ಕಳಸ ಲೈವ್ ವರದಿ
ಹೊರನಾಡು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮುಂಡುಗದ ಮನೆ ಒಂದೆ ಸ್ಥಳದಲ್ಲಿ ಎರಡು ಸೇತುವೆಗಳನ್ನು ನಿರ್ಮಾಣ ಮಾಡಿ ಸಾರ್ವಜನಿಕರ ಹಣವನ್ನು ಪೋಲು ಮಾಡಲಾಗುತ್ತಿದೆ ಎಂದು ಕಳಸ ಬ್ಲಾಕ್ ಕಾಂಗ್ರೆಸ್ ಸಮಿತಿ ಆರೋಪಿಸಿದೆ.
ಈ ಬಗ್ಗೆ ಕಾಂಗ್ರೆಸ್ ಮುಖಂಡ ರಾಜೇಂದ್ರ ಹಿತ್ಲುಮಕ್ಕಿ ಕಳಸ ಲೈವ್ ಜೊತೆ ಮಾತನಾಡಿ, ಮುಂಡುಗದ ಮನೆ ಸ್ಥಳಕ್ಕೆ 2018-19ನೇ ಇಸವಿಯಲ್ಲಿ ಸುಮಾರು 37 ಲಕ್ಷ ವೆಚ್ಚದ ಸೇತುವೆಗೆ ಹಣ ಮಂಜೂರಾಗಿ ಕಾಮಗಾರಿಯು ನಡೆದಿತ್ತು. ಕಾಮಗಾರಿಯ ಮುಕ್ತಾಯದ ಹಂತದಲ್ಲಿ ಇರುವಾಗ ಮತ್ತೆ ಅದೇ ಸ್ಥಳದಲ್ಲಿ ಎರಡು ಕೋಟಿ ರೂ ವೆಚ್ಚದ ಸೇತುವೆ ನಿರ್ಮಾಣ ಮಾಡಲಾಗುತ್ತಿದೆ. ಈ ಹಿಂದೆ ಮಾಡುತ್ತಿರುವ ಸೇತುವೆಯ ಗುಣ ಮಟ್ಟ ಸರಿ ಇಲ್ಲದಿದ್ದರೆ ಅದಕ್ಕೆ ಸಂಬಂಧ ಪಟ್ಟವರ ವಿರುದ್ದ ಕ್ರಮ ತೆಗೆದುಕೊಳ್ಳಬಹುದು. ಎಲ್ಲವೂ ಸರಿ ಇದ್ದಾಗ ಮತ್ತೊಂದು ಸೇತುವೆ ಮಾಡುತ್ತಿರುವುದು ಎಷ್ಟು ಸರಿ. ಕಳಸ ತಾಲ್ಲೂಕಿನ ಕೆಲವೆಡೆ ಕಾಫಿ ತೋಟಕ್ಕೂ ಸೇತುವೆ ಮಾಡಲಾಗಿದೆ. ಮೂಡಿಗೆರೆ ಲೋಕೋಪಯೋಗಿ ಇಲಾಖೆಯಲ್ಲಿ ಇರುವ ಬ್ರಷ್ಟ ಎಇಇ ಅಧಿಕಾರಿಯಿಂದ ಕಳಸ ತಾಲ್ಲೂಕಿನಲ್ಲಿ ಅತೀ ಹೆಚ್ಚು ಹಣ ದುರ್ಬಳಕೆ ಆಗಿದೆ ಎಂದು ಹೇಳಿದರು.
ಕಳಸ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಕೆ.ಎ.ಶ್ರೇಣಿಕ್ ಮಾತನಾಡಿ ಮಂಡುಗದ ಮನೆ ಸೇತುವೆ ವಿಚಾರದಲ್ಲಿ ಕಾಣದ ಕೈಗಳ ಕೈವಾಡ ಇದೆ. ಸೇತುವೆ ವಿಚಾರದಲ್ಲಿ ಕೂಡಲೇ ತನಿಖೆ ಮಾಡಿ ಕ್ರಮ ತೆಗೆದುಕೊಳ್ಳಬೇಕು ಈ ಬಗ್ಗೆ ಕಾನೂನು ಹೋರಾಟ ಮಾಡಲಿದ್ದೇವೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರಾದ ಮಹಮ್ಮದ್ ರಫೀಕ್, ವಿಶ್ವನಾಥ್, ಸುಜಿತ್, ಪುಷ್ಪಲತಾ ರಾಮು, ರಿಜ್ವಾನ್ ಇದ್ದರು.