ಕಳಸ ಲೈವ್ ವರದಿ
ಆದಿಶಕ್ತ್ಯಾತ್ಮಕ ಶ್ರೀ ಅನ್ನಪೂರ್ಣೇಶ್ವರಿ ದೇವಸ್ಥಾನ ಹೊರನಾಡಿನಲ್ಲಿ ಶ್ರೀ ಕ್ಷೇತ್ರದ ಧಾರ್ಮಿಕ ಕಾರ್ಯಕ್ರಮದಲ್ಲಿ ಶ್ರೀ ಮಹಾಮಾತೆಯ ಪುನಃ ಪ್ರತಿಪ್ಠಾ ಮಹೋತ್ಸವ ಸಹಿತ ಬ್ರಹ್ಮಕಲಶೋತ್ಸವ-2023ರ ಮಾಹಿತಿ ಪತ್ರ ಲೋಕಾರ್ಪಣೆ ಹಾಗೂ ಗ್ರಾಮೀಣಾಭಿವೃದ್ಧಿ ಯೋಜನೆಯ ವಿವಿಧ ಕಾರ್ಯಕ್ರಮಗಳು ಅಕ್ಟೋಬರ್ 18 ರ ಮಂಗಳವಾರ ನಡೆಯಲಿದೆ ಎಂದು ಹೊರನಾಡು ದೇವಸ್ಥಾನದ ಧರ್ಮಕರ್ತ ಜಿ. ಭೀಮೇಶ್ವರ ಜೋಷಿ ತಿಳಿಸಿದ್ದಾರೆ .
ಅಂದು ದೇವಸ್ಥಾನದ ಲಲಿತಕಲಾ ಮಂಟಪದಲ್ಲಿ ಕಾರ್ಯಕ್ರಮ ನಡೆಯಲಿದ್ದು, ಅನ್ನದಾಸೋಹ ಯೋಜನೆಯಲ್ಲಿ ಸರಕಾರಿ ಕಿರಿಯ ಮತ್ತು ಹಿರಿಯ ಪ್ರಾಥಮಿಕ ಶಾಲೆಗಳಿಗೆ ಮತ್ತು ಆಯ್ದ ದೇವಸ್ಥಾನಗಳಿಗೆ ತಟ್ಟೆ ಲೋಟಗಳ ವಿತರಣೆ, ಶೈಕ್ಷಣಿಕ ಅಭಿವೃದ್ಧಿ ಯೋಜನೆಯಲ್ಲಿ ಕಳಸ ತಾಲೂಕಿನ ಪ್ರೌಢಶಾಲಾ ಮಕ್ಕಳಿಗೆ ಉಚಿತ ಟಿಪ್ಪಣಿ ಪುಸ್ತಕಗಳ ವಿತರಣೆ, ಕಳಸ ತಾಲೂಕಿನ ಪ್ರೌಢಶಾಲೆಗಳು ಪದವಿ ಪೂರ್ವ ಮತ್ತು ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ಕೃಷಿ ಸಮೃದ್ಧಿ ಯೋಜನೆ ಯಲ್ಲಿ ಕಲ್ಪವೃಕ್ಷ ಸಸಿಗಳ ವಿತರಣೆ ನಡೆಯಲಿದೆ.
ಈ ಕಾರ್ಯಕ್ರಮದ ದಿವ್ಯ ಸಾನಿಧ್ಯ ಮತ್ತು ಉದ್ಘಾಟನೆಯನ್ನು ವಿನಯ ಗುರೂಜಿ ಅವಧೂತರು ನೆರವೇರಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಕೃಷಿ ಮತ್ತು ರೈತ ಕಲ್ಯಾಣ ಸಚಿವ ಶೋಭಾ ಕರಂದ್ಲಾಜೆ, ವಸತಿ ಹಾಗೂ ಮೂಲ ಸೌಲಭ್ಯ ಅಭಿವೃದ್ಧಿ ಸಚಿವ ವಿ ಸೋಮಣ್ಣ, ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಬೆಂಗಳೂರು ಇದರ ಅಧ್ಯಕ್ಷ ಅಶೋಕ್ ಹಾರ್ನಳ್ಳಿ, ವಿಶ್ವವಾಣಿ ಪ್ರಧಾನ ಸಂಪಾದಕ ವಿಶ್ವೇಶ್ವರ ಭಟ್ ,ಮೂಡಿಗೆರೆ ಶಾಸಕ ಎಂ.ಪಿ ಕುಮಾರಸ್ವಾಮಿ, ವಿಧಾನ ಪರಿಷತ್ ಸದಸ್ಯ ಪ್ರಾಣೇಶ್, ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಭೋಜೇಗೌಡ, ಮಾಜಿ ಸಚಿವೆ ಮೋಟಮ್ಮ, ಹೊರನಾಡು ಗ್ರಾಮ ಅಧ್ಯಕ್ಷ ವೃಷಭರಾಜ್ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವರು.
ಸಾಂಸ್ಕøತಿಕ ಕಾರ್ಯಕ್ರಮದ ಅಂಗವಾಗಿ ಸಂಜೆ 7 ಗಂಟೆಯಿಂದ ಭಾಸ್ಕರ್ ಕೊಗ್ಗ ಕಾಮತ್ ಮತ್ತು ತಂಡದವರು ಶ್ರೀ ಗಣೇಶ ಯಕ್ಷಗಾನ ಗೊಂಬೆಯಾಟ ಮಂಡಳಿ ಉಪ್ಪಿನ ಕುದ್ರು ಕುಂದಾಪುರ ಇವರಿಂದ ಚೂಡಾಮಣಿ ಲಂಕಾದಹನ ಪೌರಾಣಿಕ ಪ್ರಸಂಗ ಕಾರ್ಯಕ್ರಮ ನಡೆಯಲಿದೆ ಎಂದು ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.