ಕಳಸ ಲೈವ್ ವರದಿ
ಆರ್ಥಿಕ ಸಂಪತ್ತನ್ನು ಹೆಚ್ಚು ಮಾಡಿಕೊಳ್ಳಬೇಕು ಎಂಬ ಯೋಚನೆ ಮಾಡಿ ಭೂಮಿಯನ್ನು ಸತ್ವರಹಿತ ಮಾಡುವಂತಹ ವಾತಾವರಣದಿಂದ ಮೂಲ ಪರಂಪರೆಯ ವ್ಯವಸ್ಥೆಗೆ ಕರೆತರುವ ಕೃಷಿ ಪದ್ದತಿಯನ್ನು ಅಳವಡಿಸಿಕೊಳ್ಳುವುದು ಬಹಳ ಮುಖ್ಯವಾಗಿದೆ ಎಂದು ಹೊರನಾಡು ಅನ್ನಪೂರ್ಣೆಶ್ವರೀ ದೇವಸ್ಥಾನದ ಧರ್ಮಕರ್ತ ಜಿ.ಭೀಮೇಶ್ವರ ಜೋಷಿ ಹೇಳಿದರು.
ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ನಿ, ಬೆಂಗಳೂರು, ಜಿಲ್ಲಾ ಸಹಕಾರ ಯೂನಿಯನ್ ನಿ, ಚಿಕ್ಕಮಗಳೂರು, ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ನಿ, ಚಿಕ್ಕಮಗಳೂರು, ಕಳಸ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಸಂಯುಕ್ತಾಶ್ರಯದಲ್ಲಿ ಕಳಸ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಕಟ್ಟಡದಲ್ಲಿ ಭಾನುವಾರ ನಡೆದ 69ನೇ ಅಖಿಲ ಭಾರತ ಸಹಕಾರ ಸಪ್ತಾಹದ ಸಮಾರೋಪ ಸಮಾರಂಭದ ಉದ್ಘಾಟನೆಯನ್ನು ಮಾಡಿ ಮಾತನಾಡಿದ ಅವರು ಕೃಷಿ ಭೂಮಿಯನ್ನು ನಮ್ಮ ತಾಯಿಯನ್ನು ರಕ್ಷಣೆ ಮಾಡುವಷ್ಟು ಜೋಪಾನ ಮಾಡಿ, ಪಾರಂಪರಿಕ ಕೃಷಿ ಪದ್ದತಿಯನ್ನು ಅಳವಡಿಸಿಕೊಳ್ಳುವಂತ ವ್ಯವಸ್ಥೆಗೆ ಪರಿವರ್ತನೆ ಮಾಡಿಕೊಳ್ಳುವುದು ಬಹಳ ಮುಖ್ಯವಾಗಿದೆ.
ಕೃಷಿ ಕೂಲಿ ಕಾರ್ಮಿಕರಿಗೆ ಪರಿಪೂರ್ಣವಾದ ಬದ್ಧತೆ ಇಲ್ಲದೆ ಇರುವುದರಿಂದ ಕೃಷಿ ಕಾರ್ಮಿಕರ ಸಮಸ್ಯೆ ಎದುರಾಗಿ, ಹೊರ ರಾಜ್ಯಗಳಿಂದ ಕಾರ್ಮಿಕರು ವಲಸೆ ಬರುವಂತಾಗಿದೆ. ಕೃಷಿ ಕಾರ್ಮಿಕರಿಗೆ ಕೊಡುವ ಎಲ್ಲಾ ಸವಲತ್ತುಗಳನ್ನು ಸರ್ಕಾರ ಕೊಡಬೇಕು. ಆದರೆ ಅದನ್ನು ಪಡೆದುಕೊಳ್ಳಬೇಕಾದರೆ ಒಬ್ಬ ಕಾರ್ಮಿಕ ಒಂದು ತಿಂಗಳಲ್ಲಿ ಕನಿಷ್ಠ 20 ಕೆಲಸವನ್ನು ಮಾಡಿದ ಪ್ರಮಾಣ ಪತ್ರವನ್ನು ಸರ್ಕಾರಕ್ಕೆ ಸಲ್ಲಿಸಿ ನಂತರ ಸವಲತ್ತನ್ನು ಪಡೆದುಕೊಳ್ಳುವ ಪರಿಸ್ಥಿತಿ ನಿರ್ಮಾಣವಾದರೆ ಮಾತ್ರ ಕೃಷಿ ಕೂಲಿ ಕಾರ್ಮಿಕರ ಸಮಸ್ಯೆಗೆ ಪರಿಹಾರ ಸಿಗಬಹುದು ಎಂದು ಹೇಳಿದರು.
ದಿನದ ಮಹತ್ವದ ಕುರಿತು ಉಪನ್ಯಾಸ ನೀಡಿದ ಸಹಕಾರ ಭಾರತಿ ರಾಷ್ಟ್ರೀಯ ಕಾರ್ಯಕಾರಿ ಮಂಡಳಿಯ ಸದಸ್ಯ ಕರುಣಾಕರನ್ ನಂಬಿಯಾರ್ ಮಾತನಾಡಿ ಭಾರತ ಸಂಸ್ಕøತಿ ಸಹಕಾರತೆಗೆ ಆಧಾರವಾಗಿರುವ ಸಂಸ್ಕøತಿ, ರಾಷ್ಟ್ರದ ಸಮೃದ್ಧಿಯನ್ನು ಸಹಕಾರತೆಯ ಮೂಲಕ ಗಳಿಸಬಹುದು. ಕೃಷಿಗೆ ಸಂಬಂಧಿಸಿದ ಈ ರಾಜ್ಯದ ಮತ್ತು ದೇಶದ ಕಾಯಿದೆ ಹಳೇಯ ಕಾಯಿದೆಯಾಗಿದೆ ಇದು ಬದಲಾವಣೆ ಮಾಡುವ ಅಗತ್ಯ ಇದೆ. ಇಂತಹ ಕಾರ್ಯಕ್ರಮದಲ್ಲಿ ಚುನಾಯಿತ ಜನಪ್ರತಿನಿಧಿಗಳು ಭಾಗವಹಿಸಿ ಈ ಸಮಸ್ಯೆಗಳ ಬಗ್ಗೆ ಸರ್ಕಾರದಲ್ಲಿ ಚರ್ಚಿಸಿ ಪರಿಹಾರ ರೂಪಿಸುವ ಕೆಲಸ ಆಗಬೇಕು. ಹಾಗೂ ಸಹಕಾರ ಕ್ಷೇತ್ರ ಹೆಚ್ಚಾಗಿ ಯುವಕರನ್ನು ಸೆಳೆಯುವಂತ ಬದಲಾವಣೆ ಆಗಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷ ಡಾ||ಜಿ.ಎಸ್.ಮಹಾಬಲ ವಹಿಸಿದರು.ಕರ್ನಾಟಕ ರಾಜ್ಯ ಸಹಕಾರ ಮಹಾ ಮಂಡಳ ನಿರ್ದೇಶಕ ಬಿ.ಸಿ.ಲೋಕಪ್ಪ ಗೌಡ, ಕಳಸ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಜಿ.ಕೆ.ಮಂಜಪ್ಪಯ್ಯ,ಮಾಜಿ ಸಚಿವ ಬಿ.ಬಿ.ನಿಂಗಯ್ಯ, ಕಳಸ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸುಜಯ ಸದಾನಂದ, ಸಹಕಾರ ಕ್ಷೇತ್ರದ ಮುಖಂಡರಾದ ಹಳಸೆ ಬಿ.ಶಿವಣ್ಣ,ಎನ್.ಜೆ.ಜಯರಾಮ್, ಹೆಚ್.ಎಂ. ರವಿ, ಹೆಚ್.ಆರ್.ಮಹೇಶ್, ಎಂ.ಎ.ಶೇಷಗಿರಿ, ಕೆ.ಬಿ.ಗೋಪಾಲ ಗೌಡ, ಟಿ.ಎನ್.ಚನ್ನಕೇಶವ ಗೌಡ ಇತರರು ಇದ್ದರು.