ಕಳಸ ಲೈವ್ ವರದಿ
ಕಳಸ ತಾಲ್ಲೂಕಿನ ಸಂಸೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಈಚಲಹೊಳೆ ಗಿರಿಜನ ಕಾಲೋನಿಯ ಮಹಿಳೆ ಶೇಷಮ್ಮ ಬುಧವಾರ ತೀವ್ರ ಅಸ್ವಸ್ಥರಾಗಿದ್ದರು. ಗ್ರಾಮಕ್ಕೆ ರಸ್ತೆ ಸಂಪರ್ಕ ಇಲ್ಲದ ಹಿನ್ನಲೆಯಲ್ಲಿ ಗ್ರಾಮದ ಗಿರಿಜನರು ಜೋಳಿಗೆ ಕಟ್ಟಿ ಶೇಷಮ್ಮ ಅವರನ್ನು ಹೊತ್ತುಕೊಂಡು ಬಂದು ಕಳಸ ಆಸ್ಪತ್ರೆಗೆ ಸೇರಿಸಿದರು.
ಕಳಕೋಡಿನಿಂದ ಈಚಲಹೊಳೆಗೆ ಮೂರು ಕಿ.ಮೀ ದಾರಿ ಇದೆ. ಈಚಲಹೊಳೆ ಕಾಲೋನಿಯಲ್ಲಿ ಸುಮಾರು 10 ಗಿರಿಜನ ಕುಟುಂಬಗಳು ವಾಸವಾಗಿದ್ದಾರೆ. ಈ ಕಾಲೋನಿಗೆ ಈಗಲೂ ರಸ್ತೆ ಸಂಪರ್ಕ ಇಲ್ಲ. ಗಿರಿಜನರು ಅನಾರೋಗ್ಯದಂತಹ ಸ್ಥಿತಿಯಲ್ಲಿ ರೋಗಿಗಳನ್ನು ಜೋಳಿಗೆಯಲ್ಲೇ ಹೊತ್ತುಕೊಂಡು ಕಳಕೋಡುವರೆಗೆ ತರಬೇಕಿದೆ.
ಕಳೆದ ಬಾರಿಯು ಇಲ್ಲಿ ಅನಾರೋಗ್ಯಗೊಂಡಿದ್ದ ಮಹಿಳೆಯೊಬ್ಬರನ್ನು ಜೋಳಿಗೆಯಲ್ಲಿ ಕಟ್ಟಿ ಹೊತ್ತು ತಂದು ಆಸ್ಪತ್ರೆ ಸೇರಿಸಿದ್ದ ಘಟನೆ ನಡೆದಿತ್ತು.
ಕಳಕೋಡಿನಿಂದ ಈಚಲಹೊಳೆಗೆ ಸಂಪರ್ಕ ರಸ್ತೆ ಬೇಕು ಎಂಬ ಗಿರಿಜನರ ಬೇಡಿಕೆ ಇದೆ.ಕುದುರೆಮುಖ ರಾಷ್ಟ್ರೀಯ ಉದ್ಯಾನದ ನಡುವೆ ಪ್ರಸ್ತಾಪಿತ ರಸ್ತೆಯ ಅರ್ಧ ಕಿ.ಮೀ. ಹಾದು ಹೋಗುವುದರಿಂದ ರಸ್ತೆ ನಿರ್ಮಾಣಕ್ಕೆ ಅರಣ್ಯ ಇಲಾಖೆ ತಡೆ ಒಡ್ಡಿದೆ ಎಂಬುದು ಗ್ರಾಮಸ್ಥರ ಆರೋಪ.
‘ನ್ಯಾಷನಲ್ ಪಾರ್ಕ್ ಹೆಸರಲ್ಲಿ ನಮಗೆ ಅರಣ್ಯ ಇಲಾಖೆ ಕಿರುಕುಳ ಕೊಡ್ತಾರೆ.ನಮಗೆ ಯಾವ ಮೂಲಭೂತ ಸೌಕರ್ಯವೂ ಸಿಕ್ಕಿಲ್ಲ.ಹಿಂದಿನ ಶಾಸಕರಿಗೆ ಮನವಿ ಕೊಟ್ಟಿದ್ದೆವು.ಆದರೆ ಯಾವ ಪ್ರಯೋಜನವೂ ಆಗಿಲ್ಲ.ಈಗಿನ ಶಾಸಕರು ನಮ್ಮ ಇಂದಿನ ಸ್ಥಿತಿ ನೋಡಿ ರಸ್ತೆ ಮಾಡಿಕೊಡಬೇಕು’ ಎಂದು ಸ್ಥಳೀಯರಾದ ರಮೇಶ್ ಒತ್ತಾಯಿಸುತ್ತಾರೆ.