ಕಳಸ ಲೈವ್ ವರದಿ
ಕಳಸ ತಾಲ್ಲೂಕಿನ ಬಹುತೇಕ ರಸ್ತೆಗಳ ಸಮಸ್ಯೆ ಇದ್ದು, ಈ ರಸ್ತೆಗಳ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ಕೊಡುವುದರೊಂದಿಗೆ ಕಳಸ ತಾಲ್ಲೂಕಿನ ಸಮಗ್ರ ಅಭಿವೃದ್ಧಿಯನ್ನು ಮಾಡುತ್ತೇನೆ ಎಂದು ಮೂಡಿಗೆರೆ ಶಾಸಕಿ ನಯನ ಮೋಟಮ್ಮ ಹೇಳಿದರು.
ಬುಧವಾರ ತಾಲ್ಲೂಕಿನ ಕೆಲ ರಸ್ತೆ ಕಾಮಗಾರಿ ಮತ್ತು ವಿದ್ಯಾರ್ಥಿ ನಿಲಯದ ಕಾಮಗಾರಿಗೆ ಚಾಲನೆ ನೀಡಿ ನಂತರ ಮಾತನಾಡಿದ ಅವರು 20 ವರ್ಷಗಳಿಂದ ಕಳಸ ತಾಲ್ಲೂಕಿನಲ್ಲಿ ಬಹಳಷ್ಟು ಕಾಮಗಾರಿಗಳು ಬಾಕಿ ಇದ್ದು ಅದನ್ನು ನನ್ನ ಐದು ವರ್ಷದ ಅವಧಿಯಲ್ಲಿ ಪೂರೈಸುತ್ತೇನೆ. ಕುದುರೆಮುಖದ ವಿನೋಬನಗರದ ಲೇಬರ್ ಕಾಲೋನಿಯಲ್ಲಿರುವ ನಿರಾಶ್ರಿತರಿಗೆ ಪುನರ್ವಸತಿ ಇನ್ನೂ ಆಗಿಲ್ಲ ಅವರಿಗೆ ನಿವೇಶನ ನೀಡುವ ಆದ್ಯತೆ ಇದೆ. ಕಳಸ ತಾಲ್ಲೂಕಿನ ಆರು ಗ್ರಾಮ ಪಂಚಾಯಿತಿಗಳಲ್ಲಿ ಸಾಕಷ್ಟು ನಿವೇಶನ ರಹಿತರಿದ್ದಾರೆ. ನಿವೇಶನ ನೀಡಲು ಎಲ್ಲಾ ಪಂಚಾಯಿತಿ ವ್ಯಾಪ್ತಿಯಲ್ಲಿ ಭೂಮಿಯೂ ಇದೆ. ಆದರೆ ಅದನ್ನು ನಿವೇಶನ ರಹಿತರಿಗೆ ನೀಡಲು 20 ವರ್ಷದಿಂದ ಸಾಧ್ಯವಾಗಲಿಲ್ಲ ಆದ್ದರಿಂದ ನಿವೇಶನ ರಹಿತರಿಗೆ ನಿವೇಶನ ಕೊಡುವ ಆದ್ಯತೆಯು ಇದೆ. ಕಳಸ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವೈದ್ಯರ ಕೊರತೆ ಇದೆ ಅದನ್ನು ಕೂಡ ಪೂರೈಸುತ್ತೇನೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ತಲಗೋಡು ಗ್ರಾಮದ ರಸ್ತೆ, ಅಂಬಾತೀರ್ಥ ರಸ್ತೆ ಹಾಗೂ 6.5 ಕೋಟಿ ವೆಚ್ಚದ ಮೆಟ್ರಿಕ್ ನಂತರದ ಬಾಲಕೀಯರ ವಿದ್ಯಾರ್ಥಿನಿಲಯದ ಕಾಮಗಾರಿಗಳಿಗೆ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಕೆಪಿಸಿಸಿ ಸದಸ್ಯ ಕೆ.ಆರ್.ಪ್ರಭಾಕರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ಎ.ಶ್ರೇಣಿಕ್, ಕಾರ್ಯದರ್ಶಿ ವಿಶ್ವನಾಥ, ಯೂತ್ ಅದ್ಯಕ್ಷ ಕೆ.ಸಿ.ಮಹೇಶ್, ಮುಖಂಡರಾದ ರಾಜೇಂದ್ರ ಹಿತ್ತಲಮಕ್ಕಿ, ಮಹಮ್ಮದ್ ರಫೀಕ್, ವೀರೇಂದ್ರ, ಕಡೆಗುಡಿಗೆ ಸುಧಾಕರ್, ಗಣೇಶ್ ಭಟ್, ತಹಶೀಲ್ದಾರ್ ತನುಜಾ, ಕಂದಾಯ ನಿರೀಕ್ಷಕ ಅಜ್ಜೇಗೌಡ, ಕಳಸ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸುಜಯ ಸದಾನಂದ, ಸದಸ್ಯೆ ಜಮೀಲಾ ರಫೀಕ್ ಇತರರು ಇದ್ದರು.