ಸುದೀಶ್ ಸುವರ್ಣ ಕಳಸ
ಕಳಸ ಲೈವ್ ವರದಿ
ಕಳಸ ತಾಲೂಕಿನ ಕಾರಗದ್ದೆಯಲ್ಲಿ ಶಿಥಿಲಗೊಂಡಿರುವ ಕಟ್ಟಡದಲ್ಲೇ ಅಂಗನವಾಡಿ ನಡೆಯುತ್ತಿದ್ದು, ಪಾಲಕರು ಭಯದಿಂದ ಮಕ್ಕಳನ್ನು ಕಳುಹಿಸಲು ಹಿಂದೇಟು ಹಾಕುತ್ತಿದ್ದಾರೆ.
ಎಂಟು ವರ್ಷಗಳ ಹಿಂದೆ ಮುಚ್ಚಿಹೋಗಿದ್ದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಅಂಗನವಾಡಿ ಕೇಂದ್ರವನ್ನು ತೆರೆಯಲಾಗಿತ್ತು. ಅಗ ಸಾಕಷ್ಟು ಮಕ್ಕಳು ಬರುತ್ತಿದ್ದರು. ಬೇಸತ್ತ ಪಾಲಕರಿಂದಲೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಈ ಸಂದರ್ಭದಲ್ಲಿಯೇ ಹೊಸ ಅಂಗನವಾಡಿ ಕಟ್ಟಡ ನಿರ್ಮಿಸಬೇಕು. ಎನ್ನುವ ಬೇಡಿಕೆ ವ್ಯಕ್ತವಾಗಿತ್ತು.
40 ವರ್ಷಗಳಷ್ಟು ಹಳೆಯದಾದ ಕಟ್ಟಡದಲ್ಲಿಯೇ ಅಂಗನವಾಡಿ ಕೇಂದ್ರ ನಡೆಯುತ್ತಿತ್ತು. ಬಾರಿ ಮಳೆಗಾಲದಲ್ಲಿ ಕಟ್ಟಡದ ಒಂದು ಕೊಠಡಿ ಸಂಪೂರ್ಣ ಕುಸಿದಿದೆ. ವಿಪರ್ಯಾಸವೆಂದರೆ ಇನ್ನುಳಿದ ಅರ್ಧ ಭಾಗದಲ್ಲಿ ಏನೂ ಅರಿಯದ ಮಕ್ಕಳನ್ನು ಕೂರಿಸಲಾಗುತ್ತಿದೆ. ಕಟ್ಟಡ. ಸಂಪೂರ್ಣ ಶಿಥಿಲಗೊಂಡರೂ ಮಕ್ಕಳ ಜೀವದ ಜತೆ ಇಲಾಖೆ ಚೆಲ್ಲಾಟವಾಡುತ್ತಿದೆ. ಪ್ರಸ್ತುತ ಐದು ಮಕ್ಕಳು ಅಂಗನವಾಡಿಗೆ ಬರುತ್ತಿದ್ದಾರೆ. ಅಲ್ಲದೆ ಮಾತೃಪೂರ್ಣ ಯೋಜನೆ ಫಲಾನುಭವಿಗಳು ಸೌಲಭ್ಯ ಪಡೆಯಲು ಕೇಂದ್ರಕ್ಕೆ ಬರುತ್ತಾರೆ. ಕೊಠಡಿಯ ಮೇಲ್ಲಾವಣಿ ಸಂಪೂರ್ಣ ಹಾಳಾಗಿದ್ದು, ಆ ಗೋಡೆಗಳು ಬಿರುಕು ಬಿಟ್ಟಿವೆ.
ಅಂಗನವಾಡಿ ಸಮೀಪದಲ್ಲಿಯೇ 16 ಲಕ್ಷ ರೂ. ವೆಚ್ಚದಲ್ಲಿ ಹೊಸ ಅಂಗನವಾಡಿ ಕೇಂದ್ರ ನಿರ್ಮಿಸಲಾಗಿದೆ. ಇದನ್ನು ಮಕ್ಕಳ ಅನುಕೂಲಕ್ಕೆ ಬಿಟ್ಟುಕೊಡದೆ ಶಿಥಿಲಗೊಂಡಿರುವ ಕಟ್ಟಡದಲ್ಲೇ ಮಕ್ಕಳನ್ನು ಕೂರಿಸಿ ಇಲಾಖೆ ನಿರ್ಲಕ್ಷ್ಯ ತೋರಿದೆ. ಇದರಿಂದ ಪಾಲಕರು ಮಕ್ಕಳನ್ನು ಅಂಗನವಾಡಿಗೆ ಕಳಿಸಲು ಹಿಂದೇಟು ಹಾಕುತ್ತಿದ್ದಾರೆ. ಅಂಗನವಾಡಿಗೆ ಮಕ್ಕಳನ್ನು ಕಳಿಸುವುದಕ್ಕಿಂತ ಅವರ ಜೀವ ಮುಖ್ಯ ಎನ್ನುತ್ತಾರೆ ಪಾಲಕರು. ಶಿಥಿಲಗೊಂಡಿರುವ ಶಾಲಾ ಕಟ್ಟಡದಲ್ಲಿ ಅಂಗನವಾಡಿ ಕೇಂದ್ರ ನಡೆಸಲಾಗುತ್ತಿದೆ. ಅಂಗನವಾಡಿ ಕೇಂದ್ರವನ್ನು ಸ್ಥಳಾಂತರಿಸಿ ಕಟ್ಟಡ ತೆರವು ಮಾಡಿಕೊಡಿ ಎಂದು ಮನವಿ ಮಾಡಿದರೂ ಇಲಾಖೆ ಈ ಬಗ್ಗೆ ಗಮನಹರಿಸಿಲ್ಲ. ಪೀಠೋಪಕರಣ, ಹೆಂಚುಗಳನ್ನು ಕಳವು ಮಾಡಲಾಗುತ್ತಿದೆ. ಕಟ್ಟಡವನ್ನು ಗ್ರಾಮ ಪಂಚಾಯಿತಿ ಸುಪರ್ದಿಗೆ ವಹಿಸಿ ಪೀಠೋಪಕರಣಗಳನ್ನು ಬಳಕೆ ಮಾಡಿಕೊಳ್ಳಬಹುದು. ಈಗಾಗಲೇ ಬಿದ್ದಿರುವ ಕೊಠಡಿಯ ಮರಮಟ್ಟುಗಳು ಮಣ್ಣು ಪಾಲಾಗಿವೆ.
ಈ ಬಗ್ಗೆ ಸಿಡಿಪಿಒ ವೀರೇಶ್ ಅವರನ್ನು ಸಂಪರ್ಕಿಸಿದಾಗ
ಶಿಥಿಲಗೊಂಡಿರುವ ಕಟ್ಟಡದಲ್ಲಿ ಅಂಗನವಾಡಿ ನಡೆಸುತ್ತಿರುವುದು ಗಮನಕ್ಕಿದೆ, ಹೊಸ ಅಂಗನವಾಡಿ ಕಟ್ಟಡ ಸಿದ್ಧವಾಗಿದ್ದರೂ ಗುತ್ತಿಗೆದಾರರು ನಮಗೆ ಇನ್ನೂ ಬಿಟ್ಟುಕೊಟ್ಟಿಲ್ಲ. ಕೂಡಲೇ ಅಂಗನವಾಡಿಯನ್ನು ಹೊಸ ಕಟ್ಟಡಕ್ಕೆ ಸ್ಥಳಾಂತರ ಮಾಡಲು ಕ್ರಮ ತೆಗೆದುಕೊಳ್ಳುತ್ತೇನೆ ಎಂದು ತಿಳಿಸಿದ್ದಾರೆ.
ಕಾರಗದ್ದೆ ಶಾಲೆ ಮುಚ್ಚಿ ಹಲವು ವರ್ಷಗಳಾಗಿವೆ. ಮಳೆಗಾಲದಲ್ಲಿ ಒಂದು ಕೊಠಡಿ ಬಿದ್ದುಹೋಗಿದೆ. ಶಿಥಿಲಗೊಂಡ ಒಂದು ಕೊಠಡಿಯಲ್ಲಿ ಅಂಗನವಾಡಿ ನಡೆಸಲಾಗುತ್ತಿದೆ. ಪಕ್ಕದಲ್ಲಿಯೇ ಹೊಸ ಅಂಗನವಾಡಿ ಕಟ್ಟಡ ಆಗಿದ್ದರೂ ಉಪಯೋಗಕ್ಕೆ ನೀಡಲು ಇಲಾಖೆ ನಿರ್ಲಕ್ಷ್ಯ ತೋರುತ್ತಿದೆ, ಕೂಡಲೇ ಹೊಸ ಕಟ್ಟಡದಲ್ಲಿ ಅಂಗನವಾಡಿ ನಡೆಸಬೇಕು. ಅಲ್ಲದೆ ಶಿಥಿಲಗೊಂಡಿರುವ ಕಟ್ಟಡವನ್ನು ಕೂಡ ಇಲಾಖೆ ಪಂಚಾಯಿತಿ ಸುಪರ್ದಿಗೆ ನೀಡಬೇಕು ಎಂದು ಕಳಸ ಗ್ರಾಪಂ ಸದಸ್ಯ ಪಾಪಣ್ಣ ಒತ್ತಾಯಿಸಿದ್ದಾರೆ.