ಕಳಸ ಲೈವ್ ವರದಿ
ಕಳಸದ ರವಿ ರೈ ಚಲನ ಚಿತ್ರ ನಿರ್ಮಾಪಕರಾಗಿ ಗಾಂಧಿ ನಗರಲ್ಲಿ ಬಹಳಷ್ಟು ಸುದ್ದಿಯಲ್ಲಿದ್ದಾರೆ. ಅವರು ನಿರ್ಮಾಪಕರಾಗಿ ನಿರ್ಮಿಸಿರುವ ಬಹುನಿರೀಕ್ಷಿತ ಸಿನಿಮಾ “ಟೋಬಿ” ಇದೇ ಆಗಸ್ಟ್ 25ರಂದು ತೆರೆಕಾಣಲಿದೆ. ಈಗಾಗಲೇ ಚಿತ್ರದ ಟ್ರೇಲರ್ ರಿಲೀಸ್ ಆಗಿದ್ದು ಸಖತ್ ಸದ್ದು ಮಾಡುತ್ತಿದೆ.
ಕಳಸದಲ್ಲಿ ವೈನ್ ಶಾಪ್, ರೆಸಾರ್ಟ್, ಲಾಡ್ಜ್ ಉದ್ಯಮದಲ್ಲಿ ಯಶಸ್ವಿ ಉದ್ಯಮಿಯೆಂದೆ ಹೆಸರಾಗಿದ್ದ ರವಿ ರೈ ಅವರು ಈ ಹಿಂದೆ ಮೈ ನೇಮ್ ಈಸ್ ಅಣ್ಣಪ್ಪ ಎನ್ನುವ ತುಳು ಚಿತ್ರದ ನಿರ್ಮಾಣ ಮಾಡುವ ಮೂಲಕ ಚಿತ್ರರಂಗಕ್ಕೆ ಕಲಿರಿಸಿದ ರೈಗಳು ನಂತರ ವೃಷಬ್ ಶೆಟ್ಟಿಯವರ ಜೊತೆಗೂಡಿ ಸರ್ಕಾರಿ ಹಿರಿಯ ಪ್ರಾಥಮಿಕ ಕಾಸರಗೋಡು ಎಂಬ ಚಿತ್ರವನ್ನು ನಿರ್ಮಾಣ ಮಾಡಿ ಯಶಸ್ವಿಯಾದರು.ನಂತರ ಲೈಟರ್ ಬುದ್ದ ಸಂಸ್ಥೆಯಿಂದ ಗರುಡ ಗಮನ ವೃಷಭ ವಾಹನ ಚಿತ್ರ ನಿರ್ಮಾಣದಲ್ಲಿ ಸಹಭಾಗಿಯಾಗಿ ಅದರಲ್ಲೂ ಯಶಸ್ವಿಯಾಗಿ.ಇದೀಗ ರವಿ ರೈ ಅವರು ಟೋಬಿ ಎಂಬ ಸಿನಿಮಾದ ನಿರ್ಮಾಪಕ ರಾಗಿ ಲೈಟರ್ ಬುದ್ದ ಮತ್ತು ಅಗಸ್ತ್ಯ ಫಿಲಂಸ್ ನಿರ್ಮಾಣ ಸಂಸ್ಥೆಯ ಮೂಲಕ ನಿರ್ಮಿಸುತ್ತಿದ್ದಾರೆ. ಈಗಾಗಲೇ ರಾಜ್ ಬಿ.ಶೆಟ್ಟಿ, ಪ್ರವೀಣ್ ಶಿಯಾನ್ ಅವರ ಜೊತೆಗೂಡಿ ಲೈಟರ್ ಬುದ್ಧ ನಿರ್ಮಾಣ ಸಂಸ್ಥೆಯ ಅಡಿಯಲ್ಲಿ ಚಿತ್ರ ನಿರ್ಮಾಣ ಮಾಡುತ್ತಿದ್ದ ರವಿ ರೈ ಇದೀಗ ತಮ್ಮದೇ ಸ್ವಂತ “ಅಗಸ್ತ್ಯ ಫಿಲಂಸ್” ಸಂಸ್ಥೆಯನ್ನು ಹುಟ್ಟುಹಾಕಿ ಕಳಸ ಹೆಸರಿನ ಹಿರಿಮೆಯನ್ನು ಚಿತ್ರರಂಗದಲ್ಲಿ ಮತ್ತಷ್ಟು ಎತ್ತರಕ್ಕೆ ಏರಿಸಿದ್ದಾರೆ.
ಬಹುನಿರೀಕ್ಷಿತ ‘ಟೋಬಿ’ ಸಿನಿಮಾದ ಬಗ್ಗೆ ಮಾತನಾಡಿರುವ ರವಿ ರೈ ಇದೊಂದು ವಿಭಿನ್ನ ಚಿತ್ರಕಥೆ ಹೊಂದಿರುವ ಸಿನಿಮಾವಾಗಿದೆ. ರಾಜ್ ಬಿ. ಶೆಟ್ಟಿಯವರ ಕತೆ ಮತ್ತು ಮನೋಜ್ಞ ಅಭಿನಯ ಮತ್ತು ಬಾಸಿಲ್ ಅಲ್ ಚಳಕ್ಕಲ್ ಅವರ ಕ್ರಿಯಾತ್ಮಕ ನಿರ್ದೇಶನ ಇದ್ದು ಈ ಸಿನಿಮಾ ನಿರ್ಮಾಣ ಮಾಡಲು ನನಗೆ ಅವಕಾಶ ಸಿಕ್ಕಿದ್ದು ಅತೀವ ಖುಷಿ ನೀಡಿದೆ. ಇದೊಂದು ಫ್ಯಾನ್ ಇಂಡಿಯಾ ಸಿನಿಮಾ ಆಗೋದರಲ್ಲಿ ಯಾವುದೇ ಸಂಶಯವಿಲ್ಲ. ರಕ್ಷಿತ್ ಶೆಟ್ಟಿ ಮತ್ತು ರಾಜ್ ಬಿ. ಶೆಟ್ಟಿ, ಪ್ರವೀಣ್ ಶಿಯಾನ್ ಅವರು ಸದಾ ನನ್ನನ್ನು ಬೆನ್ನುತಟ್ಟಿದ್ದಾರೆ. ನಾನು ಹುಟ್ಟುಹಾಕಿರುವ ಅಗಸ್ತ್ಯ ಫಿಲಂಸ್ ಯಾವಾಗಲೂ ಲೈಟರ್ ಬುದ್ಧ ಸಂಸ್ಥೆಯ ಅಂಗಸಂಸ್ಥೆಯಾಗಿ ಸದಾ ಜೊತೆಗಿರುತ್ತದೆ ಎಂದಿದ್ದಾರೆ
‘ಒಂದು ಮೊಟ್ಟೆಯ ಕಥೆ’ ಚಿತ್ರದ ಮೂಲಕ ರಾಜ್ಯದಲ್ಲಿ ಮನೆಮಾತಾಗಿ ಗರುಡ ಗಮನ ವೃಷಭ ವಾಹನ ಚಿತ್ರದಲ್ಲಿ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡು ಸೈ ಎಣಿಸಿ ಕನ್ನಡ ಸಿನಿಮಾ ರಂಗದಲ್ಲಿ ವಿಭಿನ್ನ ಪಾತ್ರಗಳ ಮೂಲಕ ಗುರುತಿಸಿಕೊಂಡಿರುವ ರಾಜ್ ಬಿ. ಶೆಟ್ಟಿ ಈ ಸಿನಿಮಾದ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ.
“ಟೋಬಿ” ಚಿತ್ರದ ಹೆಸರೇ ಕುತೂಹಲಕಾರಿಯಾಗಿದ್ದು, ಚಿತ್ರದ ಪೊಸ್ಟರ್ಗಳು ಸಾಕಷ್ಟು ಸದ್ದು ಮಾಡುತ್ತಿದ್ದು ಚಿತ್ರ ಪ್ರೇಮಿಗಳು ಹಾಗೂ ರವಿ ರೈ ಅಭಿಮಾನಿಗಳು ಚಿತ್ರ ವೀಕ್ಷಣೆಗೆ ತುದಿಗಾಲಲ್ಲಿ ನಿಂತಿದ್ದಾರೆ. ನಾಯಕ ನಟ ರಾಜ್ ಬಿ. ಶೆಟ್ಟಿ ಮೂಗಿಗೆ ದೊಡ್ಡ ರಿಂಗ್ ಹಾಕಿಕೊಂಡು, ಮುಖದ ತುಂಬಾ ರಕ್ತದ ಕಲೆಗಳು, ಕಣ್ಣಲ್ಲಿರುವ ಆಕ್ರೋಶದ ಜೊತೆಗೆ ಮಿಸ್ಸಿಂಗ್ ಎಂಬ ಅಡಿಬರಹ ಚಿತ್ರ ಸಾಕಷ್ಟು ಕುತೂಹಲ ಹುಟ್ಟಿಸಿದೆ. ಚಿತ್ರದ ಟ್ರೇಲರ್ ಬಿಡುಗಡೆ ಕಾರ್ಯಕ್ರಮವನ್ನೇ ಬಹಳ ವಿಭಿನ್ನವಾಗಿ ಆಯೋಜಿಸಿ ಚಿತ್ರ ರಸಿಕರು ಸಿನಿಮಾದ ಬಿಡುಗಡೆಗೆ ಕಾಯುತ್ತಿದ್ದಾರೆ.
ರಾಜ್ ಬಿ. ಶೆಟ್ಟಿಯವರೇ ಈ ಚಿತ್ರದ ಕಥೆಯನ್ನು ಬರೆದಿದ್ದಾರೆ. ಅವರೇ ಹೇಳಿರುವಂತೆ ಈವರೆಗೆ ನಾವು ಮಾಡಿರುವ ಚಿತ್ರಗಳೆಲ್ಲವೂ ಹೊಸ ಪ್ರಯತ್ನವಾಗಿತ್ತು. ಅದೇ ರೀತಿ ಟೋಬಿ ಕೂಡ ಒಂದು ಮಾಸ್ ಸಿನಿಮಾ. ಇದನ್ನು ಬರೆಯುವ ಮುನ್ನ ನನಗಾದ ಅನುಭವವೇ ಇದಕ್ಕೆ ಸ್ಪೂರ್ತಿ, ಮನದಲ್ಲಿರುವ ಸಿಟ್ಟನ್ನು ಕ್ರಿಯಾತ್ಮಕವಾಗಿ ತೆರೆಯ ಮೇಲೆ ತರುವ ಸಾಹಸವೇ ಈ ಚಿತ್ರ. ಈ ಚಿತ್ರ ನನ್ನನ್ನು ಓರ್ವ ತಂತ್ರಜ್ಞನಾಗಿಯೂ ರೂಪಿಸಿದೆ ಎಂದಿದ್ದಾರೆ.
ಒಟ್ಟಾರೆ ಟೋಬಿ ಸಿನಿಮಾ ಬಿಡುಗಡೆಗೂ ಮುನ್ನವೇ ಬಹಳಷ್ಟು ಕತೂಹಲ ಕೆರಳಿಸಿದೆ. ಆಗಸ್ಟ್ 25ರಂದು ರಾಜ್ಯದಾದ್ಯಂತ ತೆರೆಕಾಣಲಿದೆ. ಚಿತ್ರತಂಡದ ಪ್ರಯತ್ನಕ್ಕೆ ಯಶಸ್ಸು ದೊರಕಲಿ ಮತ್ತು ರವಿ ರೈ ಕಳಸ ಅವರು ಹುಟ್ಟುಹಾಕಿರುವ ಅಗಸ್ತ್ಯ ಸಿನಿಮಾ ನಿರ್ಮಾಣ ಸಂಸ್ಥೆಗೆ ಈ ಚಿತ್ರ ಹೊಸ ತಿರುವು ನೀಡಲಿ ಎಂದು ಕಳಸ ಜನತೆಯ ಪರವಾಗಿ ಶುಭ ಹಾರೈಸೋಣ.