ಶಿವಮೊಗ್ಗ :ಕುವೆಂಪು ವಿಶ್ವವಿದ್ಯಾನಿಲಯ ವ್ಯಾಪ್ತಿಯ ಎಲ್ಲಾ ಪದವಿ ಕಾಲೇಜುಗಳಲ್ಲಿ ಪ್ರಥಮ ವರ್ಷದ ಪದವಿ ಪ್ರವೇಶಾತಿಗೆ ಸೆಪ್ಟಂಬರ್ 30 ರವರೆಗೆ ಅವಕಾಶ ಕಲ್ಪಿಸಿ ವಿಶ್ವವಿದ್ಯಾನಿಲಯ ಆದೇಶ ಹೊರಡಿಸಿದೆ.
ಪದವಿ ಪ್ರವೇಶಾತಿಗೆ ಸೆಪ್ಟಂಬರ್ 15 ಕೊನೆಯ ದಿನವಾಗಿತ್ತು ಹಾಗೂ ಪಿ.ಯು.ಸಿ ಪೂರಕ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದ ವಿದ್ಯಾರ್ಥಿಗಳಿಗೆ ಸೆಪ್ಟಂಬರ್ 19 ರವರೆಗೂ ದಂಡ ಶುಲ್ಕವಿಲ್ಲದೆ ಪ್ರವೇಶಾತಿಗೆ ಅವಕಾಶ ಕಲ್ಪಿಸಲಾಗಿತ್ತು. ಅದಾಗ್ಯೂ, ಕಾರಣಾಂತರಗಳಿಂದ ಈವರೆಗೂ ಪ್ರವೇಶಾತಿಯನ್ನು ಪಡೆಯದ ವಿದ್ಯಾರ್ಥಿಗಳಿಂದ, ಪೋಷಕರಿಂದ ಹಾಗೂ ಕಾಲೇಜುಗಳಿಂದ ಪ್ರವೇಶಾತಿ ದಿನಾಂಕವನ್ನು ವಿಸ್ತರಿಸುವಂತೆ ಬಂದತಂಹ ಕೋರಿಕೆಯನ್ನು ಪರಿಗಣಿಸಿ ವಿಶ್ವವಿದ್ಯಾನಿಲಯವು ರೂ. 1000 ದಂಡ ಶುಲ್ಕದೊಂದಿಗೆ ಸೆಪ್ಟಂಬರ್ 30 ರವರೆಗೂ ಪ್ರವೇಶಾತಿ ಕೊನೆಯ ದಿನಾಂಕವನ್ನು ವಿಸ್ತರಿಸಿದೆ.
ಪದವಿ ಶಿಕ್ಷಣದಲ್ಲಿ ನೂತನ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಕಳೆದ ಶೈಕ್ಷಣಿಕ ಸಾಲಿನಿಂದ ಜಾರಿಗೆ ತರಲಾಗಿದ್ದು, ಪಠ್ಯಕ್ರಮವು ಹೆಚ್ಚು ಉದ್ಯೋಗಾದಾರಿತವಾಗಿದೆ. ಮೂರು ವರ್ಷದ ಪದವಿ ಪಠ್ಯಕ್ರಮದಲ್ಲಿ ವಿದ್ಯಾರ್ಥಿಗಳು ತಾವು ಆಯ್ಕೆ ಮಾಡಿಕೊಂಡ ಕೋರ್ಸಿನ ವಿಷಯಗಳೊಂದಿಗೆ ಮೊದಲ ವರ್ಷದಲ್ಲಿ ಡಿಜಿಟಲ್ ಫ್ಲೂಯೆನ್ಸಿ, ಪರಿಸರ ಅಧ್ಯಯನ, ಯೋಗ, ಎರಡನೇ ವರ್ಷದಲ್ಲಿ ಭಾರತ ಸಂವಿಧಾನ, ಆರ್ಟಿಫಿಷಿಯಲ್ ಇಂಟೆಲಿಜೆನ್ಸ್, ಕ್ರೀಡೆ, ಮೂರನೇ ವರ್ಷದಲ್ಲಿ ಸೈಬರ್ ಭದ್ರತೆ, ಉದ್ಯೋಗಾದಾರಿತ ತರಭೇತಿಯನ್ನು ಪಡೆಯಲಿದ್ದಾರೆ.
ಸೆಪ್ಟಂಬರ್ 1 ರಿಂದ ಪ್ರಥಮ ಪದವಿ ತರಗತಿಗಳು ಪ್ರಾರಂಭವಾಗಿದ್ದು, ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಕುವೆಂಪು ವಿಶ್ವವಿದ್ಯಾಲಯ ಕೈಗೊಂಡ ಈ ನಿರ್ಧಾರ ಪ್ರವೇಶಾತಿಯನ್ನು ಈವರೆಗೂ ಪಡೆಯಲು ಸಾಧ್ಯವಾಗದ ಹಲವು ವಿದ್ಯಾರ್ಥಿಗಳಿಗೆ ಅನುಕೂಲವಾಗಿದೆ.