ಕಳಸ ಲೈವ್ ವರದಿ
ಬಿಜೆಪಿ ಸರಕಾರದ ದುರಾಡಳಿತ ಹಾಗೂ ಈ ಹಿಂದೆ ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ನಡೆಸಿದ ಜನಪರ ಕಾರ್ಯ ಎರಡನ್ನೂ ತಾಳೆ ಹಾಕಿರುವ ಜನರು ಈ ಬಾರಿ ಕಾಂಗ್ರೆಸ್ಗೆ ಸ್ವಹಿಚ್ಚೆಯಿಂದ ಬೆಂಬಲ ನೀಡುತ್ತಿದ್ದಾರೆಂದು ಕಾಂಗ್ರೆಸ್ ಅಭ್ಯರ್ಥಿ ನಯನಾ ಮೋಟಮ್ಮ ಹೇಳಿದರು.
ಅವರು ಭಾನುವಾರ ಆಲ್ದೂರು ಭಾಗದ ಚಂಡಗೂಡನಹಳ್ಳಿ, ಉಳವಾಗಿಲು, ಜಕ್ಕನಹಳ್ಳಿ, ಕಟ್ರುಮನೆ, ತಳಿಹಳ್ಳಿ ಸೇರಿದಂತೆ ವಿವಿಧ ಗ್ರಾಮಗಳಿಗೆ ತೆರಳಿ ಮತಯಾಚಿಸಿ ಮಾತನಾಡಿದರು. ಕಾಂಗ್ರೆಸ್ ಜಾತಿ ಮೇಲಿಲ್ಲ. ನೀತಿ ಮೇಲಿದೆ. ಇಂದಿರಾಗಾಂಧಿ, ರಾಜೀವ್ಗಾಂಧಿ, ನೆಹರು, ಲಾಲ್ ಬಹದ್ದೂರು ಶಾಸ್ತ್ರಿ ಪ್ರಧಾನಿಯಾಗಿದ್ದಾಗ ಬಡವರಿಗೆ ನಿವೇಶನ, ಜಮೀನು, ಬಗರ್ ಹುಕಂ ಸಾಗುವಳಿ ಸಕ್ರಮ, ರೈತರ ಸಾಲ ಮನ್ನ ಸೇರಿದಂತೆ ಅನೇಕ ಜನಪರ ಕಾರ್ಯಕ್ರಮ ಮಾಡಿದ್ದು, ಅದರ ಪ್ರಯೋಜನ ದೇಶದ ಜನರು ಪಡೆದಿದ್ದಾರೆ. ಅಂತಹ ಕಾರ್ಯ ಬಿಜೆಪಿ, ಜೆಡಿಎಸ್ನಿಂದಲೂ ಸಾಧ್ಯವಾಗಿಲ್ಲ. ಹಾಗಾಗಿ ಜನರ ಬದುಕು ಹಸನಾಗಲು ಈ ಬಾರಿ ಜನರು ಕಾಂಗ್ರೆಸ್ ಅಧಿಕಾರಕ್ಕೆ ತರಲು ತುದಿಗಾಲಲ್ಲಿ ನಿಂತಿದ್ದಾರೆಂದು ಹೇಳದರು.
ನನ್ನ ಅಮ್ಮ ಮೋಟಮ್ಮ ಅವರು ಮಾಡಿದ ಮಹಾನ್ ಕಾರ್ಯಕ್ಕೆ ಇಂದಿಗೂ ಮೂಡಿಗೆರೆ ಪಟ್ಟಣ ಸೇರಿದಂತೆ 13 ಗ್ರಾಮದ ಜನರು ಹೇಮಾವತಿ ನೀರು ಕುಡಿಯುತ್ತಿದ್ದಾರೆ. 100 ಹಾಸಿಗೆಯುಳ್ಳ ಆಸ್ಪತ್ರೆ, 2010ರಲ್ಲಿ ವಿಷೇಶ ಕಾಫಿ ಪ್ಯಾಕೇಜ್ ತಂದು ಬೆಳಗಾರರ 750 ಕೋಟಿ ರೂ ಸಾಲ ಮನ್ನ ಮಾಡಿಸಿದ್ದಾರೆ. ರಾಜ್ಯದಲ್ಲಿ 175000 ಸ್ತ್ರೀ ಶಕ್ತಿ ಸಂಘ ರಚಿಸಿ ಮಹಿಳೆಯರ ಆರ್ಥಿಕ ಸಬಲೀಕರಣಕ್ಕೆ ವಿಶೇಷ ಕಾರ್ಯಕ್ರಮ ರೂಪಿಸುವ ಜತೆಗೆ ಇಂತಹ ಅನೇಕ ಜನಪರ ಕಾರ್ಯ ಮಾಡಿರುವುದನ್ನು ಜನರು ನೆನಪಿಸಿಕೊಳ್ಳುತ್ತಿದ್ದಾರೆ. ತನಗೆ ಒಂದು ಅವಕಾಶ ಕೊಡಿ ಎಂದು ಕೇಳಿಕೊಂಡರು.