ಕಳಸ ಲೈವ್ ವರದಿ
ಇಲ್ಲಿಗೆ ಸಮೀಪದ ಪುರಾಣ ಪ್ರಸಿದ್ಧ ಬಾಳೆಹೊಳೆ ಶ್ರೀ ಚನ್ನಕೇಶವ ದೇವಾಲಯದಲ್ಲಿ ವರ್ಷಾವದಿ ಜಾತ್ರೆಯ ಅಂಗವಾಗಿ ಭಾನುವಾರ ರಥೋತ್ಸವವು ಅತ್ಯಂತ ವಿಜೃಂಭಣೆಯಿಂದ ನೆರವೇರಿತು.
ಪ್ರತಿ ವರ್ಷದಂತೆ ಈ ವರ್ಷವೂ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಸಂಪನ್ನಗೊಂಡ ರಥೋತ್ಸವದಲ್ಲಿ ಸಾವಿರಾರು ಭಕ್ತಾಧಿಗಳು ಶ್ರದ್ಧಾ ಭಕ್ತಿಯಿಂದ ಪಾಲ್ಗೊಂಡರು.
ಶನಿವಾರದಂದು ಶ್ರೀ ಗಣಪತಿ ಹೋಮ, ದ್ವಜಾರೋಹಣ ಮತ್ತು ದಿಂಡಿ ಉತ್ಸವದೊಂದಿಗೆ ಜಾತ್ರೆಯು ಆರಂಭಗೊಂಡಿತು. ಭಾನುವಾರ ಮದ್ಯಾಹ್ನ ಶ್ರೀ ದೇವರ ಸುತ್ತು ಸೇವೆ ಮಂಗಳಾರತಿ ಮುಗಿದ ಬಳಿಕ ಚನ್ನಕೇಶವ ದೇವರ ವಿಗ್ರಹವನ್ನು ಸಿಂಗಾರಗೊಂಡ ರಥದಲ್ಲಿ ಇಟ್ಟು ಪೂಜಿಸಿ ರಥೋತ್ಸವ ಮಾಡಲಾಯಿತು.ಈ ಸಂದರ್ಭದಲ್ಲಿ ಭಕ್ತಾದಿಗಳು ತಮ್ಮ ಹರಕೆಯಂತೆ ತಾವು ಬೆಳೆದ ಕಾಳು ಮೆಣಸು, ಏಲಕ್ಕಿ,ಅಡಿಕೆ,ಕಾಫಿ ಬೀಜ ಇತ್ಯಾದಿ ದವಸ ದಾನ್ಯಗಳನ್ನು ರಥಕ್ಕೆ ಎಸೆದು ಕೃತಾರ್ಥರಾದರು.
ರಾತ್ರಿ ಭಕ್ತರ ಜಯಘೋಷಗಳ ಝೇಂಕಾರಗಳ ನಡುವೆ ಬ್ರಹ್ಮರಥೋತ್ಸವ ನಡೆಯಿತು.
ವಿದ್ಯುತ್ ದೀಪಗಳ ಅಲಂಕಾರ ವಿವಿಧ ಹೂಗಳಿಂದ ದೇವಸ್ಥಾನವನ್ನು ಸಿಂಗರಿಸಲಾಗಿತ್ತು.ಜಾತ್ರೆಯ ಪ್ರಯಕ್ತ ಬೆಳಿಗ್ಗೆಯಿಂದಲೇ ದೇವಸ್ಥಾನದಲ್ಲಿ ವಿಶೇಷ ಪೂಜೆ ಪುರಸ್ಕಾರಗಳು ನಡೆದವು.
ಮುಂಜಾನೆಯಿಂದಲೇ ದೇವಸ್ಥಾನಕ್ಕೆ ಕಳಸ,ಸಂಸೆ,ಹೊರನಾಡು,ತಲಗೋಡು,ಬಸರಿಕಟ್ಟೆ,ಮುನ್ನೂರುಪಾಲ್,ಹಿರೇಬೈಲು,ಮಾವಿನಕೆರೆ, ಕೆ.ಕೆಳಗೂರು ಮುಂತಾದ ಬಾಗಗಳಿಂದ ಭಕ್ತರು ತಂಡೋಪತಂಡವಾಗಿ ಬೇಟಿ ನೀಡಿ ದೇವರಿಗೆ ಹಣ್ಣು ಕಾಯಿ ಸಮರ್ಪಿಸಿ ಕೃತಾರ್ಥರಾದರು.