂಡುಕೊಳ್ಳುವ ಆತುರಗಳು ಕಾಣುತ್ತವೆ. ಪ್ಲಾಸ್ಟಿಕ್ ವಾಹನದ ಆಟಿಕೆಗಳು ಗಾಳಿ ತುಂಬಿದ ಬಲೂನು ಹಾಗೂ ಬಗೆ ಬಗೆಯ ತಿಂಡಿಗಳು. ಅವು ಒಂದೇ ಎರಡೇ…! ನೋಡು ನೋಡುತ್ತಿದ್ದಂತೆ ಹತ್ತಿಯ ಮೋಡವಾಗಿ ಕಣ್ಸೆಳೆದು ಬಾಯಲ್ಲಿ ನೀರೂರಿಸುವ ಬಾಂಬೆ ಮಿಠಾಯಿ, ಕರಿದ ತಿಂಡಿಗಳು, ಬಗೆಬಗೆಯ ಬಣ್ಣ ಬಣ್ಣದ ಹಪ್ಪಳ ಮಸಾಲೆ ಮಂಡಕ್ಕಿ ಲಿಂಬೂ ಸೋಡಾಗಳು, ಹಲವಾರು ಆಕಾರ ಆಕೃತಿಗಳಲ್ಲಿ ಜೋಡಿಸಿಟ್ಟ ಸ್ವೀಟುಗಳು ತರತರ ಖಾರಗಳೂ, ದೋಸೆ ಕ್ಯಾಂಪ್ಗಳು, ಗೋಭಿ ಮಂಜೂರಿ, ಪಾಪ್ ಕಾರ್ನ್, ಚುರುಮುರಿ, ಕಲ್ಲಂಗಡಿ, ಐಸ್ ಕ್ರೀಂ.
ಇತ್ತ ತಿರುಗಿದರೆ ಕೊಳಲು ಬಣ್ಣದ ತುತ್ತೂರಿ ಆಟದ ಕಾರು, ಗೊಂಬೆ ಮಾರುವವರು. ಅತ್ತ ಪೀಪಿ, ಕನ್ನಡಕ ವಾಚು, ಉಂಗುರ ಕೀ ಕೊಡೊ ಆಟಿಕೆಗಳನ್ನು ಹೊತ್ತು ಮಾರುವ ಮಂದಿ, ದೊಡ್ಡ ದೊಡ್ಡ ಬೆಲೂನು, ಸಾಬೂನು ನೊರೆಯಲ್ಲಿ ಗುಳ್ಳೆ ಹಾರಿಸುವವ ಮತ್ತೊಬ್ಬ, ಬಳೆ, ರಿಂಗು, ಬಟ್ಟೆ ಬರೆ, ಪರ್ಸು ಬ್ಯಾಗು, ಪಾತ್ರೆ ಪಗಡಿ, ಪುಸ್ತಕ ಎಲ್ಲಾ ಹೀಗೆ ಜಾತ್ರೆಯಲ್ಲಿ ಮಾಯಾಲೋಕವೇ ಧರೆಗಿಳಿದಂತೆ ಬಣ್ಣ ಬಣ್ಣದ ದೀಪಗಳ ಅಲಂಕಾರದಿಂದ ಆಕರ್ಷಕವಾಗಿ ಜೋಡಿಸಿಟ್ಟಿರುವ ವಸ್ತುಗಳು.
ಜಾತ್ರೆಯಿಂದ ಕೊಂಚ ದೂರದಲ್ಲಿ ಕಣ್ಣು ಕೋರೈಸುವ ದೀಪಗಳನ್ನು ಬೆಳಗುತ್ತಾ ಮಕ್ಕಳನ್ನು ಹೊತ್ತು ವೃತ್ತಾಕಾರವಾಗಿ ಗರಗರ ತಿರುಗುವ ಯಾಂತ್ರಿಕ ತೂಗುವ ತೊಟ್ಟಿಲು ಕುದುರೆ, ಕಾರು, ಬೈಕುಗಳ ಮಾದರಿಯ ತರಹೇವಾರಿ ತೂಗು ತೊಟ್ಟಿಲುಗಳು, ಚಿಕ್ಕ ಮಕ್ಕಳಿಗೆ ಚಿಕ್ಕ ತೊಟ್ಟಿಲಾದರೆ ದೊಡ್ಡವರಿಗೆ ಜಾಯಿಂಟ್ ವೀಲ್ ಗಳು. ಇತ್ತ ಬಹುಮಾನದ ಆಸೆ ಹುಟ್ಟಿಸಿ ಬಾಲ್, ರಿಂಗ್ ಹಾಕಿ ಹಣ ಬಾಚುತ್ತಿದ್ದ ಆಟಗಳು.
ಇನ್ನು ಹೆಣ್ಣು ಮಕ್ಕಳಿಗೆ ಅತ್ಯಂತ ಪ್ರಿಯವಾದ ವಿವಿಧ ಬಣ್ಣ, ಆಕಾರದ ಬಳೆಗಳ ಸಾಲು ಸಾಲು ಅಂಗಡಿಗಳು, ಬಣ್ಣ ಬಣ್ಣದ ರಿಬ್ಬನ್ ಹೇರ್ ಕ್ಲಿಪ್ಪುಗಳ ಬಟ್ಟೆಗಳ, ಪಾತ್ರೆ- ಪಗಡಿಗಳ ಮೇಳ. ಅಲ್ಲಿ ಕಾಲಿಡಲೂ ಆಗದಷ್ಟು ರಷ್ಯು. ಕಡಿಮೆ ಬೆಲೆಗೆ ವಸ್ತುಗಳನ್ನು ಖರೀದಿಸಿದ ಮಾತು, ಸಂತೋಷ ಅಲ್ಲಿ ಕೆನೆ ಕಟ್ಟಿತ್ತು. ತಹರೇವಾರಿ ಜನಗಳಿಗೆ ತಹರೇವಾರಿ ಅಂಗಡಿಗಳು, ಆಸ್ತಿಕರಿಗೆ ಪೂಜಾ ಸಾಮಗ್ರಿಗಳ ಬಂಡಾರ ಅಲ್ಲಿ ಚಿಕ್ಕ ಗಂಧ ತೇಯುವ ಕಲ್ಲಿನಿಂದ ಹಿಡಿದು, ವಿವಿಧ ಘಂಟೆ, ಆರತಿ ತಟ್ಟೆಗಳು, ಸ್ಫಟಿಕದ ಮಣಿ ಸರಗಳು, ರುದ್ರಾಕ್ಷಿ ಮಾಲೆಗಳು. ವಿವಿಧ ದೇವರ ಪಟಗಳು. ಆಯ್ಕೆಗಿದ್ದದ್ದು ಒಂದೇ ಎರಡೇ…! ಪಕ್ಕದಲ್ಲೇ ಸಾಂಸ್ಕøತಿಕ ವೇದಿಕೆ ಅಲ್ಲಿ ಯಕ್ಷಗಾನ.
ಬಾಲ್ಯ ಕಾಲಕ್ಕೆ ಜಾತ್ರೆ ತೆರೆದು ತೋರಿದ ಮಾಂತ್ರಿಕ ಜಗತ್ತು ಒಂದೆಡೆಯಾದರೆ, ಯೌವನದ ಜಾತ್ರೆಯ ಸೊಬಗು ಸಂಭ್ರಮ ಬೇರೆಯದೇ ಆಗಿತ್ತು. ಕಣ್ಣು ಅರಸುತ್ತಿದ್ದ ಆಪ್ತರು ಸಿಕ್ಕು ಜೊತೆಯಾಗಿ ಜನಜಂಗುಳಿಯಲ್ಲಿ ಕಳೆದುಹೋಗುವುದು, ತೇರಿಗೆ ಕೃಷಿ ಉತ್ಪನ್ನಗಳನ್ನು ಎಸೆಯುವ ನೆಪ ಒಡ್ಡಿ, ಅದು ಬೀಳಬೇಕಾದವರ ತಲೆ ತಾಗಿದಾಗ ಗೆಳೆಯರ ಗುಂಪಿನಲ್ಲಿ ಸ್ಫೋಟಿಸುವ ಖುಷಿ, ಆಕಸ್ಮಿಕವೆಂಬಂತೆ ಡಿಕ್ಕಿ ಹೊಡೆಯುವುದು, ಬೇಕಂತಲೇ ಭುಜ ತಾಗಿಸಿ ಅಮಾಯಕ ಮುಖಹೊತ್ತು ನಿಂತದ್ದಕ್ಕೆ ಲೆಕ್ಕ ಇಟ್ಟವರಾರು!?, ಕದ್ದು ಮುಚ್ಚಿ ಗೆಳತಿಯನ್ನು ಬೇಟಿಯಾದ ಸಂಭ್ರಮ, ಸಂಬಂಧಗಳು ಮತ್ತೂ ಗಟ್ಟಿಯಾಗಿ ನಿಲ್ಲಲು ಜಾತ್ರೆ ಕಾರಣವಾದದ್ದು ಗುಟ್ಟಲ್ಲ. ಜಾತ್ರೆಯ ನೆನಪಿಗಂತಲೇ ಸೆಲ್ಫಿ ತೆಗೆದುಕೊಳ್ಳುವ ಸಂಭ್ರಮ.
ಪರಿಚಿತರು, ಚಡ್ಡಿ ದೋಸ್ತುಗಳು, ನೆಂಟರು ಕಲಿಸಿದ, ಕಲಿಸುತ್ತಿರುವ ಗುರುಗಳು ಸಿಗುವ ಏಕೈಕ ತಾಣ ಎಂದರೆ ಅದು ಜಾತ್ರೆಯೊಂದೇ…!
“ಏನಲೇ ಆಣ್ತಮ್ಮ…!” ಅಂತ ಕಣ್ಣರಳಿಸಿ ಬಂದು ತಬ್ಬಿಕೊಳ್ಳುವ ಗೆಳೆಯರ ಅನಿರೀಕ್ಷಿತ ಭೇಟಿ ಸಾಧ್ಯವಾಗುವುದು ಇಲ್ಲಿಯೇ.ಒಟ್ಟಿಗೆ ಓದಿ, ಹೊಟ್ಟೆಪಾಡಿಗಾಗಿ ಎಲ್ಲೆಲ್ಲೋ ಚದುರಿಹೋದ ಗೆಳೆಯರ, ಹಳೆಬೇರು, ಹೊಸ ಚಿಗುರುಗಳ ಸಂಗಮ ಇಲ್ಲಿ ಮಾತ್ರ ಸಾಧ್ಯ. ಕಾಂಕ್ರೀಟ್ ಕಾಡಿನಲ್ಲಿ ಮಾರಿಗೊಂದು ಮೊಳಕ್ಕೊಂದು ಕಾಳಿಗೆ ತೊಡರುವ ಹವಾನಿಯಂತ್ರಿತ ಮಾಲುಗಳು, ಸೂಪರ್ ಮಾರ್ಕೆಟ್ ಗಳು ಸಿಕ್ಕರೂ ನಮ್ಮೂರ ಜಾತ್ರೆ ಕೊಡುವ ಖುಷಿ ಅಲ್ಲಿ ಅರಸಲು ಸಾಧ್ಯವೇ…? ಬದಲಾದ ಕಾಲಘಟ್ಟದಲ್ಲಿ ಸಾಂಸ್ಕøತಿಕ ಕೊಂಡಿಯಂತಿದ್ದ ಕಳಸ ಜಾತ್ರೆ ತನ್ನ ಮೊದಲಿನ ಮಹತ್ವವನ್ನು ಉಳಿಸಿಕೊಂಡು ಹೋಗುತ್ತಿರುವುದು ಸಂತಸದ ಸಂಗತಿ, ಮುಗ್ಧ ಕನಸುಗಳನ್ನು ಬಿತ್ತಿ ಸಂಭ್ರಮವನ್ನು ತಂದು ಕೊಟ್ಟ ಜಾತ್ರೆಗೆ ಥ್ಯಾಂಕ್ಸ್ ಹೇಳೋಣ…! ಹಾಗೆ ನೋಡಿದರೆ ಇಡಿಯ ಬದುಕೇ ಒಂದು ಜಾತ್ರೆ ಎನ್ನುವ ಅನುಭಾವಿಗಳ ಮಾತು ಕೂಡಾ ನಿಜ ಅಲ್ಲವೇ…!?