ಕಳಸ ಲೈವ್ ವರದಿ
ಕಳಸದ ದುರ್ಗಾ ಮಂಟಪದಲ್ಲಿ ಭಾನುವಾರ ಕಳಸ ಸಂಜೀವಿನಿ ಗ್ರಾಮ ಪಂಚಾಯಿತಿ ಒಕ್ಕೂಟ ಮತ್ತು ಗ್ರಾಮ ಪಂಚಾಯಿತಿ ಕಳಸ ವತಿಯಿಂದ ಸಂಜೀವಿನಿ ಮಾಸಿಕ ಸಂತೆ, ಪ್ರದರ್ಶನ ಮತ್ತು ಮಾರಾಟ ನಡೆಯಿತು.
ಸಂತೆಯಲ್ಲಿ ಒಕ್ಕೂಟದ ಸಂಘಗಳ ಸದಸ್ಯರು ಮಲೆನಾಡು ಉತ್ಪನ್ನಗಳು, ಅಲಂಕಾರಿಕಾ ಹೂ ಗಿಡಗಳ ಜೊತೆ ತಮ್ಮಲ್ಲಿ ಬೆಳೆದ ತರಕಾರಿ, ಹಣ್ಣುಗಳು, ಗುಡಿ ಕೈಗಾರಿಕೆಯಿಂದ ಮಾಡಿದ ಬ್ಯಾಗ್, ಬಟ್ಟೆಗಳ ವ್ಯಾಪಾರ ಮತ್ತು ಪ್ರದರ್ಶನ ಮಾಡಿದರು.ಸಂತೆಯಲ್ಲಿ ಗ್ರಾಮಾಂತರ ಪ್ರದೇಶದಲ್ಲಿ ಸಿಗುವಂತ ಒಂದೆಲಗ ಸೊಪ್ಪು, ನುಗ್ಗೆ ಸೊಪ್ಪು, ಕೆಸುವಿನ ಗೆಡ್ಡೆ, ಕೆಸು ದಂಟು ಎಲೆ, ಅಮಟೆಕಾಯಿ, ಬಾಳೆ ದಿಂಡು, ಬಾಳೆ ಹೂ, ಮನೆಯಲ್ಲಿ ತಯಾರಿಸಿದ ಚಿಪ್ಸ್, ಹಪ್ಪಳ, ಸಂಡಿಗೆ, ಚಕ್ಕುಲಿ, ಒಬ್ಬಟ್ಟು ಮುಂತಾದ ತಿಂಡಿ ತಿನಸುಗಳು ಗ್ರಾಹಕರ ಗಮನ ಸೆಳೆದವು.ಬಲು ಅಪರೂಪಕ್ಕೆ ಸಿಗುವ ತರಕಾರಿಗಳು ಕ್ಷಣ ಮಾತ್ರದಲ್ಲಿ ಖಾಲಿಯಾದವು.
ಬಲು ಅಪರೂಪಕ್ಕೆ ನಡೆದ ಈ ಸಂತೆ ಮೇಳದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಹಕರು ಬಂದು ವ್ಯಾಪಾರ ವಹಿವಾಟು ಮಾಡಿದರು.
ಕಾರ್ಯಕ್ರಮದ ಉದ್ಘಾಟನೆಯನ್ನು ಮೂಡಿಗೆರೆ ಶಾಸಕ ಎಂ.ಪಿ.ಕುಮಾರಸ್ವಾಮಿ ಉದ್ಘಾಟಿಸಿ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ತಾಲ್ಲೂಕು ಪಂಚಾಯಿತಿ ಇಒ ಹರ್ಷಕುಮಾರ್, ಕಾರ್ಯಕ್ರಮದ ವ್ಯವಸ್ಥಾಪಕಿ ಶಾಲಿನಿ, ಪಿಡಿಒ ಕವೀಶ್ ಇತರರು ಇದ್ದರು.