ಕಳಸ ಲೈವ್ ವರದಿ
ಬೆಲೆ ಏರಿಕೆಯಿಂದಾಗಿ ಅವರ ಸರಕಾರ ಡಬಲ್ ಎಂಜಿನ್ ಸೀಜಾಗಿ ರಿಪೇರಿ ಮಾಡಲಾಗದ ಪರಿಸ್ಥಿತಿಗೆ ತಲುಪಿದೆ. ಈ ಬಾರಿ ಸಿ.ಟಿ.ರವಿ ಸೋಲು ಅನುಭವಿಸುವುದು ಖಚಿತ. ಅವರು ಮಾಜಿ ಶಾಸಕರಾಗುತ್ತಾರೆಂದು ಕೆಪಿಸಿಸಿ ರಾಜ್ಯಾಧ್ಯಕ್ಷ ಡಿ.ಕೆ.ಶಿವಕುಮಾರ್ ಭವಿಷ್ಯ ನುಡಿದರು.
ಅವರು ಶುಕ್ರವಾರ ಮೂಡಿಗೆರೆ ಪಟ್ಟಣದ ಹೊಯ್ಸಳ ಕ್ರೀಡಾಂಗಣದಲ್ಲಿ ಕಾಂಗ್ರೆಸ್ ಅಭ್ಯರ್ಥಿ ನಯನಾ ಮೋಟಮ್ಮ ಅವರ ಪರವಾಗಿ ಮತಯಾಚನೆಗಾಗಿ ಏರ್ಪಡಿಸಿದ್ದ ಬಹಿರಂಗ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು. ಬಿಜೆಪಿ ಹೊಡೆದ ಮನೆಯಾಗಿದೆ. ಅಭಿವೃದ್ಧಿ ಜತೆಗೆ ಪಕ್ಷಾತೀತವಾಗಿ ರಾಷ್ಟ್ರ ಧ್ವಜ ಹಾಗೂ ಕಾಂಗ್ರೆಸ್ ಧ್ವಜ ಹಿಡಿಯಬೇಕೆಂದು ಮುಖ್ಯಮಂತ್ರಿಯಾಗಿದ್ದ ಜಗದೀಶ್ ಶೆಟ್ಟರು, ಉಪ ಮುಖ್ಯಮಂತ್ರಿ ಲಕ್ಷ್ಮಣ್ ಸವದಿ ಸೇರಿದಂತೆ ಬಿಜೆಪಿ ಮತ್ತು ದಳದಿಂದ ದಂಡೇ ಕಾಂಗ್ರೆಸ್ಗೆ ಬಂದಿದ್ದಾರೆ. ಅದಕ್ಕಾಗಿ ಹೆದರಿ ಪ್ರಧಾನಿ ನರೇಂದ್ರ ಮೋದಿ, ಅಮಿತ್ ಷಾ ರಾಜ್ಯದಲ್ಲಿಯೇ ಮಲಗಿಬಿಟ್ಟಿದ್ದಾರೆ. ಕಮಲ ಕೆರೆಯಲ್ಲಿದ್ದರೆ ಚಂದ. ತೆನೆ ಹೊಲದಲ್ಲಿದ್ದರೆ ಚಂದ. ದಾನ ಧರ್ಮ ಮಾಡಿದ ಕೈ ಅಧಿಕಾರದಲ್ಲಿದ್ದರೆ ಚೆಂದ. ಮೂಡಿಗೆರೆ ಕ್ಷೇತ್ರದ ಕಾಂಗ್ರೆಸ್ ನಯನಾ ಮೋಟಮ್ಮ ಅವರು ಅಧಿಕಾರದಲ್ಲಿ ಇಲ್ಲದಿದ್ದರೂ ದಾನ ಧರ್ಮ ಮಾಡಿದ ಕೈ. ಹಾಗಾಗಿ ಅವರು ಅಧಿಕಾರಕ್ಕೆ ಬರಬೇಕೆಂದು ಹೇಳಿದರು.
ಇಲ್ಲಿ ಶಾಸಕರಾಗಿದ್ದ ಎಂ.ಪಿ.ಕುಮಾರಸ್ವಾಮಿ ಅವರು ಕಳೆದ 1 ವರ್ಷದಿಂದ ತನ್ನ ಬಾಗಿಲು ತಟ್ಟುತ್ತಿದ್ದರು. ಅವರಿಗೆ ಬಿಜೆಪಿಯಲ್ಲಿಯೇ ಟಿಕೇಟ್ ಕೊಟ್ಟಿಲ್ಲ. ಅಲ್ಲದೇ ಕಾಂಗ್ರೆಸ್ನಲ್ಲಿಯೇ ಪ್ರಭಲ ವ್ಯಕ್ತಿಗಳಿದ್ದಾಗ ನಾನೇಕೆ ಅವರಿಗೆ ಮಣೆ ಹಾಕಬೇಕು? ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಗೃಹಲಕ್ಷ್ಮಿಗೆ 2 ಸಾವಿರ ರೂ. ಪದವಿ ಮಾಡಿದವರಿಗೆ 3 ಸಾವಿರ, ಒಂದು ಕುಟುಂಬಕ್ಕೆ 10 ಅಕ್ಕಿ, ಮಹಿಳೆಯರಿಗೆ ಉಚಿತ ಸಾರಿಗೆ ವ್ಯವಸ್ಥೆ ಉಚಿತ. 200 ಯುನಿಟ್ ಉಚಿತ ನೀಡಲಾಗುವುದು. ಇದು ಸುಳ್ಳು ಎಂದು ಅಪಪ್ರಚಾರ ಮಾಡುವ ಬಗ್ಗೆ ಯಾರೂ ತಲೆ ಕೆಡಿಸಿಕೊಳ್ಳಬಾರದು. ದೇವರು ವರ ಮತ್ತು ಶಾಪ ಕೊಡುವುದಿಲ್ಲ. ಒಂದು ಬಾರಿ ಅವಕಾಶ ಕೊಡುತ್ತಾನೆ. ಅದನ್ನು ಉಪಯೋಗಿಸಿಕೊಂಡು ಜಿಲ್ಲೆಯಲ್ಲಿ ಹಿಂದೆ ಇಂದಿರಾಗಾಂಧಿ ಅವರ ಕೈ ಹಿಡಿದಂತೆ ಈ ಬಾರಿಯೂ ಕೂಡ ಜಿಲ್ಲೆಯಲ್ಲಿ 5 ಸ್ಥಾನದ ಕೈ ಬಲಪಡಿಸಬೇಕೆಂದು ಮನವಿ ಮಾಡಿದರು.
ಮಾಜಿ ಸಭಾಪತಿ ಬಿ.ಎಲ್.ಶಂಕರ್, ಮಾಜಿ ಸಚಿವರಾದ ಮೋಟಮ್ಮ, ಬಿ.ಬಿ.ನಿಂಗಯ್ಯ, ಮಾಜಿ ವಿಧಾನ ಪರಿಷತ್ ಸದಸ್ಯೆ ಗಾಯಿತ್ರಿ ಶಾಂತೆಗೌಡ, ಕಾಂಗ್ರೆಸ್ ಅಭ್ಯರ್ಥಿ ನಯನಾ ಮೋಟಮ್ಮ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಚ್.ಜಿ.ಸುರೇಂದ್ರ ವಹಿಸಿದ್ದರು. ಮಾಜಿ ಸಂಸದ ಬಿ.ಎನ್.ಚಂದ್ರಪ್ಪ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಡಾ.ಅಂಶುಮಂತ್, ಮುಖಂಡರಾದ ಸಚಿನ್ ಮಿಗಾ, ಎಚ್.ಎಚ್.ದೇವರಾಜು, ಎ.ಎನ್.ಮಹೇಶ್, ಎಂ.ಪಿ.ಮನು, ಕೆ.ಆರ್.ಪ್ರಭಾಕರ್, ಕೆ.ಎ.ಶ್ರೇಣಿಕ್ ಮತ್ತಿತರರಿದ್ದರು.