ಕಳಸ ಲೈವ್ ವರದಿ
ಕಳಸ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವು 2022-23ನೇ ಸಾಲಿನಲ್ಲಿ 460.09 ಕೋಟಿ ವ್ಯವಹಾರ ನಡೆಸಿ 32.33 ಲಕ್ಷ ನಿವ್ವಳ ಲಾಭ ಗಳಿಸಿದೆ ಎಂದು ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪಿ.ಮಹಬಲೇಶ್ವರ ಮಾಹಿತಿ ನೀಡಿದರು.
ಸಂಘದ ಸಭಾಂಗಣದಲ್ಲಿ ಭಾನುವಾರ ನಡೆದ ವಾರ್ಷಿಕ ಸರ್ವ ಸದಸ್ಯರ ಸಭೆಯಲ್ಲಿ ಮಾತನಾಡಿದ ಅವರು, ಸಂಘದಲ್ಲಿ ಈಗ 3652 ಸದಸ್ಯರು ಇದ್ದು ಅತ್ಯುತ್ತಮ ಸಾದನೆಯಿಂದಾಗಿ ಸಂಘವು ಈ ಸಾಲಿನಲ್ಲೂ ಎ ದರ್ಜೆಯನ್ನು ಮುಂದುವರೆಸಿದೆ.
ಸಂಘದ ಸದಸ್ಯರ ಷೇರು ಬಂಡವಾಳ 128.63 ಲಕ್ಷ ಇದ್ದು,ಅಪದ್ದನ 104.95 ಲಕ್ಷ ಮತ್ತು ಇತರೆ ನಿಧಿಗಳು 517.93 ಲಕ್ಷ ಇದೆ.ಸಂಘದಲ್ಲಿ ಉಳಿತಾಯ ಠೇವಣಿ,ಅವಧಿ ಠೇವಣಿ,ಆರ್.ಡಿ ಠೇವಣಿ,ಪಿಗ್ಮಿ ಠೇವಣಿ ಮತ್ತು ಅನ್ನಪೂರ್ಣ ನಗದು ಪತ್ರದ ಮುಖಾಂತರ ಒಟ್ಟು 4872.78 ಲಕ್ಷಗಳ ಠೇವಣಿಯನ್ನು ಹೊಂದಿರುತ್ತದೆ ಎಂದು ತಿಳಿಸಿದರು.
ಸಂಘದ ಅಧ್ಯಕ್ಷ ಜಿ.ಕೆ.ಮಂಜಪ್ಪಯ್ಯ ಮಾತನಾಡಿ ಕಳಸದ ಕಚಗಾನೆಯಲ್ಲಿ 12 ಕೋಟಿ ವೆಚ್ಚದ ಬೃಹತ್ ಕಾಫಿ ದಾಸ್ತಾನು ಕೇಂದ್ರ ಹಾಗೂ ಸಂಸ್ಕರಣಾ ಘಟಕ ಕಾಮಗಾರಿಯು ಪೂರ್ಣಗೊಂಡಿದೆ. ಯಂತ್ರೋಪಕರಣಗಳ ಅಳವಡಿಕೆ ನಡೆಯುತ್ತಿದೆ.ಬೆಳೆಗಾರರಿಗೆ ಕಾಫಿ ಸಂಗ್ರಹಕ್ಕೆ ಗೋದಾಮಿನ ವ್ಯವಸ್ಥೆ ಕೂಡ ಮಾಡಲಾಗಿದೆ.ಅಡಿಕೆ ಮಾದರಿಯಲ್ಲಿ ಕಾಫಿಗೆ ಕೂಡ ಒಳ್ಳೆಯ ಸಂಸ್ಥೆ ಮೂಲಕ ಖರೀದಿ ವ್ಯವಸ್ಥೆ ಕಲ್ಪಿಸಲಾಗುವುದು ಎಂದರು.
ಇದೇ ಸಂದರ್ಭದಲ್ಲಿ ಪಿಯುಸಿ ಮತ್ತು 10ನೇ ತರಗತಿಯ ಪ್ರತಿಭಾನ್ವಿತ 25 ವಿದ್ಯಾರ್ಥಿಗಳಿಗೆ ತಲಾ 3 ಸಾವಿರ ರೂ ಪ್ರೋತ್ಸಾಹ ಧನ ನೀಡಿ ಗೌರವಿಸಲಾಯಿತು.
ಉಪಾದ್ಯಕ್ಷೆ ಆಶಾಲತಾ ಜೈನ್,ನಿರ್ದೇಶಕರಾದ ,ಅ.ರಾ.ಸತೀಶ್ಚಂದ್ರ, ರವಿ ಕುಮಾರ್, ಅನಿಲ್ ಗೆವೀನ್, ಹೆಚ್.ಎಸ್.ಶ್ರೀಪಾಲಯ್ಯ, ರಾಜೇಂದ್ರ.ಕೆ, ಹೆಚ್.ಟಿ. ಕೃಷ್ಣಪ್ಪ, ಕೃಷ್ಣಪ್ಪ ಕೆ.ಎಸ್, ಕೆ.ಕೃಷ್ಣ, ಅನುಸೂಯ ಎನ್ ಇದ್ದರು.