ಕಳಸ ಲೈವ್ ವರದಿ
ಓಟು ಬೇಕಾದ್ರೆ ನಮ್ ಕೆಲ್ಸ ಮಾಡಿಕೊಡಿ, ಕೆಲ್ಸ ಮಾಡಲಾಗದ ನಿಮ್ಗೆ ನಮ್ಮ ಮತ ಯಾಕೆ ಬೇಕು, ಮೊದಲು ರಸ್ತೆ ಕೆಲ್ಸ ಆಗ್ಲಿ ನಂತರವೇ ನಾವು ಮತ ಹಾಕ್ತೇವೆ ಇದು ಚುನಾವಣೆ ಬಹಿಷ್ಕರಿಸಿದ ಹೇರಡಿಕೆ ಗ್ರಾಮಸ್ಥರ ಮನವೊಲಿಸಲು ಗ್ರಾಮಕ್ಕೆ ತೆರಳಿದ ಅಧಿಕಾರಿಗಳಿಗೆ ಗ್ರಾಮಸ್ಥರು ತರಾಟೆಗೆ ತೆಗೆದುಕೊಂಡ ರೀತಿ.
ಮಾವಿನಕೆರೆ ಗ್ರಾಮದ ಕಳಸ- ಕಾರಗದ್ದೆ ಮುಖ್ಯ ರಸ್ತೆಯಿಂದ ನಡುಗುಡಿಗ- ಹೇರಡಿಕೆ ಕೈಮರ-ಗಾಳಿಗಂಡಿ ಈ ಭಾಗದಲ್ಲಿ ಕಚ್ಚಾ ರಸ್ತೆಯಿದ್ದು ಕಳೆದ 30 ವರ್ಷಗಳಿಂದ ದುರಸ್ಥಿ ಇಲ್ಲದೇ ಈ ರಸ್ತೆಯು ಸಂಪೂರ್ಣವಾಗಿ ಹಾಳಾಗಿದೆ. ಅದೆಷ್ಟು ಸರಿ ಮನವಿ ಮಾಡಿದರೂ ಕೂಡ ನಮ್ಮ ಬೇಡಿಕೆಗೆ ಸ್ಪಂದಿಸಿದವರು ಇಲ್ಲ.ಈಗ ಚುನಾವಣೆ ಬಂದಾಗ ನಮ್ಮ ಮನೆ ಬಾಗಿಲಿಗೆ ಬಂದು ಮತ ಹಾಕಿ ಎಂದು ಕೇಳುತ್ತಿದ್ದೀರಿ.ಇಷ್ಟು ದಿನ ನೀವು ಎಲ್ಲಿಗೆ ಹೋಗಿದ್ರಿ. ಕಳೆದ ಒಂದು ವರ್ಷದ ಹಿಂದೆಯೇ ನಾವು ಚುನಾವಣೆಯನ್ನು ಬಹಿಷ್ಕಾರ ಮಾಡುತ್ತಿದ್ದೇವೆ ಎಂದು ಹೇಳಿದ್ದೆವು ಅಲ್ಲದೆ ಮನವಿಯನ್ನು ಕೂಡ ಕೊಟ್ಟಿದ್ದೆವು. ಆದರೆ ಕಳೆದ ಒಂದು ವರ್ಷಗಳಿಂದ ನಮ್ಮನ್ನು ಮಾತನಾಡಿಸಲು ಬರದೆ ಇದ್ದ ನೀವು ಈಗ ಚುನಾವಣೆ ಬಂದಾಗ ನಮ್ಮ ಊರಿನ ದಾರಿ ನಿಮ್ಗೆ ಹೇಗೆ ಸಿಕ್ತು.
ನಮ್ಮ ಊರಿಗೆ ಬರುವ ರಸ್ತೆಯ ಪರಿಸ್ಥಿತಿ ನಿಮ್ಗೆ ಸ್ವಲ್ಪನಾದ್ರು ಅರ್ಥವಾಗುತ್ತಿದೆಯೇ ಈ ಪ್ರದೇಶದಲ್ಲಿ ಪರಿಶಿಷ್ಟ ಪಂಗಡದ ಗೌಡಲು ಪಂಗಡಕ್ಕೆ ಸೇರಿದ 150 ಕ್ಕೂ ಹೆಚ್ಚು ಮನೆಗಳಿದ್ದು, 700 ಕ್ಕೂ ಹೆಚ್ಚು ಜನಸಂಖ್ಯೆ ಇರುತ್ತದೆ. ಮಳೆಗಾಲದಲ್ಲಿ ಮಕ್ಕಳಿಗೆ ಶಾಲಾ ಕಾಲೇಜಿಗೆ ಹಿರಿಯರಿಗೆ ಆಸ್ಪತ್ರೆಗೆ, ಗರ್ಭಿಣಿ, ಬಾಣಂತಿಯರಿಗೆ ಚಿಕಿತ್ಸೆಗೆ, ಹಾಗೂ ಸ್ಥಳೀಯರಿಗೆ ದಿನನಿತ್ಯದ ಸರಕು ಸಾಮಾಗ್ರಿಗಳನ್ನು ಸಾಗಿಸಲು ಅತ್ಯಂತ ಕಷ್ಟ ಪಡಬೇಕಾಗಿದೆ. ಹೊಸಟ್ಟಿ, ಕಣದ ಮನೆ, ಹುಂಗಳ್ಳಿ, ಮಾರ್ಗದ ಮನೆ, ಹಾಗು ಗೇರಾಳಿ ಇಲ್ಲಿ 9 ಮನೆಗಳಿಗೆ ರಸ್ತೆ ಸಂಪರ್ಕವೆ ಇರುವುದಿಲ್ಲ. ಈ ಭಾಗದಲ್ಲಿ ಸಾರ್ವಜನಿಕರಿಗೆ ಸಭೆ, ಸಮಾರಂಭ ನಡೆಸಲು ಸಮುದಾಯ ಭವನ ಇಲ್ಲದೆ ಇದ್ದು ಯಾವುದೇ ಸಾರ್ವಜನಿಕ ಕಾರ್ಯಕ್ರಮಗಳನ್ನು ನಡೆಸಲು ತೊಂದರೆ ಅಗುತ್ತದೆ.
ಕೆಲವು ವರ್ಷಗಳ ಹಿಂದೆ ನಕ್ಸಲ್ ಪ್ಯಾಕೇಜ್ ಅಂತ ಕೋಟಿ ಕೋಟಿ ಹಣ ಕೇಂದ್ರ ಸರ್ಕಾರ ಹಾಗು ರಾಜ್ಯ ಸರ್ಕಾರ ಬಿಡುಗಡೆ ಮಾಡಿತು. ಹಳ್ಳಿ ಹಳ್ಳಿಗಳಿಗೆ ರಸ್ತೆ ಹಾಗೂ ಕುಡಿಯುವ ನೀರಿನ ಯೋಜನೆಗೆ ಬಿಡುಗಡೆಯಾಗಿತ್ತು ಅ ಹಣ ಎಲ್ಲಿ ಹೋಯಿತು. ಎಂದು ಗ್ರಾಮಸ್ಥರು ಅಧಿಕಾರಿಗಳನ್ನು ಖಾರವಾಗಿಯೇ ಪ್ರಶ್ನಿಸಿದರು.
ಮನವೊಲಿಕೆಗೆ ಬಗ್ಗದ ಗ್ರಾಮಸ್ಥರು ಮೊದಲು ಕೆಲಸ ಮಾಡಿ ನಂತರವೇ ಮತ ಹಾಕುತ್ತೇವೆ ಎಂದು ಪಟ್ಟು ಹಿಡಿದರು.
ಈ ಸಂದರ್ಭದಲ್ಲಿ ಕಳಸ ಅರ್ ಐ ಅಜ್ಜೇಗೌಡ, ವಿಎ ಪ್ರಸನ್ನ, ಕಳಸ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಕವೀಶ್, ಹೇರಡಿಕೆ ಗ್ರಾಮಸ್ಥರಾದ ಗಜೇಂದ್ರ, ಜನಾರ್ದನ್, ಕಲ್ಪನಾ, ಸುಶೀಲ, ಅನ್ನಪೂರ್ಣ, ಸುಮಿತ್ರ, ಪಾರ್ವತಿ, ಕಮಲಾಕ್ಷಿ, ಸಾವಿತ್ರಿ, ಗೌರಿ, ಸತೀಶ್, ಪದ್ಮಾಕ್ಷ, ಸುಜಯ, ಚಂದ್ರ, ಅಣ್ಣಪ್ಪ ಇದ್ದರು.