ಕಳಸ ಲೈವ್ ವರದಿ
ಕುದುರೆಮುಖ ದಿನಗೂಲಿ ಕಾರ್ಮಿಕರ ವಸತಿ ಸಮಸ್ಯೆಗೆ ಶಾಶ್ವತ ಪರಿಹಾರ ಬೇಕೇ ಹೊರತು ತಾತ್ಕಾಲಿಕ ಪರಿಹಾರ ಅಲ್ಲ ಎಂದು ಕುದುರೆಮುಖ ದಿನಗೂಲಿ ನಿರಾಶ್ರಿತರ ಹೋರಾಟ ಸಮಿತಿ ಸಂಚಾಲಕ ರಮೇಶ್ ಕೆಳಗೂರು ತಿಳಿಸಿದ್ದಾರೆ.
ಕುದುರೆಮುಖ ಸಂಸ್ಥೆ ಮುಚ್ಚಿದ 2005ರಿಂದ ಇಲ್ಲಿಯವರೆಗೆ ದಿನಗೂಲಿ ಕಾರ್ಮಿಕರು ಸತತ ಹೋರಾಟ ಮಾಡುತ್ತಲೇ ಇದ್ದಾರೆ. ಜಿಲ್ಲಾಧಿಕಾರಿ ಕಚೇರಿಗೆ ಜಾಥಾ, ಕಳಸ ತಾಲ್ಲೂಕು ಕಚೇರಿ ಮುಂದೆ ಧರಣಿ, ಕಲ್ಮಕ್ಕಿಯಲ್ಲಿ ಟೆಂಟ್ ಚಳವಳಿ ನಡೆಸಲಾಗಿದೆ.ಜಿಲ್ಲಾಧಿಕಾರಿ ಹರ್ಷ ಗುಪ್ತ, ಪೊಲೀಸ್ ವರಿಷ್ಠಾಧಿಕಾರಿ ಮಧುಕರ ಶೆಟ್ಟಿ ಇದ್ದಾಗ ಕುದುರೆಮುಖ ದಿನಗೂಲಿ ನೌಕರರಿಗೆ ಕಳಸದಲ್ಲಿ 10 ಎಕರೆ ಭೂಮಿ ಮಂಜೂರು ಮಾಡಿದೆ. ಆದರೆ ಈವರೆಗೂ ಫಲಾನುಭವಿಗಳಿಗೆ ನಿವೇಶನ ನೀಡಲು ಸಾಧ್ಯವಾಗಲಿಲ್ಲ.
ಮೂಡಿಗೆರೆ ಪಟ್ಟಣ ಪಂಚಾಯಿತಿಯು ದಿನಗೂಲಿ ಕಾರ್ಮಿಕರ ನಿವೇಶನ ಸಜ್ಜುಗೊಳಿಸಬೇಕು.ಆದರೆ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಈವರೆಗೂ ನಿವೇಶನ ಸಜ್ಜುಗೊಳಿಸುವ ಕೆಲಸ ಮುಗಿದಿಲ್ಲ. ಇದರಿಂದ ಕಾರ್ಮಿಕರು ನರಕ ಸದೃಶ ಜೀವನ ನಡೆಸುತ್ತಿದ್ದಾರೆ. ಪ್ರತೀ ಬಾರಿ ಮಾಧ್ಯಮದಲ್ಲಿ ವರದಿ ಆದಾಗ ಮಾತ್ರ ಅಧಿಕಾರಿಗಳು ಚುರುಕು ಆಗುತ್ತಾರೆ. ಅನಂತರ ಸಮಸ್ಯೆ ಮುಂದುವರೆಯುತ್ತದೆ.
ಕುದುರೆಮುಖ ಅಧಿಸೂಚಿತ ಪ್ರದೇಶದ ಅಧ್ಯಕ್ಷರು ಜಿಲ್ಲಾಧಿಕಾರಿಯೇ ಆಗಿದ್ದಾರೆ. ಈಗಿನ ಜಿಲ್ಲಾಧಿಕಾರಿ ಜನಪರ ಕಾಲಾಜಿಯಿಂದ ಕುದುರೆಮುಖ ದಿನಗೂಲಿ ಕಾರ್ಮಿಕರ ಸಮಸ್ಯೆಗೆ ಶಾಶ್ವತ ಪರಿಹಾರ ಒದಗಿಸಬೇಕು. ಅವರ ಸಮಸ್ಯೆ ಬಗೆಹರಿಸಬೇಕು. ಈ ಬಗ್ಗೆ ಅಧಿಕಾರಿಗಳು ಸೂಕ್ತ ಕ್ರಮ ವಹಿಸದಿದ್ದರೆ ದಿನಗೂಲಿ ಹೋರಾಟ ಸಮಿತಿಯು ಕಳಸ ತಾಲ್ಲೂಕು ಕಚೇರಿ ಮುಂಬಾಗ ನಿರಂತರ ಚಳವಳಿ ನಡೆಸಲಿದೆ ಎಂದು ತಿಳಿಸಿದ್ದಾರೆ.