ಕಳಸ ಲೈವ್ ವರದಿ
ಬೆಲೆ ಇಲ್ಲದ ಸ್ಥಳದಲ್ಲಿ ಚಪ್ಪಿಲಿ ಕೂಡ ಬಿಡಬಾರದೆಂದು ಅಂಬೇಡ್ಕರ್ ಹೇಳಿದಂತೆ ತಾನು ಜೆಡಿಎಸ್ ಪಕ್ಷ ತೊರೆದು ಜಾತ್ಯಾತೀತ ಭಾವನೆಯುಳ್ಳ ತತ್ವ ಸಿದ್ದಾಂತ ಮೆಚ್ಚಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಳ್ಳುವ ತೀರ್ಮಾನ ತೆಗೆದುಕೊಂಡೆ ಎಂದು ಮಾಜಿ ಸಚಿವ ಬಿ.ಬಿ.ನಿಂಗಯ್ಯ ಹೇಳಿದರು.
ಅವರು ಶನಿವಾರ ಮೂಡಿಗೆರೆ ಕಾಂಗ್ರೆಸ್ ಕಚೇರಿಯಲ್ಲಿ ಏರ್ಪಡಿಸಿದ್ದ ಬಿ.ಬಿ.ನಿಂಗಯ್ಯ ಅವರಿಗೆ ಅಭಿನಂದನಾ ಸಭೆಯಲ್ಲಿ ಮಾತನಾಡಿದರು. ಜೆಡಿಎಸ್ನಲ್ಲಿ ನಿಷ್ಟೆಯಿಂದ ಕೆಲಸ ಮಾಡಿದಕ್ಕೆ ಪ್ರತಿಫಲ ಸಿಗಲಿಲ್ಲ. ತನಗೆ ಜೆಡಿಎಸ್ ಪಕ್ಷದಿಂದ ಟಿಕೇಟ್ ಘೋಷಣೆ ಮಾಡಿ, ನಂತರ ತನಗೆ ಗೊತ್ತಿಲ್ಲದೇ ಬಿಜೆಪಿಯಿಂದ ಹೊರ ದಬ್ಬಿದ ಎಂ.ಪಿ.ಕುಮಾರಸ್ವಾಮಿ ಅವರಿಗೆ ಬಿ.ಫಾರಂ ನೀಡಿದ್ದಾರೆ. ಈ ಬಗ್ಗೆ ತನ್ನ ಬೆಂಬಲಿಗರೊಂದಿಗೆ ಸಮಾಲೋಚನೆ ನಡೆಸಿದಾಗ ಕಾಂಗ್ರೆಸ್ ತತ್ವ ಸಿದ್ಧಾಂತವನ್ನು ಒಪ್ಪಿ ಕಾಂಗ್ರೆಸ್ಗೆ ಸೇರ್ಪಡೆಗೊಂಡಿದ್ದೇನೆ. ಬಹಳ ವರ್ಷದಿಂದ ಕಾಂಗ್ರೆಸ್ ಗೆಲುವಿನ ಅಂತಕ್ಕೆ ಬಂದು ಸೋತಿದೆ. ಈ ಬಾರಿ ನಮ್ಮ ಅಭ್ಯರ್ಥಿ ನಯನಾ ಮೋಟಮ್ಮ ಅವರನ್ನು ಗೆಲ್ಲಿಸುವ ಸಂಕಲ್ಪ ತೊಟ್ಟಿದ್ದೇನೆ. ಅದಕ್ಕೆ ಎಲ್ಲರೂ ಒಟ್ಟಾಗಿ ಕೆಲಸ ಮಾಡೋಣವೆಂದು ಕರೆ ನೀಡಿದರು.
ಮಾಜಿ ಸಚಿವೆ ಮೋಟಮ್ಮ ಮಾತನಾಡಿ, 3 ಬಾರಿ ಶಾಸಕರಾಗಿ ಹಾಗೂ 3 ಬಾರಿ ಸಚಿವರಾಗಿ ಕೆಲಸ ಮಾಡಿದಂತಹ ಶಕ್ತಿಯನ್ನೇ ಜೆಡಿಎಸ್ ಕಳೆದುಕೊಂಡಿದೆ. ಇದೀಗ ಬಿ.ಬಿ.ನಿಂಗಯ್ಯ ಅವರು ಕಾಂಗ್ರೆಸ್ಗೆ ಸೇರ್ಪಡೆಗೊಂಡಿದ್ದರಿಂದ ಪಕ್ಷಕ್ಕೆ ಇನ್ನಷ್ಟು ಬಲ ಹೆಚ್ಚಿಸಿದೆ. ಅವರಿಗೆ ನೋವಾಗದಂತೆ ನಡೆದುಕೊಳ್ಳಬೇಕು. ಇಡೀ ದೇಶವನ್ನು ಮಾರಾಟಕ್ಕಿಟ್ಟಿರುವ ಬಿಜೆಪಿ ನಡೆಯನ್ನು ತಡೆಯಬೇಕಿದೆ. ಕಾಂಗ್ರೆಸ್ ಆಡಳಿತದ ಜನಪರ ಯೋಜನೆ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಮೂಲಕ ಕಾಂಗ್ರೆಸ್ನ್ನು ಗೆಲ್ಲಿಸಲು ಕಾರ್ಯಕರ್ತರೆಲ್ಲರೂ ಶ್ರಮಿಸಬೇಕೆಂದು ಮನವಿ ಮಾಡಿದರು. .
ಇದಕ್ಕೂ ಮುನ್ನ ಬಿ.ಬಿ.ನಿಂಗಯ್ಯ ಅವರಿಗೆ ಬ್ಲಾಕ್ ಕಾಂಗ್ರೆಸ್ ವತಿಯಿಂದ ಅದ್ದೂರಿ ಸ್ವಾಗತ ಮಾಡುವ ಮೂಲಕ ಬರಮಾಡಿಕೊಳ್ಳಲಾಯಿತು. ಬಳಿಕ ಸಭೆಯಲ್ಲಿ ಬಿ.ಬಿ.ನಿಂಗಯ್ಯ ಅವರ ಪುತ್ರ ನಿಖಿಲ್ ಚಕ್ರವರ್ತಿ ಸೇರಿದಂತೆ ನೂರಾರು ಮಂದಿ ಜೆಡಿಎಸ್ ಕಾರ್ಯಕರ್ತರು ಹಾಗೂ ಮುಖಂಡರು ಕಾಂಗ್ರೆಸ್ ಸೇರ್ಪಡೆಗೊಂಡರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಚ್.ಜಿ.ಸುರೇಂದ್ರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕಾಂಗ್ರೆಸ್ ಜಿಲ್ಲಾಧ್ಯಕ್ಷ ಡಾ.ಅಂಶುಮಂತ್, ಮುಖಂಡರಾದ ಬಿ.ಎಸ್.ಜಯರಾಂ, ಜಿ.ಎಚ್.ಹಾಲಪ್ಪಗೌಡ, ಎಂ.ಎಸ್.ಅನಂತ್, ವಿನಯ್ ಕುಮಾರ್, ಕೆ.ಟಿ.ಜಗದೀಶ್ಗೌಡ, ಇರ್ಫಾನ್, ಡಿ.ಎಸ್.ರಘು, ಎಂ.ಪಿ.ಮನು, ಬಿ.ಸಿ.ಸತೀಶ್ ಮತ್ತಿತರರಿದ್ದರು.