ಕಳಸ ಲೈವ್ ವರದಿ
ಆದಿಶಕ್ತ್ಯಾತ್ಮಕ ಶ್ರೀ ಅನ್ನಪೂರ್ಣೇಶ್ವರಿ ದೇವಸ್ಥಾನ ಶ್ರೀ ಕ್ಷೇತ್ರ ಹೊರನಾಡಿನಲ್ಲಿ ಮಂಗಳವಾರ ಶ್ರೀ ಕ್ಷೇತ್ರದ ಧಾರ್ಮಿಕ ಕಾರ್ಯಕ್ರಮದಲ್ಲಿ ಶ್ರೀಮಾತೆಯ ಪುನಃ ಪ್ರತಿಷ್ಠಾ ಸ್ವರ್ಣ ಮಹೋತ್ಸವ ಸಹಿತ ಬ್ರಹ್ಮ ಕಲಶೋತ್ಸವ- 2023ರ ಮಾಹಿತಿ ಪತ್ರ ಲೋಕಾರ್ಪಣೆ ಹಾಗೂ ಗ್ರಾಮೀಣಾಭಿವೃದ್ಧಿ ಯೋಜನೆಯ ವಿವಿಧ ಕಾರ್ಯಕ್ರಮಗಳು ನಡೆಯಿತು.
ಕಾರ್ಯಕ್ರಮದ ಉದ್ಘಾಟನೆ ಹಾಗೂ ದಿವ್ಯ ಸಾನಿಧ್ಯವನ್ನು ಗೌರಿಗದ್ದೆ ಅವಧೂತರಾದ ವಿನಯ್ ಗುರೂಜಿ, ಕಾರ್ಯಕ್ರಮ ಅಧ್ಯಕ್ಷತೆಯನ್ನು ಧರ್ಮಕರ್ತರಾದ ಜಿ. ಭೀಮೇಶ್ವರ ಜೋಷಿ ವಹಿಸಿದ್ದರು.
ಕಾರ್ಯಕ್ರಮದಲ್ಲಿ ಶ್ರೀಮಾತೆಯ ಪುನಃ ಪ್ರತಿಷ್ಠಾ ಸ್ವರ್ಣ ಮಹೋತ್ಸವ ಸಹಿತ ಬ್ರಹ್ಮ ಕಲಶೋತ್ಸವ- 2023ರ ಮಾಹಿತಿ ಪತ್ರ ಲೋಕಾರ್ಪಣೆ ಮಾಡಿ, ತಾರೀಕು 22-04-2023 ರಿಂದ 29-04-2023ರ ವರೆಗೆ ವಿವಿಧ ಧಾರ್ಮಿಕ ಹಾಗೂ ಸಾಂಸ್ಕøತಿಕ ಕಾರ್ಯಕ್ರಮಗಳೊಂದಿಗೆ ಶ್ರೀ ಮಾತೆಯ ಪುನಃ ಪ್ರತಿಷ್ಠಾ ಸ್ವರ್ಣ ಮಹೋತ್ಸವ ಹಾಗೂ ಬ್ರಹ್ಮಕುಂಭಾಭಿಷೇಕ ನಡೆಯುವ ಬಗ್ಗೆ ಜಿ.ಭೀಮೇಶ್ವರ ಜೋಷಿ ಮಾಹಿತಿ ನೀಡಿದರು.
ಗ್ರಾಮೀಣಾಭಿವೃದ್ಧಿ ಯೋಜನೆಯ ಅನ್ನದಾಸೋಹ ಯೋಜನೆಯಲ್ಲಿ ಸರಕಾರಿ ಕಿರಿಯ ಮತ್ತು ಹಿರಿಯ ಪ್ರಾಥಮಿಕ ಶಾಲೆಗಳಿಗೆ ಮತ್ತು ಆಯ್ದ ದೇವಸ್ಥಾನಗಳಿಗೆ ತಟ್ಟೆ ಲೋಟಗಳ ವಿವರಣೆ ಮಾಡಲಾಯಿತು. ಶೈಕ್ಷಣಿಕ ಅಭಿವೃದ್ಧಿ ಯೋಜನೆಯಲ್ಲಿ ಕಳಸ ತಾಲೂಕಿನ ಪ್ರೌಢಶಾಲಾ ಮಕ್ಕಳಿಗೆ ಉಚಿತ ಟಿಪ್ಪಣಿ ಪುಸ್ತಕಗಳ ವಿತರಣೆ ಮಾಡಲಾಯಿತು.
ಕಳಸ ತಾಲೂಕಿನ ಪ್ರೌಢಶಾಲೆಗಳು ಪದವಿ ಪೂರ್ವ ಮತ್ತು ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ಕೃಷಿ ಸಮೃದ್ಧಿ ಯೋಜನೆ ಯಲ್ಲಿ ರೈತರಿಗೆ ಕಲ್ಪವೃಕ್ಷ ಸಸಿಗಳ ವಿತರಣೆಯನ್ನು ಮಾಡಲಾಯಿತು.
ಈ ಸಂದರ್ಭದಲ್ಲಿ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ರಾಜ್ಯಾಧ್ಯಕ್ಷ ಅಶೋಕ್ ಹಾರ್ನಳ್ಳಿ, ಮೂಡಿಗೆರೆ ಶಾಸಕ ಎಂ.ಪಿ ಕುಮಾರಸ್ವಾಮಿ, ವಿಧಾನ ಪರಿಷತ್ ಸದಸ್ಯ ಎಸ್.ಎಲ್ ಭೋಜೇಗೌಡರು, ರಾಜಲಕ್ಷ್ಮೀ ಬಿ ಜೋಷಿ, ರಾಮನಾರಾಯಣ ಜೋಷಿ, ಅಖಿಲ ಭಾರತ ಬ್ರಾಹ್ಮಣ ಸಮಾಜದ ಸಂಘಟನಾ ಕಾರ್ಯದರ್ಶಿ ರಾಘವೇಂದ್ರ ಭಟ್, ಹೊರನಾಡು ಗ್ರಾಮ ಪಂಚಾಯತಿ ಅಧ್ಯಕ್ಷ ವೃಷಭರಾಜ್ ಇದ್ದರು.