ಕಳಸ ಲೈವ್ ವರದಿ
ಕಳಸ ಬಂಟರ ಯಾನೆ ನಾಡವರ ಸಂಘದ ವತಿಯಿಂದ ಬುಧವಾರ ಆಟಿಡೊಂಜಿ ಕೂಟ ಕಾರ್ಯಕ್ರಮ ಸಡಗರ ಸಂಭ್ರಮದಿಂದ ನಡೆಯಿತು.
ಕಾರ್ಯಕ್ರಮದ ಉದ್ಘಾಟನೆಯ ನಂತರ ಬಂಟ ಸಮುದಾಯದ ಮಕ್ಕಳ ಸಾಂಸ್ಕøತಿಕ ಕಾರ್ಯಕ್ರಮ ಅಚ್ಚುಕಟ್ಟಾಗಿ ನಡೆಯಿತು. ಮಹಿಳೆಯರ ನಡೆಸಿಕೊಟ್ಟ ಸುಂದರನ ಮದಿಮೆ ಎಂಬ ನಾಟಕ ಎಲ್ಲರ ಗಮನ ಸೆಳೆಯಿತು.
ಈ ಸಂದರ್ಭದಲ್ಲಿ ಸಮುದಾಯದ 55ಮಕ್ಕಳಿಗೆ ಸ್ಕೂಲ್ ಬ್ಯಾಗ್,11 ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನವನ್ನು ನೀಡುವುದರ ಮೂಲಕ ಆಟಿಡೊಂಜಿ ಕೂಟ ಕೇವಲ ಸಾಂಸ್ಕøತಿಕ ಕಾರ್ಯಕ್ರಮ ಮತ್ತು ತಿಂಡಿ ತಿನಸುಗಳಿಗೆ ಮಾತ್ರವಲ್ಲ ಸಮುದಾಯದ ವಿದ್ಯಾರ್ಥಿಗಳ ಕಲಿಕೆಗೂ ನೆರವಾಗಬೇಕು ಎಂಬುದನ್ನು ತಿಳಿಸಿಕೊಟ್ಟರು.
ಸಮುದಾಯದಲ್ಲಿ ಆರೋಗ್ಯ ಸಮಸ್ಯೆ ಹಾಗೂ ಇನ್ನಿತರೆ ಸಂಕಷ್ಟ ಕಾಲದಲ್ಲಿ ಆರ್ಥಿಕವಾಗಿ ಸಾಹಾಯ ಮಾಡಿದ ಬಗ್ಗೆ ಸಂಘದ ಕಾರ್ಯದರ್ಶಿ ಅರುಣ್ ಶೆಟ್ಟಿ ತನ್ನ ವರದಿಯಲ್ಲಿ ತಿಳಿಸಿದರು.
ದಾನಿಗಳ ಸಹಕಾರದಿಂದ ಮಕ್ಕಳಿಗೆ ಶಾಲಾ ಬ್ಯಾಗ್ ಹಾಗೂ ವಿದ್ಯಾರ್ಥಿ ವೇತನವನ್ನು ನೀಡಿದ್ದೇವೆ. ಬಂಟ ಸಮುದಾಯವನ್ನು ಇನ್ನಷ್ಟು ಗಟ್ಟಿಗೊಳಿಸಬೇಕು ಎಂದು ಸಂಘದ ಅಧ್ಯಕ್ಷ ಕಿರಣ್ ಶೆಟ್ಟಿ ಹೇಳಿದರು.
ಸಮುದಾಯದಲ್ಲಿ ಅಗಲಿದ ವ್ಯಕ್ತಿಗಳನ್ನು ನೆನಪಿಸಿ ಅವರಿಗೆ ಶೃದ್ಧಾಂಜಲಿ ಸಲ್ಲಿಸಲಾಯಿತು. ವಿಶೇಷವಾಗಿ ಸಾಧನೆ ಮಾಡಿದ ವ್ಯಕ್ತಿಗಳನ್ನು ಅಭಿನಂದಿಸಲಾಯಿತು.
ಗಮನ ಸೆಳೆದ ವಿವಿಧ ಖಾಧ್ಯಗಳು.
ಆಟಿಡೊಂಜಿ ಕೂಟದಲ್ಲಿ ಮಹಿಳೆಯರು ಮನೆಯಿಂದಲೇ ತಯಾರಿಸಿ ತಂದಿದ್ದ 40ಕ್ಕೂ ಹೆಚ್ಚು ಬಗೆಯ ಖಾದ್ಯಗಳು ಗಮನಸೆಳೆದವು.
ತುಳುನಾಡಿನ ಆಟಿ ಮಾಸದ ಸ್ವಾದಿಷ್ಟ ಖಾದ್ಯಗಳಾದ ಅರಶಿನ ಕಡುಬು, ಹಲಸಿನ ಹಣ್ಣಿನ ಕಡುಬು, ಪತ್ರೊಡೆ, ಕೋಳಿ ರೊಟ್ಟಿ, ಒಂದೆಲಗ ಚಟ್ನಿ, ಸಿಗಡಿ ಚಟ್ನಿ, ಎಟ್ಟಿ ಚಟ್ನಿ,ಮೊಟ್ಟೆ ಗಸಿ, ಕೆಸುವಿನ ಪಲ್ಯ, ಕೆಸುವಿನ ಚಟ್ನಿ, ಕಳಲೆ ಪಲ್ಯ, ಶ್ಯಾವಿಗೆ ಕಡುಬು, ಹುರುಳಿ ಚಟ್ನಿ, ಹುರುಳಿ ಸಾರು, ಚಿಕನ್ ಪುಳಿ ಮುಂಚಿ, ಚಿಕನ್ ಸುಕ್ಕ, ಅರಶಿನ ಎಲೆ ಕಡುಬು,ತಜಂಕ್ ಪಲ್ಯ, ಮೊಳಕೆ ಕಾಳು ಪಲ್ಯ. ಶ್ಯಾವಿಗೆ, ಇಡ್ಲಿಗಳು ಗಮನ ಸೆಳೆದವು. ನೆರೆದ ನೂರಾರು ಜನ ವಿಶೇಷ ಖಾದ್ಯಗಳನ್ನು ಸವಿದು ಮೆಚ್ಚುಗೆ ವ್ಯಕ್ತಪಡಿಸಿದರು.
ಒಟ್ನಲ್ಲಿ ತಮ್ಮ ಎಲ್ಲ ಜಂಜಾಟಗಳನ್ನು ಬದಿಗೊತ್ತಿ ಆಟಿಡೊಂಜಿ ಕೂಟವನ್ನು ಸಡಗರ ಸಂಭ್ರದಿಂದ ಆಚರಿಸಿದರು.
ಈ ಸಂದರ್ಭದಲ್ಲಿ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲ ವಿನಯಕುಮಾರ್ ಶೆಟ್ಟಿ. ಮುಖಂಡರಾದ ಶೇಖರ ಶೆಟ್ಟಿ, ಗೋಪಾಲ ಶೆಟ್ಟಿ, ಶ್ಯಾಮ್ ಶೆಟ್ಟಿ, ಸುರೇಂದ್ರ ಶೆಟ್ಟಿ, ಕುಸುಮವಾತಿ ಶೆಟ್ಟಿ, ಸುಪರ್ಣ ಪ್ರಕಾಶ್, ಉದಯ್ ಶೆಟ್ಟಿ ಇತರರು ಇದ್ದರು.