ಕಳಸ ಲೈವ್ ವರದಿ
ಮೂಡಿಗೆರೆ ಜೆ.ಡಿ.ಎಸ್. ಪಕ್ಷದ ಅಭ್ಯರ್ಥಿಯಾಗಿ ಎಂ.ಪಿ. ಕುಮಾರಸ್ವಾಮಿಯವರು ಸೋಮವಾರ ಸಾಂಕೇತಿಕವಾಗಿ ನಾಮಪತ್ರ ಸಲ್ಲಿಸಿದ ಬೆನ್ನಲ್ಲೇ, ಬಿ.ಬಿ.ನಿಂಗಯ್ಯನವರು ಕೂಡ ಜೆಡಿಎಸ್ ಪಕ್ಷದ ಅಭ್ಯರ್ಥಿಯಾಗಿ ಬುಧವಾರ ನಾಮಪತ್ರ ಸಲ್ಲಿಸುತ್ತೇನೆ ಎಂದಿರುವುದು ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.
ಮೊದಲ ಪಟ್ಟಿಯಲ್ಲಿ ಬಿ.ಬಿ.ನಿಂಗಯ್ಯನವರಿಗೆ ಘೋಷಣೆಯಾಗಿದ್ದ ಟಿಕೆಟ್ ಬಿ.ಜೆ.ಪಿ. ತೊರೆದು ಬಂದಿರುವ ಶಾಸಕ ಎಂ.ಪಿ. ಕುಮಾರಸ್ವಾಮಿಯವರ ಪಾಲಾಗಿತ್ತು. ಅದರಂತೆ ಎಂ.ಪಿ.ಕುಮಾರಸ್ವಾಮಿ ತಮ್ಮ ಬೆಂಬಲಿಗರೊಂದಿಗೆ ಸೋಮವಾರ ಜೆಡಿಎಸ್ ಪಕ್ಷದ ಅಭ್ಯರ್ಥಿಯಾಗಿ ನಾಮ ಪತ್ರ ಸಲ್ಲಿಸಿದ್ದಾರೆ.
ಈ ವಿಚಾರವಾಗಿ ಪಕ್ಷದಲ್ಲಿ ಸ್ಪಷ್ಟವಾದ ಎರಡು ಬಣಗಳು ಸೃಷ್ಟಿಯಾಗಿದ್ದು ಜಿಲ್ಲಾಧ್ಯಕ್ಷ ರಂಜನ್ ಅಜಿತ್ ಕುಮಾರ್ ಸೇರಿದಂತೆ ಅನೇಕ ಮುಖಂಡರು ಎಂ.ಪಿ.ಕುಮಾರಸ್ವಾಮಿಯವರಿಗೆ ತಮ್ಮ ಬೆಂಬಲ ವ್ಯಕ್ತಪಡಿಸಿದ್ದಾರೆ.
ಆದರೆ ಬಿ.ಬಿ.ನಿಂಗಯ್ಯ ಸೇರಿದಂತೆ ಅವರ ಬೆಂಬಲಿಗ ಅನೇಕ ಮುಖಂಡರು ಕಾರ್ಯಕರ್ತರು ಕುಮಾರಸ್ವಾಮಿಯವರಿಗೆ ಟಿಕೆಟ್ ನೀಡಿರುವುದಕ್ಕೆ ತಮ್ಮ ತೀವ್ರ ವಿರೋಧ ವ್ಯಕ್ತಪಡಿಸುತ್ತಿದ್ದಾರೆ.
ಒಟ್ಟಾರೆ ಅಭ್ಯರ್ಥಿ ವಿಚಾರವಾಗಿ ಮೂಡಿಗೆರೆ ಜೆ.ಡಿ.ಎಸ್. ಒಡೆದ ಮನೆಯಂತಾಗಿದೆ. ನಿಂಗಯ್ಯನವರ ಮತ್ತು ಅವರ ಬೆಂಬಲಿಗರ ಮುಂದಿನ ರಾಜಕೀಯ ನಡೆ ಕುತೂಹಲ ಕೆರಳಿಸಿದೆ.