ಡಿ.ವಿ ಸಂಜಯ್. ಚಿಕ್ಕಮಗಳೂರು
ಕಳಸ ಲೈವ್ ವರದಿ
ಕಳಸ ತಾಲೂಕಿನ ಕುದುರೆಮುಖ ಹಲವಾರು ವಿಶಿಷ್ಠ ಸಂಗತಿಗಳಿಂದ ಗಮನ ಸೆಳೆಯುತ್ತದೆ. ಒಂದು ಕಾಲದಲ್ಲಿ ಗಣಿಗಾರಿಕೆಯಿಂದ ದೇಶ ವಿದೇಶಿಗರನ್ನು ತನ್ನತ್ತ ಸೆಳೆದಿದ್ದ, ಸುಮಾರು 5 ಸಾವಿರಕ್ಕು ಅಧಿಕ ಜನಸಂಖ್ಯೆ ಹೊಂದಿ ಸಾಮಾನ್ಯ ನಗರವೆನ್ನಿಸಿಕೊಂಡಿದ್ದ ಕುದುರೆಮುಖ ಈಗ ಗೋಸ್ಟ್ ಟೌನ್ ಆಗಿ ಬದಲಾಗಿದೆ. ಗೋಸ್ಟ್ ಟೌನ್ ಎಂದಾಕ್ಷಣ ಯಾವುದೋ ದೆವ್ವ ಪಿಶಾಚಿಗಳು ತುಂಬಿಕೊಂಡಿರುವ ಸ್ಥಳ ಪ್ರದೇಶ ಎಂದು ಭಾವಿಸಬೇಡಿ. ಸಾಕಷ್ಟು ಜನಸಂಖ್ಯೆ ಇದ್ದು ಎಲ್ಲಾ ರೀತಿಯ ವಹಿವಾಟು ನಡೆಸಿಕೊಂಡು ಬಂದಿರುವ ನಗರ ನಾನಾ ಕಾರಣಗಳಿಂದ ಸ್ಥಗಿತಗೊಂಡರೆ, ಎಲ್ಲಾ ವಹಿವಾಟುಗಳು ಮುಚ್ಚಿ ಜನಸಂದಣಿ ಇಲ್ಲವಾದರೆ ಸಾಮಾನ್ಯವಾಗಿ ಅಂತಹ ನಗರಗಳನ್ನು ಗೋಸ್ಟ್ ಟೌನ್ಎಂದು ಕರೆಯಲಾಗುತ್ತದೆ. ಅಮೇರಿಕಾ, ಇಂಗ್ಲೆಂಡ್, ಜಪಾನ್ ಸೇರಿ ಆನೇಕ ರಾಷ್ಟ್ರಗಳಲ್ಲಿ ಇಂತಹ ಆನೇಕ ಗೋಸ್ಟ್ ಟೌನ್ಗಳ ಇತಿಹಾಸವಾಗಲಿವೆ.
ಕುದುರೆಮುಖದ ಒಂದು ಭಾಗದಲ್ಲಿ ಬೆಟ್ಟದ ತುದಿಯು ಕುದುರೆಯ ಮುಖದ ಆಕೃತಿಯನ್ನು ಹೋಲುವಂತಿರುವ ಕಾರಣ ಇದನ್ನು ಕುದುರೆಮುಖ ಎಂದು ಕರೆಯಲಾಗುತ್ತದೆ. ಚಿಕ್ಕಮಗಳೂರು ಜಿಲ್ಲೆಯಲ್ಲಿಯೇ ಕೊಟ್ಟಿಗೆಹಾರ ಬಿಟ್ಟರೆ ಇಲ್ಲಿ ಹೆಚ್ಚು ಮಳೆಯಾಗುತ್ತದೆ. ತುಂಗ ಭದ್ರಾ ಮತ್ತು ಹೇಮಾವತಿ ನದಿಗಳ ಉಗಮಸ್ಥಾನ ಕೂಡ ಇಲ್ಲಿದೆ. ಇದು ತನ್ನ ಪ್ರಕೃತಿ ಸೌಂದರ್ಯದಿಂದ ದೇಶದ ಗಮನ ಸೆಳೆದರೆ ಇಲ್ಲಿ 1969 ರ ನಂತರ ಗಣಿಗಾರಿಕೆಯಿಂದ ವಿದೇಶದ ಗಮನ ಸೆಳೆಯಿತು. ಇಲ್ಲಿ ಗಣಿಗಾರಿಕೆಯ ಇತಿಹಾಸ ಪ್ರಾರಂಭಗೊಂಡಿದ್ದು 1913 ರಿಂದ ಆ ಸಮಯದಲ್ಲಿ ಮೈಸೂರು ಪ್ರಾಂತ್ಯದ ಭೂ ಸಂಶೋಧಕ ಸಂಪತ್ ಅಯ್ಯಂಗರ್ ಅವರು ಕುದುರೆಮುಖ ಭಾಗದಲ್ಲಿ ಸಂಚರಿಸುತ್ತಿರುವಾಗ ಮೊಟ್ಟ ಮೊದಲ ಬಾರಿಗೆ ಅಲ್ಲಿ ಅಪಾರ ಪ್ರಮಾಣದಲ್ಲಿ ಅದಿರು ನಿಕ್ಷೇಪಗಳಿರುವುದನ್ನು ಪತ್ತೆ ಹಚ್ಚಿದರು. ಹಾಗೆ ಅದನ್ನು ಅಂದಿನ ಸರ್ಕಾರದ ಗಮನಕ್ಕು ತಂದರು ಆನಂತರ ವರ್ಷಗಟ್ಟಲೆ ಕಾಲ ಅಧಿರಿನ ಬಗ್ಗೆ ಸಂಶೊಧನೆಗಳು ನಡೆದು 1969 ರಲ್ಲಿ ಅಂದಿನ ಸರ್ಕಾರ ಕುದುರೆಮುಖದಲ್ಲಿರುವ ಅದಿರನ್ನು ತೆಗೆಯಲು ಷರತ್ತು ಬದ್ದ ಅನುಮತಿಯನ್ನು ನೀಡಿತ್ತು ಅಲ್ಲದೆ ಸ್ಥಳೀಯ ಪರಿಸರಕ್ಕೆ ದಕ್ಕೆ ಆಗದಂತೆ ಗಣಿಗಾರಿಕೆ ನಡೆಸಲು ಖಾಸಗಿ ಕಂಪನಿಗೆ ಅನುಮತಿ ನೀಡಿತ್ತು.
1969 ರಿಂದ ಇಲ್ಲಿ “ಕೆ.ಐ.ಒ.ಸಿ.ಎಲ್” ಕಂಪನಿಯಿಂದ ಗಣಿಗಾರಿಕೆ ಪ್ರಾರಂಭಗೊಂಡಿತ್ತು. ಇದಕ್ಕೆ ಕೆನಾಡಾದ ಕಂಪನಿ ಕೂಡ ಬಂಡವಾಳ ಹಾಕಿತ್ತು. ಇಲ್ಲಿ ತೆಗೆದ ಅದಿರನ್ನು ಪ್ರಮುಖವಾಗಿ ಇರಾನ್ ಸೇರಿ ಇತರೆ ರಾಷ್ಟ್ರಗಳಿಗೆ ರಪ್ತು ಮಾಡುವ ಒಪ್ಪಂದವನ್ನು ಭಾರತ ಸರ್ಕಾರ ಮಾಡಿಕೊಂಡಿತ್ತು. ಇದ್ದರಿಂದ ಇರಾನ್ ತೈಲವನ್ನು ಭಾರತಕ್ಕೆ ಕಳುಹಿಸಿಕೊಡಲು ಒಪ್ಪಂದ ಮಾಡಿಕೊಂಡಿತ್ತು, ಕೆಲ ವಿದೇಶಿ ಕಂಪನಿಗಳು ಆಗ ಹಣ ಹೂಡಲು ಮುಂದೆ ಬಂದವು. ಅದಿರು ಗಣಿಗಾರಿಕೆ ಆರಂಭಗೊಂಡ ನಂತರ ಸುಮಾರು 4 ಸಾವಿರಕ್ಕು ಅಧಿಕ ಜನರಿಗೆ ಇಲ್ಲಿ ಉದ್ಯೋಗ ಸಿಕ್ಕಿತ್ತು. ಮನೆಗಳು. ಅಂಗಡಿ , ಶಾಲೆ, ಹೊಟೇಲ್, ಬ್ಯಾಂಕ್ ಹೀಗೆ ಒಂದು ನಗರವೆ ನಿರ್ಮಾಣಗೊಂಡಿತ್ತು ಸುಮಾರು 30 ವರ್ಷಗಳ ಕಾಲ ಗಣಿಗಾರಿಕೆ ಸಾಗಿತ್ತು. ಈ ನಡುವೆ ಗಣಿಗಾರಿಕೆಗೆ ವಿರೋಧ ಕೂಡ ಆರಂಭಗೊಂಡಿತ್ತು.
1990 ರ ದಶಕದಲ್ಲಿ ಸ್ಥಳೀಯವಾಗಿ ಗಣಿಗಾರಿಕೆಗೆ ವಿರೋಧ ಹೋರಾಟಗಳು ತೀವ್ರಗೊಂಡವು. ಇದ್ದರಿಂದ ಮೂಲ ಪರಿಸರಕ್ಕೆ ದಕ್ಕೆಯಾಗುತ್ತದೆ ಪ್ರಕೃತಿ ಸೌಂದರ್ಯ ನಾಶವಾಗುತ್ತದೆ. ಸುತ್ತ ಮುತ್ತಲ ಜನರಿಗೆ ಆರೋಗ್ಯ ಸಮಸ್ಯೆ ಉಂಟಾಗುತ್ತದೆ ಹೀಗೆ ದೂರುಗಳು ಕೇಳಿ ಬಂದವು. ಕುದುರೆಮುಖ ಉಳಿಸಿ ಹೋರಾಟ ಸಮಿತಿ, ಪಶ್ಚಿಮ ಘಟ್ಟ ಉಳಿಸಿ ಹೋರಾಟ ಸೇರಿ ಆನೇಕ ಸಂಘ, ಸಂಸ್ಥೆಗಳು ಎನ್.ಜಿ.ಓ ಗಳು ಗಣಿಗಾರಿಕೆ ಸ್ಥಗಿತಕ್ಕೆ ತೀವ್ರ ಹೋರಾಟ ನಡೆಸಿದ್ದವು. ವಿರೋಧದ ಬೆನ್ನಲ್ಲೆ ಕೆನಡಾದ ಕಂಪನಿ ಮತ್ತೆ ಬಂಡವಾಳ ಹೂಡಲು ನಿರಾಕರಿಸಿತ್ತು.
ಹೋರಾಟ ತೀವ್ರಗತಿ ಪಡೆದಾಗ ಕೇಂದ್ರ ಸರ್ಕಾರ ಕೂಡ ಇದನ್ನು ಗಂಭೀರವಾಗಿ ಪರಿಗಣಿಸಿತ್ತು. ನಂತರ 2006 ರಲ್ಲಿ ದೇಶದ ಉಚ್ಚ ನ್ಯಾಯಾಲಯವು ಕುದುರೆಮುಖದಲ್ಲಿ ಸಂಪೂರ್ಣ ಗಣಿಗಾರಿಕೆಯನ್ನು ಸ್ಥಗಿತಗೊಳಿಸುವಂತೆ ಆದೇಶ ನೀಡಿತ್ತು. ಹಾಗೆ 2006 ರಲ್ಲಿ ಗಣಿಗಾರಿಕೆಯ ಯಂತ್ರಗಳು ಸ್ಥಬ್ಧಗೊಂಡವು. ಇದೊಂದು ರೀತಿಯಲ್ಲಿ ಪಶ್ಚಿಮಘಟ ಕುದುರೆಮುಖದ ಉಳಿವಿಗೆ ಒಳಿತಾಯಿತಾದರು ಸರ್ಕಾರಗಳು ಗಣಿಯಲ್ಲಿ ದುಡಿಯುತ್ತಿದವರ ಬಗ್ಗೆ ಹೆಚ್ಚಿನ ಗಮನ ಕೊಡಲಿಲ್ಲ. ಕೆಲವರೆಗೆ ಅಲ್ಪ ಸ್ವಲ್ಪ ಪರಿಹಾರ ಸಿಕ್ಕಿತಾದರು ಸಾಕಷ್ಟು ಮಂದಿಗೆ ಪರಿಹಾರ ಸಿಗಲಿಲ್ಲ. ಕೆಲವರು ಅಲ್ಲಿಂದ ಬೇರೆಡೆಗೆ ಸ್ಥಳಾಂತರ ಗೊಂಡರು. ಇನ್ನು ಸಾಕಷ್ಟು ಜನ ಅಲ್ಲೆ ಉಳಿದುಕೊಂಡಿದ್ದಾರೆ ಕಂಪನಿ ಅಥವಾ ಸರ್ಕಾರ ಪರಿಹಾರ ನೀಡಬಹುದು ಎಂಬ ನಿರೀಕ್ಷೆಯಲ್ಲಿ ಸ್ಥಳೀಯವಾಗಿ ಕೂಲಿ ನಾಲಿ ಮಾಡಿ ಬದುಕುತ್ತಿದ್ದಾರೆ. ಈಗ ಗಣಿಗಾರಿಕೆಯ ಯಂತ್ರಗಳು ತುಕ್ಕು ಹಿಡಿಯುತ್ತಿವೆ. ಅಂಗಡಿ, ಮನೆ, ಬ್ಯಾಂಕ್, ಶಾಲೆ ಕಟ್ಟಡ ಸೇರಿ ನಗರ ಈಗ ಕಾಡು ಗಿಡ ಗಂಟೆ ಬೆಳೆದು ಗೋಸ್ಟ್ ನಗರವಾಗಿ ಮಾರ್ಪಾಡಾಗಿದೆ.(ಮುಂದುವರೆಯುವುದು)