ಕಳಸ ಲೈವ್ ವರದಿ
ಬೀಸ್ ಸಂಸ್ಥೆ ಜೋಗಿಬೈಲು ವತಿಯಿಂದ ರೋಟರಿ ಸಂಸ್ಥೆ ಕಳಸ ಇವರ ಸಹಯೋಗದೊಂದಿಗೆ ಶಾಲಾ ಕಾಲೇಜಿನ ವಿದ್ಯಾರ್ಥಿಗಳಿಗೆ ಒಂದು ದಿನದ ‘ಪರಿಸರ ಪಯಣ’ ಕಾರ್ಯಾಗಾರವನ್ನು ಕಳಸದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಶನಿವಾರ ಹಮ್ಮಿಕೊಳ್ಳಲಾಗಿತ್ತು.
ರೋಟರಿ ಅಧ್ಯಕ್ಷರಾದ ಸಾವಿತ್ರಿ ಜಿ ಜೋಶಿ ಯವರು ಗಿಡಕ್ಕೆ ನೀರುಣಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಪ್ರಾಸ್ತಾವಿಕವಾಗಿ ವಾಗಿ ಮಾತನಾಡಿದ ಬೀಸ್ ಸಂಸ್ಥೆಯ ಕಾರ್ಯದರ್ಶಿ ನಾಗರಾಜ್ ಕೂವೆ, ಕಳೆದ ಎರಡು ವರ್ಷಗಳ ಹಿಂದೆ ಮಲೆನಾಡು ಭಾಗದಲ್ಲಿ ಭೂಕುಸಿತ ಸಂಭವಿಸಿ ಸಾವಿರಾರು ಜನ ನಿರಾಶ್ರಿತರಾದರು. ಈ ವರ್ಷ ಅನಾವೃಷ್ಟಿಯಿಂದಾಗಿ ಈಗಲೇ ಕುಡಿಯುವ ನೀರಿಗೆ ತೊಂದರೆ ಆರಂಭವಾಗಿದೆ. ಅಡಿಕೆಗೆ ಹಳದಿ ಎಲೆ ರೋಗ, ಎಲೆ ಚುಕ್ಕೆ ರೋಗ, ಕೊಳೆರೋಗ ಮುಂತಾದವುಗಳು ಕಾಣಿಸಿಕೊಳ್ಳುತ್ತಿದ್ದು ಕೃಷಿಗೆ ತೊಂದರೆಯಾಗಿ ಪ್ರತಿ ಕುಟುಂಬಗಳು ಸಹ ಹವಾಗುಣ ಬದಲಾವಣೆಯ ಪರಿಣಾಮಗಳನ್ನು ಎದುರಿಸುವಂತಾಗಿದೆ. ಅಲ್ಲದೇ ಜೀವವೈವಿಧ್ಯ ಕೂಡಾ ವಿಪರೀತ ಸಂಕಷ್ಟದಲ್ಲಿದೆ. ಈ ಎಲ್ಲಾ ಮಲೆನಾಡಿಗೆ ಎದುರಾಗಿರುವ ವಿಪತ್ತುಗಳನ್ನು ಅರ್ಥ ಮಾಡಿಸಲು, ವಿದ್ಯಾರ್ಥಿ ಯುವಜನರಿಗೆ ಬೀಸ್ ಸಂಸ್ಥೆ ಅರಿವು ಮೂಡಿಸುವ ಕೆಲಸ ಮಾಡುತ್ತಿದೆ ಎಂದು ಹೇಳಿದರು.
ರೋಟರಿ ಸಂಸ್ಥೆ ಅಧ್ಯಕ್ಷೆ ಸಾವಿತ್ರಿ ಜಿ ಜೋಶಿಯವರು ಮುಂದಿನ ಪೀಳಿಗೆಗೆ ಬದುಕಲು ಯೋಗ್ಯವಾದ ಭೂಮಿಯನ್ನು ಉಳಿಸುವುದು ನಮ್ಮ ಆದ್ಯ ಕರ್ತವ್ಯ ವಾಗಿದೆ, ಇದಕ್ಕಾಗಿ ಯುವಜನತೆ ಪರಿಸರ ಸಂರಕ್ಷಣೆ ಬಗ್ಗೆ ಅರಿವು ಮೂಡಿಸಿಕೊಳ್ಳಬೇಕು, ಪ್ಲಾಸ್ಟಿಕ್ ಬಳಕೆಯನ್ನು ಕಡಿಮೆ ಮಾಡಿ ಪುನರ್ ಬಳಕೆ ಮಾಡಬಹುದಾದ ವಸ್ತುಗಳನ್ನು ಹೆಚ್ಚಾಗಿ ಬಳಸುವಂತೆ ಕಿವಿಮಾತು ಹೇಳಿದರು.
ಸಂಪನ್ಮೂಲ ವ್ಯಕ್ತಿಗಳಾದ ಅರವಿಂದ್ ಕುಡ್ಲ ಅವರು ವಿದ್ಯಾರ್ಥಿಗಳಿಗೆ ಹಾಡು, ಆಟ ಮತ್ತು ವಿವಿಧ ಚಟುವಟಿಕೆಗಳನ್ನು ಮಾಡಿಸುವ ಜೊತೆಗೆ ಸ್ಥಳೀಯ ಜಾತಿಯ ಪಕ್ಷಿಗಳ ಗುರುತಿಸುವಿಕೆ, ಅವುಗಳ ವಾಸಸ್ಥಾನ ಮತ್ತು ಅವುಗಳು ಹೊರಡಿಸುವ ವಿವಿಧ ಶಬ್ದಗಳನ್ನು ಅನುಕರಿಸಿದರು. ಅಲ್ಲದೆ ಮೊಟ್ಟೆಯಿಂದ ಪ್ರೌಢಾವಸ್ಥೆಯ ಚಿಟ್ಟೆ ಆಗುವ ವರೆಗಿನ ಚಿಟ್ಟೆಯ ಜೀವನ ಕ್ರಮವನ್ನು ವಿಡಿಯೋ ಸಹಿತ ವಿವರಿಸಿ ಪರಿಸರದ ಬಗೆಗಿನ ಮಕ್ಕಳ ಕುತೂಹಲವನ್ನು ಹೆಚ್ಚಿಸಿದರು.
ಪರಿಸರಕ್ಕೆ ಅತಿ ಹೆಚ್ಚು ಹಾನಿ ಮಾಡುತ್ತಿರುವ ಪ್ಲಾಸ್ಟಿಕ್ ಎಳನೀರು ಕುಡಿಯುವ ಪೈಪ್, ಪ್ಲಾಸ್ಟಿಕ್ ಮತ್ತು ಪೇಪರ್ ಲೋಟ, ಟೂಥ್ ಬ್ರಶ್ ಗಳಿಗೆ ಪರ್ಯಾಯವಾಗಿ ತಾವು ದಿನ ನಿತ್ಯ ಜೀವನದಲ್ಲಿ ಉಪಯೋಗಿಸುತ್ತಿರುವ ವಸ್ತುಗಳನ್ನು ವಿದ್ಯಾರ್ಥಿಗಳಿಗೆ ತೋರಿಸಿ ಪರಿಸರ ಸಂರಕ್ಷಣೆ ಬಗ್ಗೆ ಜಾಗೃತಿ ಮೂಡಿಸಿದರು.
ಕಾಲೇಜಿನ ಸಹಾಯಕ ಪ್ರದ್ಯಾಪಕರಾದ ವಿಶು ಕುಮಾರ್, ಬೀಸ್ ಸಂಸ್ಥೆಯ ಮಣಿಶೇಖರ್ ಬಳ್ಳಿಕೊಂಡ, ಅನಿಲ್ ಕುಮಾರ್ ಮುಜೇಕಾನು, ಪ್ರವೀಣ್ ಹಳುವಳ್ಳಿ, ಜಯಪ್ರಕಾಶ್,ಗಜೇಂದ್ರ ಮಾವಿನಕಟ್ಟೆ, ಸಂಚಿತ್ ಜೈನ್ ಮತ್ತಿತರರು ಇದ್ದರು.