ಕಳಸ ಲೈವ್ ವರದಿ
ಕಳಸ ಸಾರ್ವಜನಿಕ ಶ್ರೀ ದುರ್ಗಾಪೂಜಾ ಸಮಿತಿ ವತಿಯಿಂದ ನಡೆಯುತ್ತಿರುವ ಶ್ರೀ ದುರ್ಗಾಪೂಜಾ ಮಹೋತ್ಸವದಲ್ಲಿ ಶನಿವಾರ ನಡೆದ ನಾಟ್ಯ ವಿನೋದ ಸೀಸನ್4 ಅತ್ಯಂತ ಯಶಸ್ವಿಯಾಗಿ ನೆರವೇರಿತು.
ಕಾರ್ಯಕ್ರಮದ ಉದ್ಘಾಟನೆಯನ್ನು ಕಲ್ಲುಭಾವಿ ಅಂಗನವಾಡಿ ಮಕ್ಕಳು ಉದ್ಘಾಟಿಸಿದ್ದು ವಿಶೇಷವಾಗಿತ್ತು. ನಾಟ್ಯ ವಿನೋದ ತಂಡವು ಮೂರು ವರ್ಷಗಳಿಂದ ಈ ಕಾರ್ಯಕ್ರಮವನ್ನು ನಡೆಸಿಕೊಂಡು ಬರುತ್ತಿದ್ದು, ಈ ನಾರಿ ನಾಲ್ಕನೇ ವರ್ಷದ ಕಾರ್ಯಕ್ರಮವನ್ನು ರಾಜ್ಯ ಮಟ್ಟದ ನೃತ್ಯ ಸ್ಪರ್ಧೆಯನ್ನು ನಡೆಸಿದರು. ರಾಜ್ಯದ ಮೂಲೆ ಮೂಲೆಗಳಿಂದ ಮೂರು ವಿಭಾಗಗಳಲ್ಲಿ ಒಟ್ಟು 47 ತಂಡಗಳು ಆಗಮಿಸಿದ್ದವು.
ಎಲ್ಲಾ ತಂಡಗಳಿಂದಲೂ ಅತ್ಯುತ್ತಮವಾದ ನೃತ್ಯಗಳು ಮೂಡಿ ಬಂದಿದ್ದು, ನೆರೆದಿದ್ದ ಸಾವಿರಕ್ಕೂ ಹೆಚ್ಚು ಜನರ ಕಣ್ಮನ ಸೆಳೆಯಿತು. ಬೃಹತ್ ಎಲ್ಇಡಿ ಪರದೆಯನ್ನು ಹಾಕಿ ಕಾರ್ಯಕ್ರಮವನ್ನು ವೀಕ್ಷಿಸಲು ಅನುಕೂಲ ಮಾಡಿಕೊಡಲಾಗಿತ್ತು. ಅದ್ದೂರಿಯ ಮತ್ತು ಅತ್ಯಂತ ಶಿಸ್ತು ಬದ್ಧ ಯಶಸ್ವಿ ಕಾರ್ಯಕ್ರಮವನ್ನು ಮಾಡಿದ ನಾಟ್ಯ ವಿನೋದ ತಂಡವನ್ನು ಸಾರ್ವಜನಿಕರು ಪ್ರಶಂಸಿಸಿದರು.
ಅಂತಿಮವಾಗಿ ವಿಜೇತರಿಗೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸುಜಯ ಸದಾನಂದ, ದುರ್ಗಾ ಸಮಿತಿ ಕಾರ್ಯದರ್ಶಿ ನಿರ್ಮಲ್ ಕುಮಾರ್, ಉಪಾಧ್ಯಕ್ಷ ರಾಮಚಂದ್ರ ಹೆಬ್ಬಾರ್ ಬಹುಮಾನ ವಿತರಿಸಿದರು.
ಕಾರ್ಯಕ್ರಮದ ಆಯೋಜಕರಾದ ನಾಟ್ಯ ವಿನೋದ ತಂಡದ ದೀಪಕ್ ಗೌಡ, ಸಂತೋಷ್ ಜೈನ್, ರಾಜೇಶ್ ಗೌಡ, ಪ್ರಕಾಶ್, ಉಮೇಶ್, ಲವ, ಕುಶ, ಶಶಿಕಾಂತ್, ಪುನಿತ್, ಚೇತನ್, ರವಿ, ಮಾರುತೇಶ್ ಇದ್ದರು.