ಕಳಸ ಲೈವ್ ವರದಿ
ಮೂಡಿಗೆರೆ ವಿಧಾನಸಭೆ ಕ್ಷೇತ್ರದ ಚುನಾವಣೆ ಫಲಿತಾಂಶ ಶನಿವಾರ ಹೊರ ಬಂದಿದ್ದು, ಕಾಂಗ್ರೆಸ್ ಅಭ್ಯರ್ಥಿ ನಯನಾ ಮೋಟಮ್ಮ ಅವರು 50843 ಮತ ಗಳಿಸುವ ಮೂಲಕ 722 ಮತಗಳಿಂದ ಎದುರಾಳಿ ಬಿಜೆಪಿ ಅಭ್ಯರ್ಥಿ ದೀಪಕ್ ದೊಡ್ಡಯ್ಯ ಅವರನ್ನು ಪರಾಭವಗೊಳಿಸಿದ್ದಾರೆ. ಜೆಡಿಎಸ್ ಅಭ್ಯರ್ಥಿ ಎಂ.ಪಿ.ಕುಮಾರಸ್ವಾಮಿ ಅವರು 26038 ಮತ ಗಳಿಸುವ ಮೂಲಕ ಮೂರನೇ ಸ್ಥಾನ ಪಡೆದಿದ್ದಾರೆ.
ಗೆಲುವು ಸಾಧಿಸಿದ ನಯನಾ ಮೋಟಮ್ಮ ಅವರಿಗೆ ಅದ್ದೂರಿಯಾಗಿ ಸ್ವಾಗತಿಸಲು ಹಾಗೂ ಅಭಿನಂದನೆ ಸಲ್ಲಿಸಲು ಮಧ್ಯಾಹ್ನ 1ಗಂಟೆಯಿಂದ ಮೂಡಿಗೆರೆ ಪಟ್ಟಣದ ಕಾಂಗ್ರೆಸ್ ಭವನ ಪಟ್ಟಣದ ಹೊರವಲಯದ ಕೊಲ್ಲಿಬೈಲ್ ಸರ್ಕಲ್ನಲ್ಲಿ ಸಾವಿರಾರು ಸಂಖ್ಯೆಯಲ್ಲಿ ಕಾರ್ಯಕರ್ತರು ಸಂಚೆವರೆಗೆ ಕಾದಿದ್ದರು. ಸಂಜೆ ನಯನಾ ಮೋಟಮ್ಮ ಬರುತ್ತಿದ್ದಂತೆ ಕೊಲ್ಲಿಬೈಲ್ ಸರ್ಕಲ್ನಲ್ಲಿ ಪಟಾಕಿ ಸಿಡಿಸಿ, ಡಿಜೆ ಮತ್ತು ವಾಧ್ಯಗಳ ಮೂಲಕ ಕಾಂಗ್ರೆಸ್ ಭವನವರೆಗೆ ಮೆರವಣಿಗೆ ಮೂಲಕ ಬರಮಾಡಿಕೊಳ್ಳಲಾಯಿತು. ಬಳಿಕ ಕಾಂಗ್ರೆಸ್ ಭವನದಲ್ಲಿ ಕಾರ್ಯಕರ್ತರು ಅಭಿನಂದಿಸಿದರು.
ಈ ಸಂದರ್ಭದಲ್ಲಿ ನಯನಾ ಮೋಟಮ್ಮ ಮಾತನಾಡಿ, ಬಿಜೆಪಿಯ ದುರಾಡಳಿತದಿಂದ ಜಿಲ್ಲೆ ಹಾಗೂ ರಾಜ್ಯದಲ್ಲಿಯೇ ಬಿಜೆಪಿಯನ್ನು ಜನತೆ ತಿರಸ್ಕಾರ ಮಾಡಿದ್ದಾರೆ. ಅದಕ್ಕೆ ಈ ಚುನಾವಣೆ ಸಾಕ್ಷಿಯಾಗಿದೆ. ಮೂಡಿಗೆರೆ ಕ್ಷೇತ್ರ ಅಭಿವೃದ್ಧಿಯಲ್ಲಿ ಹಿಂದುಳಿದಿದೆ. ಮೂಡಿಗೆರೆಯನ್ನು ಇಡೀ ರಾಜ್ಯವೇ ತಿರುಗಿ ನೋಡುವಂತೆ ಅಭಿವೃದ್ಧಿಪಡಿಸುದೇ ನನ್ನ ಗುರಿಯಾಗಿದೆ. ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಕೂಡ ಬಹಳ ಹುಮ್ಮಸ್ಸಿನಿಂದ ಕೆಲಸ ಮಾಡಿದ ಪರಿಣಾಮ ಗೆಲವು ಸಾಧ್ಯವಾಗಿದೆ.ಅವರ ಋಣ ತೀರಿಸುವ ಜವಾಬ್ದಾರಿ ನನ್ನ ಮೇಲಿದೆ ಎಂದು ಹೇಳಿದರು.
ಇದು ನನಗೆ ಮೊದಲ ಸ್ಪರ್ಧೆ ಹಾಗೂ ಮೊದಲ ಜಯ. ನನ್ನ ತಾಯಿ ಮೊಟಮ್ಮ ಅವರ ಜನಪರ ಕಾರ್ಯ ನೋಡಿ, ಪ್ರೇರೇಪಿತಳಾದ ನಾನು ಜನಸೇವೆ ಮಾಡಬೇಕೆಂದು ರಾಜಕೀಯ ಕ್ಷೇತ್ರ ಪ್ರವೇಶ ಮಾಡಿದೆ. ಕಳೆದ 20 ವರ್ಷದಿಂದ ಕಾಂಗ್ರೆಸ್ 2ನೇ ಸ್ಥಾನ ಪಡೆಯುವ ಮೂಲಕ ಸೋಲು ಅನುಭವಿಸುತ್ತಲೇ ಬಂದಿದೆ. ಈ ಬಾರಿ ಗೆಲುವು ಪಡೆಯಲೇಬೇಕೆಂಬ ದೃಷ್ಟಿಯಿಂದ ಪಕ್ಷದ ಹಿರಿಯ ಮುಖಂಡರ ಹಾಗೂ ಕಾರ್ಯಕರ್ತರ ಮಾರ್ಗದರ್ಶನ ಪಡೆದು, ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷ ಸಂಘಟನಾತ್ಮಕವಾಗಿ ಕಟ್ಟಿದ್ದ ಪರಿಣಾಮ ಕಾಂಗ್ರೆಸ್ ಗೆಲುವಿಗೆ ಕಾರಣವಾಯಿತು ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಮಾಜಿ ಸಚಿವೆ ಮೋಟಮ್ಮ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಚ್.ಜಿ.ಸುರೇಂದ್ರ, ಗೃಹ ಮಂಡಳಿ ಮಾಜಿ ಅಧ್ಯಕ್ಷ ಹಾಲಪ್ಪಗೌಡ, ಮುಖಂಡರಾದ ಬಿ.ಎಸ್.ಜಯರಾಂಗೌಡ, ಸಿ.ಕೆ.ಇಬ್ರಾಹಿಂ ಮತ್ತಿತರರಿದ್ದರು.