ಕಳಸ ಲೈವ್ ವರದಿ
ವಿವಿಧ ರಾಜಕೀಯ ಪಕ್ಷದ ಅಭ್ಯರ್ಥಿಗಳು ಸೋಮವಾರ ಮೂಡಿಗೆರೆ ಪಟ್ಟಣದ ಪ್ರಮುಖ ಬೀದಿಯಲ್ಲಿ ಮೆರವಣಿಗೆ ನಡೆಸಿ ಬಳಿಕ ತಾಲೂಕು ಕಚೇರಿಗೆ ತೆರಳಿ ಚುನಾವಣಾಧಿಕಾರಿ ಎಚ್.ಡಿ.ರಾಜೇಶ್ ಅವರಿಗೆ ನಾಮಪತ್ರ ಸಲ್ಲಿಸಿದರು.
ಕಾಂಗ್ರೆಸ್ ಅಭ್ಯರ್ಥಿ ನಯನಾ ಮೋಟಮ್ಮ ಅವರು ಸೋಮವಾರ ಪಟ್ಟಣದ ಶ್ರೀ ಆದಿಶಕ್ತಿ ಅಮ್ಮನವರ ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಆದಿಶಕ್ತಿ ದೇವಸ್ಥಾನ ಮತ್ತು ಕರಗ ಉತ್ಸವ ಸಮಿತಿ ಗೌರವಾಧ್ಯಕ್ಷರಾದ ವೇಲಾಯುಧ, ವಿ.ಗೋಪಾಲ, ಅಧ್ಯಕ್ಷ ಯೋಗೇಶ್, ಪ್ರಧಾನ ಸಂಚಾಲಕ ಉಮಾಶಂಕರ್, ಲತಾ, ಸರಸಕ್ಕ ಸೇರಿದಂತೆ ಕಮಿಟಿ ಸದಸ್ಯರು ಶುಭ ಹಾರೈಸಿದರು. ಬಳಿಕ ತಾಲೂಕು ಕಚೇರಿ ತೆರಳಿ ಸಾಂಕೇತಿಕವಾಗಿ ಚುನಾವಣಾಧಿಕಾರಿಗೆ ನಾಮಪತ್ರ ಸಲ್ಲಿಸಿದರು.
ಜೆಡಿಎಸ್ ಅಭ್ಯರ್ಥಿ ಎಂ.ಪಿ.ಕುಮಾರಸ್ವಾಮಿ, ಬಿಜೆಪಿ ಅಭ್ಯರ್ಥಿ ದೀಪಕರ್ ದೊಡ್ಡಯ್ಯ, ಸಿಪಿಐ ಪಕ್ಷದ ಅಭ್ಯರ್ಥಿ ಕೆಳಗೂರು ರಮೇಶ್ ಅವರು ತಮ್ಮ ಕಾರ್ಯಕರ್ತರೊಂದಿಗೆ ಆಗಮಿಸಿ ಸಾಂಕೇತಿಕವಾಗಿ ಚುನಾವಣಾಧಿಕಾರಿಗಳಿಗೆ ನಾಮಪತ್ರ ಸಲ್ಲಿಸಿದರು. ಬಿಎಸ್ಪಿ ಅಭ್ಯರ್ಥಿ ಲೋಕವಳ್ಳಿ ರಮೇಶ್ ತಮ್ಮ ಬೆಂಬಲಿಗರೊಂದಿಗೆ ಬಿಎಸ್ಪಿಗೆ ಜಯವಾಗಲಿ ಎಂದು ಘೋಷಣೆ ಕೂಗುತ್ತಾ ಪಟ್ಟಣದಲ್ಲಿ ಮೆರವಣಿಗೆ ನಡೆಸಿ ಬಳಿಕ ಚುನಾವಣಾಧಿಕಾರಿ ಕಚೇರಿಯಲ್ಲಿ ನಾಮಪತ್ರ ಸಲ್ಲಿಸಿದರು. ಸೋಮವಾರ ಒಂದೇ ದಿನ ಒಟ್ಟು 5 ನಾಮಪತ್ರ ಸಲ್ಲಿಕೆಯಾಗಿದೆ.