ಕಳಸ ಲೈವ್ ವರದಿ
ತಾಲ್ಲೂಕಿನ ಅಡಿಕೆ ಕೃಷಿಕರನ್ನು ಎಲೆಚುಕ್ಕಿ ರೋಗ ಬಾಧಿಸುತ್ತಿರುವ ಹಿನ್ನೆಲೆಯಲ್ಲಿ ಹೊರನಾಡಿನ ಅನ್ನಪೂರ್ಣೇಶ್ವರಿ ಸನ್ನಿಧಿಯಲ್ಲಿ ಕೃಷಿಕರ ಪರವಾಗಿ ಪೂಜೆ, ಪಾರಾಯಣ, ಹೋಮ ನಡೆಸಲಾಗಿದೆ ಎಂದು ದೇವಸ್ಥಾನದ ಧರ್ಮಕರ್ತ ಜಿ.ಭೀಮೇಶ್ವರ ಜೋಷಿ ತಿಳಿಸಿದ್ದಾರೆ.
ಕೃಷಿಕರು ದೇವಸ್ಥಾನಕ್ಕೆ ಬಂದು ಶ್ರೀಮಾತೆಯ ದರ್ಶನ ಪಡೆದು ಶ್ರೀಮುಡಿ ಗಂಧಪ್ರಸಾದ ಸ್ವೀಕರಿಸಿ ತಮ್ಮ ಜಮೀನಿಗೆ ಸಿಂಪಡಿಸಬೇಕು. ಈ ಹಿಂದೆಯೂ ಜಗನ್ಮಾತೆಯ ಭಂಡಾರದ ಪ್ರಸಾದವನ್ನು ಕೃಷಿ ಭೂಮಿಗೆ ಹಾಕಿದ್ದರ ಪರಿಣಾಮ ಅನೇಕ ಸಮಸ್ಯೆಗಳು ಪರಿಹಾರ ಆಗಿವೆ ಎಂದೂ ಅವರು ತಿಳಿಸಿದ್ದಾರೆ.
ಅನ್ನಪೂರ್ಣೆಯ ಅನುಗ್ರಹದಿಂದ ಕೃಷಿಕರಿಗೆ ಬಂದಿರುವ ಗಂಡಾತರ ಪರಿಹಾರ ಆಗುವ ಎಲ್ಲ ಭರವಸೆ ಇದೆ. ಈ ರೋಗದ ಬಗ್ಗೆ ವೈಜ್ಞಾನಿಕ ವಿಶ್ಲೇಷಣೆ ಮಾಡಬೇಕು ಮತ್ತು ನಿವಾರಣೋಪಾಯಗಳನ್ನು ಕಂಡು ಹಿಡಿಯಬೇಕು ಎಂದು ಮುಖ್ಯಮಂತ್ರಿ, ಕೃಷಿ ಮಂತ್ರಿ ಮತ್ತು ಶಾಸಕರಲ್ಲಿ ಮನವಿ ಮಾಡಿದ್ದೇವೆ.
ಎಲ್ಲ ಕೃಷಿಕರೂ ಧೈರ್ಯದಿಂದ, ಸಾಮೂಹಿಕವಾಗಿ ಈ ರೋಗಕ್ಕೆ ಪರಿಹಾರ ಕಂಡು ಕೊಳ್ಳಬೇಕಾಗಿದೆ. ಯಾವ ಕೃಷಿಕರೂ ಕೂಡ ಆತ್ಮಹತ್ಯೆಯಂತಹ ದುಡುಕಿನ ತೀರ್ಮಾನ ತೆಗೆದುಕೊಳ್ಳಬಾರದು ಎಂದೂ ಭೀಮೇಶ್ವರ ಜೋಷಿ ಮನವಿ ಮಾಡಿದ್ದಾರೆ.