ಕಳಸ ಲೈವ್ ವರದಿ
ಕಳಸ ತಾಲ್ಲೂಕಿನ ಗಡಿ ಪ್ರದೇಶವಾದ ಶಂಕರಕುಡಿಗೆ-ಬಸರಿಕಟ್ಟೆ ಸಂಪರ್ಕ ಕಲ್ಪಿಸುವ ರಸ್ತೆಯನ್ನು ಕಾಂಕ್ರೇಟ್ ರಸ್ತೆಯನ್ನಾಗಿ ಮಾಡುವ ಉದ್ದೇಶದಿಂದ ಶಿಥಿಲಗೊಂಡಿದ್ದ ಡಾಂಬರು ರಸ್ತೆಯನ್ನು ಅಗೆದು ಹಾಕಿ ಒಂದು ವರ್ಷ ಕಳೆದರೂ ಕೂಡ ಕಾಮಗಾರಿ ಪ್ರಾರಂಭ ಮಾಡದೆ ಇರುವ ಗ್ರಾಮಸ್ಥರು ಈ ಬಾರಿ ಹಿನ್ನಲೆಯಲ್ಲಿ ಮತದಾನ ಬಹಿಷ್ಕಾರ ಮಾಡುವ ನಿರ್ಧಾರ ತೆಗೆದುಕೊಂಡಿದ್ದಾರೆ.
ಈಗ್ಗೆ ಒಂದು ವರ್ಷಗಳ ಹಿಂದೆ ಕಳಸ ತಾಲ್ಲೂಕಿನ ವ್ಯಾಪ್ತಿಗೆ ಬರುವಂತ 800 ಮೀ ರಸ್ತೆಯನ್ನು ಕಾಂಕ್ರೇಟಿಕರಣ ಮಾಡುವ ನೆಪದಲ್ಲಿ ಈ ಹಿಂದೆ ಡಾಂಬರೀಕರಣಗೊಂಡು ಶಿಥಿಲ ಗೊಂಡಿದ್ದ ರಸ್ತೆಯನ್ನು ಅಗೆದು ಹಾಕಲಾಗಿತ್ತು. ಆದರೆ ಇದಾಗಿ ವರ್ಷ ಕಳೆದರೂ ಕೂಡ ಗುತ್ತಿಗೆದಾರರು ಇತ್ತ ತಲೆ ಹಾಕಲಿಲ್ಲ.
ಶಂಕರಕುಡಿಗೆಯಿಂದ ಬಸರಿಕಟ್ಟೆ ಸಂಪರ್ಕ ಕಲ್ಪಿಸುವ ರಸ್ತೆ 800 ಮೀ ಕಾಂಕ್ರೇಟ್ ರಸ್ತೆಗೆ 70 ಲಕ್ಷ ಬಿಡುಗಡೆಯಾಗಿದೆ.
ಕೆಲಸ ಆರಂಭ ಮಾಡಿ ಹಳೆಯ ಡಾಂಬರ್ ರಸ್ತೆ ಅಗೆದು ಹಾಕಿ ವರ್ಷ ಕಳೆಯಿತು ಇಳಿಜಾರಿನ ರಸ್ತೆಯಲ್ಲಿ ಜಲ್ಲಿ ರಾಶಿ ಹಾಕಿದಂತಾಗಿದ್ದು ವಾಹನಗಳು ಸಂಚರಿಸಲು ಆಗುತ್ತಿಲ್ಲ. ಶಾಸಕರು ಮತ್ತು ಲೋಕೋಪಯೋಗಿ ಇಲಾಖಾ ಇಂಜಿನೀಯರ್ ಹಲವಾರು ಬಾರಿ ಹೇಳಿದರೂ ಕೂಡ ನಮ್ಮ ಮಾತಿಗೆ ಬೆಲೆ ಕೊಡುತ್ತಿಲ್ಲ.ಆದ್ದರಿಂದ ಈ ಬಾರಿ ಮತದಾನ ಬಹಿಷ್ಕಾರ ಮಾಡುವ ನಿರ್ಧಾರ ತೆಗೆದುಕೊಂಡಿದ್ದೇವೆ ಎಂದು ಗ್ರಾಮಸ್ಥ ರಂಜಿತ್ ಎಸ್.ಕೆ ಹೇಳುತ್ತಾರೆ.
ಈ ಬಗ್ಗೆ ಲೋಕೋಪಯೋಗಿ ಇಲಾಖಾ ಇಂಜಿನಿಯರ್ ಮಂಜುನಾಥ್ ಬಳಿ ವಿಚಾರಿಸಿದರೆ, ಶಂಕರಕುಡಿಗೆ ರಸ್ತೆ ಗುತ್ತಿಗೆ ತೆಗೆದುಕೊಂಡ ಗುತ್ತಿಗೆದಾರ ಅರ್ಧದಲ್ಲಿ ಕೆಲಸ ನಿಲ್ಲಿಸಿ ಹೋಗಿದ್ದಾರೆ. ಈಗಾಗಲೇ ಅವರಿಗೆ ನೋಟಿಸು ಜಾರಿ ಮಾಡಲಾಗಿದೆ. ಮುಂದಿನ ವಾರದಲ್ಲಿ ಕಾಮಗಾರಿ ಪ್ರಾರಂಭ ಮಾಡಲು ಎಲ್ಲಾ ಕ್ರಮ ಕೈಗೊಳ್ಳುತ್ತೇನೆ ಎಂದು ಹೇಳುತ್ತಾರೆ.