ಕಳಸ ಲೈವ್ ವರದಿ
ದಸರಾ ಮಹೋತ್ಸವದಲ್ಲಿ ಮನೆ ಮನೆಯಲ್ಲೂ ಹಬ್ಬದ ಸಡಗರ ಸಂಭ್ರಮ. ನವರಾತ್ರಿಯ ಅಷ್ಟೂ ದಿನ ಕಳಸದ ಸಾಯಿ ಮಂದಿರದಲ್ಲಿ ಗೊಂಬೆ ಕೂರಿಸಿ ಅದರ ಸಂಖ್ಯೆ ಹೆಚ್ಚಿಸುವುದರ ಜತೆಗೆ ವಿಶಿಷ್ಟ ಸಂಪ್ರದಾಯವನ್ನು ಇಲ್ಲಿ ಮುಂದುವರೆಸಲಾಗುತ್ತಿದೆ.
ನವರಾತ್ರಿಯ ನಾನಾ ಧಾರ್ಮಿಕ ಆಚರಣೆಗಳಲ್ಲಿ ಒಂದಾಗಿರುವ ಗೊಂಬೆ ಹಬ್ಬದ ಆಚರಣೆಯಲ್ಲಿ ಕಳೆದ 15 ವರ್ಷಗಳಿಂದ ಅನ್ನಪೂರ್ಣೇಶ್ವರಿ ಬಸ್ಸು ಮಾಲಿಕರಾದ ಕೆ.ಕೆ.ಬಾಲಕೃಷ್ಣ ಭಟ್ ಅವರ ಪತ್ನಿ ಸುಜಾತ ಬಾಲಕೃಷ್ಣ ಮತ್ತು ಅವರ ಪುತ್ರಿ ಭಾವನ, ಪುತ್ರ ಭುವನ್ ಅವರು ಗೊಂಬೆಗಳನ್ನು ಇಟ್ಟು ಪ್ರದರ್ಶಿಸಿ ಪೂಜಿಸುತ್ತಾರೆ.
ಅಜ್ಜ ಅಜ್ಜಿ ಗೊಂಬೆ, ಹೆಣ್ಣು ಗೊಂಬೆ, ಗಂಡು ಗೊಂಬೆ, ಅಪ್ಪ, ಅಮ್ಮ, ಮಕ್ಕಳು, ಪ್ರಾಣಿಗಳು, ರೈತರ ಬದುಕು, ವಿವಿಧ ಬಂಗಿಯ ದೇವತೆಗಳು,ರಾಜ ರಾಣಿ, ಕೃಷ್ಣನ ರಾಸಲೀಲೆ, ಜಾತ್ರೆ, ದೇವಸ್ಥಾನ, ರಥೋತ್ಸವ, ಆನೆಗಳು ಈಗೆ ಜಗತ್ತಿನ ಹಾಗೂ ಹೋಗುಗಳ ಬಗ್ಗೆ ಮೂರು ಸಾವಿರಕ್ಕೂ ಹೆಚ್ಚು ಗೊಂಬೆಗಳಿಗೆ ಇಲ್ಲಿ ಜೀವ ತುಂಬಲಾಗಿದೆ.
ಕೆಲವೊಂದು ದೇವತೆ ಗೊಂಬೆಗಳನ್ನು ಪೂಜಿಸಲಾಗುತ್ತಿದೆ. ಇನ್ನು ಕೆಲ ಗಂಡ ಹೆಂಡತಿ, ಮಕ್ಕಳು ಗೊಂಬೆಗಳನ್ನು ವಿಶೇಷವಾದ ಬಟ್ಟೆಗಳನ್ನು ತೊಡಿಸಿ ಅಲಂಕರಿಸಲಾಗಿದೆ.
ಪ್ರತೀ ವರ್ಷ ಈ ಗೊಂಬೆಗಳ ಪ್ರದರ್ಶನವನ್ನು ನೋಡಲೆಂದು ಮಕ್ಕಳು ಸೇರಿದಂತೆ ಊರಿನ ನೂರಾರು ಜನರು ಬಂದು ವೀಕ್ಷಿಸಿ ಹೋಗುತ್ತಾರೆ.ಈ ಬಾರಿಯು ಇಲ್ಲಿ ಪ್ರದರ್ಶನಕ್ಕೆ ಇಟ್ಟಿರುವ ಗೊಂಬೆಗಳನ್ನು ಸಾರ್ವಜನಿಕರು ಬಂದು ಕಣ್ತುಬಿಸಿಕೊಂಡು ಹೋಗಬಹುದು. ಪ್ರತೀ ವರ್ಷ ಗೊಂಬೆಗಳ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ದೂರದ ಪ್ರಯಾಣ, ಪ್ರವಾಸಕ್ಕೆ ಹೋದಾಗ ರಾಜ್ಯ ಹೊರ ರಾಜ್ಯಗಳಿಂದ ಈ ಗೊಂಬೆಗಳನ್ನು ಖರೀದಿಸಿ ಸಂಗ್ರಹಿಸಲಾಗುತ್ತಿದೆ ಎಂದು ಕೆ.ಕೆ.ಬಾಲಕೃಷ್ಣ ಭಟ್ ಹೇಳುತ್ತಾರೆ.