ಕಳಸ ಲೈವ್ ವರದಿ
ಗ್ರಾಮೀಣ ಪ್ರದೇಶದ ಕೃಷಿಕರಿಗೆ ಮೂಲಭೂತ ಸೌಲಭ್ಯಗಳು ಇದ್ದರೆ ಮಾತ್ರ ಕೃಷಿಕರ ಮತ್ತು ಬಡವರ ಬದುಕು ಸ್ವಲ್ಪ ಮಟ್ಟಿಗೆ ಸುಧಾರಣೆಗೊಳ್ಳಲು ಸಾಧ್ಯ ಎಂದು ಕರ್ನಾಟಕ ಬ್ಯಾಂಕ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮಹಾಬಲೇಶ್ವರ ಎಂ.ಎಸ್ ಹೇಳಿದರು.
ಕಳಸ ತಾಲ್ಲೂಕಿನ ತೋಟದೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚಿಕ್ಕನಕೂಡಿಗೆ, ತಾರಿಕೊಂಡ ಜನತಾ ಕಾಲೋನಿಗೆ ಕರ್ನಾಟಕ ಬ್ಯಾಂಕ್ ವತಿಯಿಂದ ಅಳವಡಿಸಲಾದ ಸೋಲಾರ್ ಬೀದಿ ದೀಪಗಳನ್ನು ಗುರುವಾರ ಉದ್ಘಾಟನೆ ಮಾಡಿ ಮಾತನಾಡಿದ ಅವರು ಗ್ರಾಮೀಣ ಪ್ರದೇಶದಲ್ಲಿ ಕಾಡು ಪ್ರಾಣಿಗಳ ಹಾವಳಿ ಹೆಚ್ಚಾಗುತ್ತಿದ್ದು, ಇದು ಕೃಷಿಕರ ನೆಮ್ಮದಿಯನ್ನು ಕೆಡಿಸುತ್ತಿದೆ.ಅಲ್ಲದೆ ಬಹುತೇಕ ಗ್ರಾಮೀಣ ಪ್ರದೇಶಗಳಲ್ಲಿ ರಸ್ತೆÀ, ವಿದ್ಯುತ್, ಸಾರಿಗೆ ವ್ಯವಸ್ಥೆ, ಮೊಬೈಲ್ ನೆಟ್ವರ್ಕ್ ವ್ಯವಸ್ಥೆಗಳು ಇದ್ದರೆ ಮಾತ್ರ ಕೃಷಿಕರ ಬದುಕು ಸುದಾರಣೆಗೊಳ್ಳುತ್ತದೆ.ಈ ನಿಟ್ಟಿನಲ್ಲಿ ಕರ್ನಾಟಕ ಬ್ಯಾಂಕ್ ಗ್ರಾಮೀಣ ಪ್ರದೇಶಗಳಿಗೆ ಹೆಚ್ಚಿನ ಒತ್ತು ನೀಡಿ ಸೋಲಾರ್ ದೀಪಗಳನ್ನು ಅಳವಡಿಸಲಾಗುತ್ತಿದೆ. ಗ್ರಾಮಸ್ಥರು ಇದನ್ನು ಸಮರ್ಪಕವಾಗಿ ನಿರ್ವಹಿಸಿಕೊಳ್ಳಬೇಕು ಎಂದರು.
ಸ್ಥಳಿಯ ಮುಖಂಡ ಅನಂತಯ್ಯ ಮಾತನಾಡಿ, ಕರ್ನಾಟಕ ಬ್ಯಾಂಕ್ ಮಲೆನಾಡು ಭಾಗದ ಅದರಲ್ಲಿಯೂ ಕಳಸ ಭಾಗದ ಕಳಸ, ಬಾಳೆಹೊಳೆ,ಕಡೇಕುಡಿಗೆ, ತನೂಡಿ, ಕಗ್ಗನಳ್ಳ ಮುಂತಾದ ಗ್ರಾಮಗಳಿಗೆ ನೂರಕ್ಕೂ ಹೆಚ್ಚು ಸೋಲಾರ್ ಬೀದಿ ದೀಪಗಳನ್ನು ಅಳವಡಿಸಿದ್ದಾರೆ.ಈ ಬಾರಿ ನಮ್ಮ ಗ್ರಾಮಕ್ಕೆ ಬೀದಿ ದೀಪಗಳನ್ನು ಅಳವಡಿಸಿರುವುದು ನಮಗೆ ಸಂತಸ ತಂದಿದೆ.ಈ ಭಾಗದಲ್ಲಿ ಬಹಳಷ್ಟು ಕಾಡು ಪ್ರಾಣಿಗಳ ಹಾವಳಿ ಇರುವುದರಿಂದ ಈ ಬೀದಿ ದೀಪಗಳಿಂದ ಈ ಭಾಗದ ಜನರಿಗೆ ಅನುಕೂಲವಾಗಿದೆ ಎಂದರು.
ಈ ಸಂದರ್ಭದಲ್ಲಿ ಕರ್ನಾಟಕ ಬ್ಯಾಂಕಿನ ಶಿವಮೊಗ್ಗ ಪ್ರಾದೇಶಿಕ ಕಚೇರಿಯ ಅಸಿಸ್ಟೆಂಟ್ ಜನರಲ್ ಮ್ಯಾನೇಜರ್ ಹಯವದನ ಉಪಾಧ್ಯಾಯ, ಕಳಸ ಶಾಖೆಯ ವ್ಯವಸ್ಥಾಪಕ ಸಿ.ಕೆ. ಮೂರ್ತಿ, ಬಸರಿಕಟ್ಟೆ ಶಾಖೆಯ ವ್ಯವಸ್ತಾಪಕ ಕೃಷ್ಣಮೂರ್ತಿ ಹೆಗಡೆ ಇತರರು ಇದ್ದರು.