ಕಳಸ ಕಳಸ ಲೈವ್ ವರದಿ
ಇಲ್ಲಿಗೆ ಸಮೀಪದ ಪುರಾಣ ಪ್ರಸಿದ್ಧ ಹಳುವಳ್ಳಿ ಶ್ರೀಮಹಾಗಣೇಶ್ವರ ಸಮೇತ ಸುಬ್ರಹ್ಮಣ್ಯೇಶ್ವರ ದೇವಸ್ಥಾನದಲ್ಲಿ ನವಂಬರ್ 29 ರಂದು ಜಾತ್ರಾ ಮಹಾ ರಥೋತ್ಸವ ಕಾರ್ಯಕ್ರಮ ನಡೆಯಲಿದೆ.
ಜಿಲ್ಲೆಯಲ್ಲಿಯೇ ಅತ್ಯಂತ ಪ್ರಾಚೀನ ಹಾಗೂ ಪ್ರಸಿದ್ಧಿಯನ್ನು ಪಡೆದಿರುವ ದೇವಾಲಯಗಳಲ್ಲಿ ಇದು ಕೂಡ ಒಂದಾಗಿದೆ. ಸುಬ್ರಮಣ್ಯೇಶ್ವರ ಹಾಗೂ ಸರ್ಪ ಸಂಬಂಧಿತ ದೋಷಗಳ ಪರಿಹಾರಕ್ಕೆ ಈ ದೇವಸ್ಥಾನ ಅತ್ಯಂತ ಪ್ರಾಮುಖ್ಯತೆಯನ್ನು ಪಡೆಯುತ್ತದೆ.
ಭದ್ರಾ ನದಿಯ ಬಳಿಯೇ ಶ್ರೀಮಹಾಗಣೇಶ್ವರ ಸಮೇತ ಸುಬ್ರಹ್ಮಣ್ಯೇಶ್ವರ ದೇವಾಲಯವಿದ್ದು, ನದಿಯ ದಡದಲ್ಲಿ ನಾಗದೇವರ ವಿಗ್ರಹಗಳನ್ನು ಪ್ರತಿಷ್ಟಾಪಿಸಲಾಗಿದೆ.
ನಾಗನಿಗೆ ಅಶುದ್ಧಿ ಮಾಡುವುದು, ನಾಗ ಸಂಚರಿಸುವ ಜಾಗಕ್ಕೆ ತಡೆಯೊಡ್ಡುವುದು, ನಾಗಬೀದಿಯಲ್ಲಿ ಮನೆ ಕಟ್ಟುವುದು, ಸರ್ಪವಿಷ ಸಂಗ್ರಹ ಮಾಡುವುದು, ಹುತ್ತ ಕೆಡಹುದು, ಸರ್ಪಗಳಿಗೆ ಹಿಂಸೆ ಕೊಡುವುದು ಮೃತಸರ್ಪಾ ಪರಿತ್ಯಾಗ ಇತ್ಯಾದಿ ದೋಷಗಳಿಗೆ ಇಲ್ಲಿಯ ನಾಗಾರಾಧನೆಯಿಂದ ಪರಿಹಾರವನ್ನು ಕಂಡುಕೊಳ್ಳುತ್ತಾರೆ.
ಭಕ್ತಾದಿಗಳು ತಮ್ಮ ಹರಕೆಯಂತೆ ಬೆಳ್ಳಿ ಹಾವಿನ ಹೆಡೆ, ಮೊಟ್ಟೆ, ನರ, ಮಕ್ಕಳು, ಇತ್ಯಾಧಿಗಳನ್ನು ಹರಕೆ ರೂಪದಲ್ಲಿ ಸಲ್ಲಿಸಿದರೆ, ಸರ್ಪಸಂಸ್ಕಾರ, ಆಶ್ಲೇಷ ಬಲಿ, ನಾಗಾರಾದನೆ, ಅಭಿಷೇಕ, ನಾಗಪ್ರತಿಷ್ಟೆ ಮುಂತಾದ ಪೂಜಾ ವಿಧಾನಗಳನ್ನು ನೆರವೇರಿಸುತ್ತಾರೆ. ಕೇವಲ ಕಳಸ ಮಾತ್ರವಲ್ಲದೆ ರಾಜ್ಯ ಹೊರರಾಜ್ಯಗಳಿಂದ ಬಂದು ಇಲ್ಲಿ ಪೂಜಾ ವಿಧಿ ವಿಧಾನಗಳನ್ನು ಮಾಡಿಸಿಕೊಂಡು ಸಫಲತೆ ಕಂಡುಕೊಳ್ಳುತ್ತಿರುವುದು ಇಲ್ಲಿಯ ವಿಶೇಷವಾಗಿದೆ.
ಇಲ್ಲಿ ನ 28 ರಂದು ಜಾತ್ರಾ ಮಹೋತ್ಸವದ ಅಂಗವಾಗಿ ಗಣಪತಿ ಹೋಮ ದಿಂಡಿ ಉತ್ಸವ ನಡೆದು,.ನ 29 ರಂದು ಮದ್ಯಾಹ್ನ ಶ್ರೀ ಮಹಾ ರಥೋತ್ಸವ ರಾತ್ರಿ ರಂಗಪೂಜೆ,ದೀಪಾರಾಧನೆ ನಡೆಯಲಿದೆ. ನ 30 ರಂದು ತುಲಾರೋಪನಾ,ಕುಂಕುಮೋತ್ಸವ,ಅವಭೃತ ಸ್ನಾನ, ಡಿ 1ರಂದು ಮಹಾ ಸಂಪ್ರೋಕ್ಷಣೆಯೊಂದಿಗೆ ಜಾತ್ರಾಮಹೋತ್ಸವಕ್ಕೆ ತೆರೆಬೀಳಲಿದೆ.