ಕಳಸ ಲೈವ್ ವರದಿ
ಕಳಸ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆಯುತ್ತಿದ್ದ ಕಂಸಾಳೆ ತರಬೇತಿಯನ್ನು ಪಡೆದ ಇಲ್ಲಿಯ ವಿದ್ಯಾರ್ಥಿಗಳು ಶುಕ್ರವಾರ ಅದ್ಬುತವಾದ ಕಂಸಾಳೆ ಪ್ರದರ್ಶನ ನೀಡಿ ಜನರ ಮೆಚ್ಚುಗೆಗೆ ಪಾತ್ರರಾದರು.
ಕಳೆದ 20 ದಿನಗಳ ಹಿಂದೆ ಕಳಸದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಾಂಸ್ಕøತಿಕ ವಿಭಾಗ, ಕನ್ನಡ ವಿಭಾಗ ಮತ್ತು ಆಂತರಿಕ ಗುಣಮಟ್ಟ ಭರವಸೆ ಕೋಶ, ಕಳಸದ ಕರ್ನಾಟಕ ಜಾನಪದ ಪರಿಷತ್ತು, ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಚನ್ನರಾಯಪಟ್ಟಣದ ಪ್ರತಿಮಾ ಟ್ರಸ್ಟ್ನ ಸಹಯೋಗದಲ್ಲಿ ‘ಕಂಸಾಳೆ ನೃತ್ಯ ತರಬೇತಿ ಕಾರ್ಯಗಾರ’ವನ್ನು ಹಮ್ಮಿಕೊಳ್ಳಲಾಗಿತ್ತು.
ಈ ಕಾರ್ಯಗಾರದಲ್ಲಿ 28 ವಿದ್ಯಾರ್ಥಿಗಳು ಪಾಲ್ಗೊಂಡು ತರಬೇತಿಯನ್ನು ಪಡೆದಿದ್ದರು.ಇದರ ಸಮಾರೋಪ ಸಮಾರಂಭವನ್ನು ಶುಕ್ರವಾರ ಕಾಲೇಜಿನಲ್ಲಿ ನಡೆಸಲಾಗಿತ್ತು.
ಸಮಾರೋಪ ಸಮಾರಂಭಕ್ಕೆ ಬಂದಿರುವ ಗಣ್ಯರನ್ನು ಆರತಿ ಎತ್ತಿ ತಿಲಕ ಇಟ್ಟು ಎಲೆ ಅಡಿಕೆ ಕೊಟ್ಟು ನಂತರ ಕಂಸಾಳೆಯ ಜಾನಪದ ಶೈಲಿಯಲ್ಲಿಯೇ ಬರಮಾಡಿಕೊಳ್ಳಲಾಯಿತು. ವೇದಿಕೆಯನ್ನು ಗ್ರಾಮೀಣ ಪ್ರದೇಶದಲ್ಲಿ ಇರುವ ತೆಂಗಿನ ಮರದ ಎಡೆ, ಕಾಫಿ ಬೀಜ, ಭತ್ತ, ಏಲಕ್ಕಿ, ಹಣ್ಣಡಿಕೆ, ವೀಳ್ಯದೆಲೆ,ಬಿದಿರಿನ ದಬ್ಬೆ, ಮಣ್ಣಿನ ಮಡಕೆ, ರಂಗೋಲಿ ಹಾಕಿ ವೇದಿಕೆಯನ್ನು ವಿಶೇಷ ರೀತಿಯಲ್ಲಿ ಶೃಂಗಾರ ಮಾಡಲಾಗಿತ್ತು.
ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ತಾವು ಕಲಿತ ಕಂಸಾಳೆ ನೃತ್ಯವನ್ನು ಪ್ರದರ್ಶನ ಮಾಡಿದರು.ಅದ್ಬುತವಾದ ಪಿರಾಮಿಡ್ ಗಳನ್ನು ಮಾಡಿ ಇವರೆಲ್ಲ ನಮ್ಮೂರಿನ ಕಾಲೇಜಿನ ವಿದ್ಯಾರ್ಥಿಗಳಾ?ಎಂದು ನೆರೆದಿರುವ ಸಭಿಕರು ಆಶ್ಚರ್ಯದಿಂದ ನೋಡುವಂತೆ ಮಾಡಿದರು.
ಕಾಲೇಜು ಪ್ರಾಂಶುಪಾಲ ವಿನಯಕುಮಾರ್ ಶೆಟ್ಟಿ, ಗ್ರಾ.ಪಂ ಅಧ್ಯಕ್ಷೆ ಸುಜಯ ಸದಾನಂದ, ಪ್ರತಿಮಾ ಟ್ರಸ್ಟ್ ಮುಖ್ಯಸ್ಥರು ಹಾಗೂ ಪ್ರಸಿದ್ಧ ರಂಗಭೂಮಿ ಕಲಾವಿದರಾದ ಉಮೇಶ ತೆಂಕನಹಳ್ಳಿ, ಜಾನಪದ ಪರಿಷತ್ತು ಅಧ್ಯಕ್ಷೆ ಡಾ.ರಮ್ಯ ಎಚ್.ಬಿ, ಕಾಲೇಜು ಅಭಿವೃದ್ದಿ ಸಮಿತಿ ಸದಸ್ಯ ಸುರೇಶ್ ಗೌಡ, ಪೋಷಕರ ವೇದಿಕೆ ಅಧ್ಯಕ್ಷ ಅಜಿತ್ ಪ್ರಸಾದ್, ಉಪಾಧ್ಯಕ್ಷ ಸುರೇಶ್ ಗೌಡ, ಕಸಾಪ ಹೋಬಳಿ ಅಧ್ಯಕ್ಷ ಶೇಖರ ಶೆಟ್ಟಿ, ಐ.ಕ್ಯೂ.ಎ.ಸಿ ಸಂಚಾಲಕ ಡಾ. ಆದಿತ್ಯ ಅಡಿಗ ಇದ್ದರು.