ಕಳಸ ಲೈವ್ ವರದಿ
ಅಡಿಕೆ ಎಲೆ ಚುಕ್ಕಿ ರೋಗದ ಪರಿಹಾರಕ್ಕಾಗಿ ಹೊರನಾಡು ಶ್ರೀ ಅನ್ನಪೂರ್ಣೇಶ್ವರಿ ಸನ್ನಧಿಯಲ್ಲಿ ನವಂಬರ್ ಒಂದರಂದು ಶ್ರೀಮನ್ ಮಹಾ ಚಂಡಿಕಾ ಹೋಮ ನಡೆಸಲಾಗುತ್ತಿದೆ ಎಂದು ದೇವಸ್ಥಾನದ ಧರ್ಮಕರ್ತ ಜಿ.ಭೀಮೇಶ್ವರ ಜೋಷಿ ತಿಳಿಸಿದ್ದಾರೆ.
ಈ ಹಿಂದೆ ಕೃಷಿಗೆ, ಕೃಷಿ ಬೆಳೆಗೆ ತೊಂದರೆ ಬಂದಾಗ ಕೃಷಿಕರು ಆಗಿನ ಧರ್ಮಕರ್ತರಾಗಿದ್ದ ಶ್ರೀ ಡಿ.ಬಿ.ವೆಂಕಟಸುಬ್ಬಾ ಜೋಯಿಸರಲ್ಲಿ ಪರಿಹಾರವನ್ನು ನೀಡಬೇಕಾಗಿ ಪ್ರಾರ್ಥಿಸಿದ ಮೇರೆಗೆ ಶ್ರೀಮಾತೆಯ ಸನ್ನಿಧಿಯಲ್ಲಿ ವಿಶೇಷ ಪ್ರಾರ್ಥನೆ, ಪೂಜೆ, ಜಪ, ಹೋಮವನ್ನು ನಡೆಸಿ, ಶ್ರೀಮಾತೆಯ ಪ್ರಸಾದವನ್ನು ಅಪೇಕ್ಷಿತ ಎಲ್ಲಾ ಭಕ್ತರು ಪಡೆದುಕೊಂಡು ತಮ್ಮ ಕೃಷಿ ಕ್ಷೇತ್ರಕ್ಕೆ ಹಾಕಿ ಸಂರಕ್ಷಿಸಿಕೊಂಡು ಬರಲಾಗಿದೆ.
ಈಗ ಪುನಃ ಅಡಿಕೆ ಮರಕ್ಕೆ ಎಲೆಚುಕ್ಕಿ ರೋಗ ಬಂದಿರುವ ಹಿನ್ನೆಲೆಯಲ್ಲಿ ನಮ್ಮಲ್ಲಿ ತುಂಬಾ ಜನ ಕೃಷಿಕರು ನಿವೇದನೆ ಮಾಡಿಕೊಂಡಿದ್ದರ ಮೇರೆಗೆ ಎಲ್ಲಾ ಅಡಿಕೆ ಬೆಳೆಗಾರರ ಹಿತವನ್ನು ಬಯಸಿ ಹಿಂದೆ ನಡೆಸಿದ ಧಾರ್ಮಿಕ ಕಾರ್ಯದಂತೆ ಶ್ರೀಕ್ಷೇತ್ರದಲ್ಲಿ ಈ ರೋಗದ ಪರಿಹಾರಕ್ಕಾಗಿ ಸಂಪುಟೀಕರಣ ಸಪ್ತಶತಿ ಪಾರಾಯಣವನ್ನು ಪ್ರಾರಂಭಿಸಿರುತ್ತೇವೆ. ಪರಿಹಾರದ ಅಂಗವಾಗಿ ಶ್ರೀಮಾತೆಯ ಸನ್ನಿಧಿಯಲ್ಲಿ “ಶ್ರೀಮನ್ ಮಹಾದಂಡಿಕಾ ಯಾಗ”ವನ್ನು ನಡೆಸುವುದೆಂದು ತೀರ್ಮಾನಿಸಿ ತಾ 01-11-2022 ರ ಮಂಗಳವಾರ ದಂದು ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಪೂರ್ವಾಹ್ನ: 11-30 ಗಂಟೆಗೆ ಪೂರ್ಣಾಹುತಿ ನಡೆಯುತ್ತದೆ.
ಕೃಷಿಕರು ಈ ದಿನ ನಡೆಯುವ ಶ್ರೀಮನ್ ಮಹಾಚಂಡಿಕಾ ಯಾಗದಲ್ಲಿ ಭಾಗವಹಿಸಿ ಶ್ರೀಮಾತೆಗೆ ನಡೆಸಿದ ಹೋಮದ ಪ್ರಸಾದ ಮತ್ತು ಅರ್ಚನಾ ಪ್ರಸಾದವನ್ನು ಸ್ವೀಕರಿಸಿ, ತಮ್ಮ ಕೃಷಿ ಭೂಮಿಗೆ ಹಾಕಿ, ಶ್ರೀ ಜಗನ್ಮಾತೆಯಲ್ಲಿ ನಮ್ಮ ಕೃಷಿ ಭೂಮಿಯನ್ನು ರಕ್ಷಿಸಿ ಕಾಪಾಡಬೇಕು ಎಂಬುದಾಗಿ ಪ್ರಾರ್ಥಿಸೋಣವಾಗಲಿ. ಈ ಹಿಂದೆಯೂ ಕೂಡ ಉತ್ತಮ ಫಲ ಸಿಕ್ಕಿದೆ ಎಂಬುದಾಗಿ ಕೃಷಿಕರು ತಿಳಿಸಿರುವುದರಿಂದ ಅದೇ ಪದ್ಧತಿಯನ್ನು ನಡೆಸುವುದು ಉತ್ತಮ ಮಾರ್ಗವಾಗಿದೆ ಎಂದು ತಿಳಿಸಿದ್ದಾರೆ.