ಕಳಸ ಲೈವ್ ವರದಿ
ಇಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕಗಳ ವತಿಯಿಂದ ಸಂಸೆಯ ಕೇಂದ್ರ ವಾಲ್ಮೀಕಿ ಆಶ್ರಮ ಶಾಲೆಯಲ್ಲಿ ಆಯೋಜಿಸಲಾಗಿದ್ದ ವಾರ್ಷಿಕ ವಿಶೇಷ ಶಿಬಿರದಲ್ಲಿ “ಜೀವವೈವಿಧ್ಯತೆ ಮತ್ತುಅರಣ್ಯ” ಎಂಬ ವಿಷಯದ ಬಗ್ಗೆ ಉಪನ್ಯಾಸ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದ ಬಾಳೆಹೊನ್ನೂರು ವಲಯದ ಸೀಕೆ ವಿಭಾಗದ ಉಪ ವಲಯ ಅರಣ್ಯಾಧಿಕಾರಿ ಮತ್ತು ಮೋಜುಣಿದಾರ ಆದಿತ್ಯರಾವ್ ಮಾತನಾಡಿ “ನಮ್ಮ ಪಶ್ಚಿಮ ಘಟ್ಟಗಳು ವಿಶ್ವ ಸಂಸ್ಥೆಯ ಯುನೆಸ್ಕೋ ಪಾರಂಪರಿಕ ಪಟ್ಟಿಯಲ್ಲಿ ಗುರುತಿಸಲ್ಪಟ್ಟಿದೆ, ಈ ಅರಣ್ಯಗಳನ್ನು ಜೀವವೈವಿಧ್ಯತೆಯ ಹಾಟ್ಸ್ಪಾಟ್ ಎಂದೂ ಕರೆಯಲಾಗಿದೆ. ಇಲ್ಲಿ ಪ್ರಪಂಚದ ಯಾವುದೇ ಭಾಗದಲ್ಲಿ ಯೂಕಂಡು ಬರದ ಸಸ್ಯ, ಕೀಟಗಳು, ಪಕ್ಷಿಗಳು ಮತ್ತು ಪ್ರಾಣಿ ಸಂಕುಲಗಳು ಜೀವಿಸುತ್ತವೆ. ಇಲ್ಲಿರುವ ಪ್ರತಿಯೊಂದು ಜೀವಿಯೂ ಪರಸ್ಪರ ಒಂದನ್ನೊಂದು ಅವಲಂಬಿಸಿ ಬದುಕುತ್ತಿವೆ. ಯಾವುದೇ ಸಸ್ಯ ಅಥವಾ ಪ್ರಾಣಿಯ ನಾಶ ಮತ್ತೊಂದು ಅವಲಂಬಿತ ಜೀವಿಯ ಅಂತ್ಯಕ್ಕೆ ಕಾರಣವಾಗುತ್ತದೆ. ಹಲವು ಪ್ರಾಕೃತಿಕ ಅದ್ಬುತ ಮತ್ತು ಕುತೂಹಲಗಳ ಕಣಜವಾಗಿರುವ ಈ ಸುಂದರ ಅರಣ್ಯವನ್ನು ಅವು ಇರುವಂತೆಯೇ ಉಳಿಸಿಕೊಳ್ಳಬೇಕಾದ ಅಗತ್ಯತೆ ಇದೆ” ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮವನ್ನು ಕಳಸದ ಉಪವಲಯಅರಣ್ಯಾಧಿಕಾರಿ ದರ್ಶನ್ ಮತ್ತು ಮಂಜುನಾಥ್ ನಾಯ್ಕ್ ಉದ್ಘಾಟಿಸಿದರು. ನಂತರ ಮಾತನಾಡಿದ ಅರಣ್ಯಾಧಿಕಾರಿ ದರ್ಶನ್ “ಸ್ಥಳೀಯ ಪರಿಸರದ ಸಂರಕ್ಷಣೆಗೆ ವಿದ್ಯಾರ್ಥಿಗಳು ಅರಣ್ಯ ಇಲಾಖೆಯೊಂದಿಗೆ ಕೈಜೋಡಿಸಬೇಕು” ಎಂದರು.
ಪ್ರಾಂಶುಪಾಲ ವಿನಯಕುಮಾರ್ ಶೆಟ್ಟಿ, ಕಾರ್ಯಕ್ರಮಾಧಿಕಾರಿ ವಿಶುಕುಮಾರ್, ಸುಧೀರ್ಜೈನ್, ಸಂಸೆ ಗ್ರಾಮ ಪಂಚಾಯಿತಿ ಸದಸ್ಯೆ ಸುನಿತಾ, ನಿವೃತ್ತ ಉಪ ತಹಶೀಲ್ದಾರ್ ಕೀರ್ತಿಜೈನ್, ಶಾಸಕರ ಆಪ್ತಸಹಾಯಕ ಸಂಸುದ್ದೀನ್, ಸ್ಥಳೀಯರಾದ ಅನುಪಮಾ ಸತೀಶ್, ರಾಮಪ್ರಕಾಶ್, ಸತೀಶ್, ಗ್ರಂಥಪಾಲಕ ನಾಗೇಂದ್ರ ಕೆ, ಉಪನ್ಯಾಸಕರಾದ ಮಧುರಾ, ಮಹೇಶ್, ಅಕ್ಷತಾ ಇದ್ದರು.