ಕಳಸ ಲೈವ್ ವರದಿ
ಆದರ್ಶ ಪುರುಷರ ತತ್ವ ಸಿದ್ಧಾಂತಗಳ ಬಗ್ಗೆ ಕೇವಲ ಮಾತನಾಡುವುದಲ್ಲ ಅದನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ಇಂತಹ ಜನ್ಮ ದಿನಾಚರಣೆಗೆ ಅರ್ಥ ಬರುತ್ತದೆ ಎಂದು ಕಳಸ ಬ್ರಹ್ಮ ಶ್ರೀ ನಾರಾಯಣ ಗುರು ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷ ಮಂಜಪ್ಪ ಪೂಜಾರಿ ಹೇಳಿದರು.
ಕಳಸ ತಾಲ್ಲೂಕು ಕಚೇರಿಯಲ್ಲಿ ಗುರುವಾರ ನಡೆದ ಬ್ರಹ್ಮಶ್ರೀ ನಾರಾಯಣ ಗುರು ಜಯಂತಿ ಹಾಗೂ ನುಲಿಯ ಚಂದಯ್ಯ ಅವರ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ನಾರಾಯಣ ಗುರುಗಳು ಒಂದು ಸಮುದಾಯಕ್ಕೆ ಸೀಮಿತವಾಗಿದ್ದ ವ್ಯಕ್ತಿ ಅಲ್ಲ. ಆದರ್ಶಗಳನ್ನು ಪಾಲಿಸಿಕೊಂಡು ಎಲ್ಲಾ ಸಮುದಾಯದವರನ್ನು ಸಮಾನ ರೀತಿಯಲ್ಲಿ ನೋಡುತ್ತಿದ್ದರು. ಸ್ವಾರ್ಥ ಜೀವನವನ್ನು ನಡೆಸದೆ ನಾರಾಯಣ ಗುರುಗಳ ತತ್ವ ಸಿದ್ಧಾಂತದೊಂದಿಗೆ ಬದುಕಬೇಕು ಎಂದು ಹೇಳಿದರು.
ಮಾಜಿ ತಾ.ಪಂ ಅಧ್ಯಕ್ಷ ಎಂ.ಎ. ಶೇಷಗಿರಿ ಮಾತನಾಡಿ ನಾರಾಯಣ ಗುರುಗಳು ಸಮಾಜದಲ್ಲಿದ್ದ ಕೆಟ್ಟ ಪದ್ಧತಿಗಳನ್ನು ವಿರೋಧ ಮಾಡಿ ಸುಧಾರಣೆ ಮಾಡಿದ್ದರು.ಸಮಾಜದಲ್ಲಿ ನಾವು ಸ್ವಂತಿಕೆ, ಸ್ವಾಭಿಮಾನ, ಮರ್ಯಾದೆಯಿಂದ ಬದುಕುತ್ತಿದ್ದೇವೆ ಅಂದರೆ ಅದಕ್ಕೆ ನಾರಾಯಣ ಗುರುಗಳಂತಹ ಮಹಾತ್ಮರೇ ಕಾರಣ. ಮನುಷ್ಯ ಕುಲಕ್ಕೆ ಒಂದೇ ಜಾತಿ ಒಂದೇ ದೇವರು ಎಂಬ ತತ್ವ ಸಿದ್ಧಾಂತಗಳನ್ನು ಕಲಿಸಿ ನಮಗೆ ದಾರಿ ದೀಪವಾಗಿದ್ದಾರೆ ಎಂದು ಹೇಳಿದರು.
ಕಳಸ ತಾಲ್ಲೂಕು ತಹಶೀಲ್ದಾರ್ ಮಂಜುನಾಥ್, ಬಿಲ್ಲವ ಸಂಘದ ಕಾರ್ಯದರ್ಶಿ ಶ್ರೀನಿವಾಸ್, ಉಪಾಧ್ಯಕ್ಷ ರವಿ ಸುವರ್ಣ, ಮಹಿಳಾ ಘಟಕದ ಅಧ್ಯಕ್ಷೆ ಪೂರ್ಣೀಮಾ ಕಿಶೋರ್, ಸಂಘಟನಾ ಕಾರ್ಯದರ್ಶಿ ರಾಮಚಂದ್ರ, ಖಜಾಂಚಿ ಚಂದ್ರಶೇಖರ, ಕಾಂಗ್ರೆಸ್ ಮುಖಂಡ ಮಹಮ್ಮದ್ ರಫೀಕ್, ಪಂ ಸದಸ್ಯ ವೀರೇಂದ್ರ ಜೈನ್, ಆರ್ಐ ಅಜ್ಜೇ ಗೌಡ, ವಿಎ ಪ್ರಸನ್ನ ಇತರರು ಇದ್ದರು.