ಕಳಸ ಲೈವ್ ವರದಿ
ಮಲ್ಲಂದೂರಿನ ಸುಜಾತ ಭಾಸ್ಕರ್ ಎಂಬವರ ಮನೆಯಂಗಳದಲ್ಲಿ ಹತ್ತಾರು ಬ್ರಹ್ಮ ಕಮಲ ಪುಷ್ಪಗಳು ಅರಳಿ ನಿಂತು ತನ್ನ ಸುಬಗಿನಿಂದ ಕಣ್ಮನ ಸೆಳೆಯಿತು.
ರಾತ್ರಿ ರಾಣಿಯರು ಎಂದೇ ಪ್ರಸಿದ್ಧವಾಗಿರುವ ಬ್ರಹ್ಮ ಕಮಲ ಪುಷ್ಪವು ರಾತ್ರಿಯ ವೇಳೆಯೇ ಅರಳಿ, ಬೆಳಗಾಗುವುದರೊಳಗೆ ಬಾಡಿ ಹೋಗುವ ಅಪರೂಪದ ಪುಷ್ಪವಾಗಿದೆ. ವರ್ಷಕೊಮ್ಮೆ, ಅದೂ ಕೂಡಾ ರಾತ್ರಿ ಸಮಯದಲ್ಲಿ ಮಾತ್ರ ಅರಳುವ ಹೂವುಗಳಲ್ಲಿ ಬ್ರಹ್ಮ ಕಮಲವೂ ಒಂದಾಗಿದೆ. ಹಿಂದೂ ಧರ್ಮದ ನಂಬಿಕೆಯ ಪ್ರಕಾರ ಇದನ್ನು ಬಿಳಿ ಕಮಲವೆಂದೂ ಕರೆಯಲಾಗುತ್ತದೆ. ಸುಜಾತ ಭಾಸ್ಕರ್ ಅವರ ಮನೆಯಂಗಳದಲ್ಲಿ ಸೋಮವಾರ ರಾತ್ರಿ ಬರೋಬ್ಬರಿ 15 ಬ್ರಹ್ಮ ಕಮಲ ಪುಷ್ಪಗಳು ಅರಳಿ ನಿಂತಿವೆ. ಈ ಹೂವುಗಳು ಹಂತಹಂತವಾಗಿ ಅರಳುವುದನ್ನು ವೀಕ್ಷಿಸುವುದೇ ಸೋಜಿಗವಾಗಿದ್ದು, ಇದನ್ನು ವೀಕ್ಷಿಸಿದ ಸ್ಥಳೀಯ ನಿವಾಸಿಗಳು ಸಂತಸ ವ್ಯಕ್ತ ಪಡಿಸಿದ್ದಾರೆ.
ಬ್ರಹ್ಮಕಮಲದ ಗಿಡವು ವರ್ಷಕ್ಕೊಮ್ಮೆ ಬಿಡುವ ಹೂಗಳನ್ನು ನೋಡುವುದೇ ಸೊಬಗು. ಅರಳಿದ ಬ್ರಹ್ಮಕಮಲ ಹೂವುಗಳನ್ನು ನೋಡುವವರ ಮನವೂ ಅರಳುತ್ತದೆ. ಬ್ರಹ್ಮಕಮಲ ಹೂ ಅರಳುವುದನ್ನು ಕಾದು ತಮ್ಮ ಮನಸ್ಸಿನ ಇಂಗಿತವನ್ನು ಬೇಡಿಕೊಂಡರೆ ಅವರ ಆಸೆ ಈಡೇರುತ್ತದೆ ಎಂಬ ನಂಬಿಕೆಯೂ ಇದೆ. ಈ ಹೂವು ಅರಳುವ ಮನೆಯವರು ಸಂಪದ್ಭರಿತರಾಗಿರುತ್ತಾರೆ ಎಂಬ ಪ್ರತೀತಿಯೂ ಕೂಡ ಇದೆ. ಬ್ರಹ್ಮ ಕಮಲ ಹೂವಿನ ಗಿಡವನ್ನು ದೈವಿಕ ಭಾವನೆಯಿಂದ ಹಾಗೂ ಅಲಂಕಾರಿಕ ಗಿಡವಾಗಿಯೂ ಬೆಳೆಸಲಾಗುತ್ತದೆ.