ಕಳಸ ಲೈವ್ ವರದಿ
ಕಳಸ ತಾಲ್ಲೂಕಿನಲ್ಲಿ ಕಳೆದ ಹದಿನೈದು ದಿನಗಳಿಂದ ಕಳಸದ ಕೆಲ ಗ್ರಾಮಗಳಲ್ಲಿ ಸಂಚಾರ ಮಾಡಿ ಸಾಕಷ್ಟು ಕೃಷಿಯನ್ನು ಹಾನಿ ಮಾಡಿ ಕೃಷಿಕರನ್ನು ಹೈರಾಣ ಮಾಡಿದ ಎರಡು ಕಾಡಾನೆಗಳು ಈಗ ಈಚಲಹೊಳೆಯಲ್ಲಿ ವಾಸ್ತವ್ಯ ಹೂಡಿವೆ.
ಕಳೆದ ಎರಡು ದಿನಗಳ ಹಿಂದೆ ಎಸ್.ಕೆ.ಮೇಗಲ್ ಬಾಗದಲ್ಲಿ ಎರಡು ದಿನಗಳ ಕಾಲ ವಾಸ್ತವ್ಯ ಹೂಡಿ ಅಲ್ಲಿ ಸಾಕಷ್ಟು ಕೃಷಿ ಭೂಮಿಯನ್ನು ದ್ವಂಸಗೊಳಿಸಿ ಈಗ ಈಚಲು ಹೊಳೆ ತಲುಪಿವೆ.
ಇಲ್ಲಿಯ ಚಂದ್ರು ಅವರ ತೋಟಕ್ಕೆ ನುಗ್ಗಿದ ಕಾಡಾನೆಗಳು ಬೆಳೆದ ಬಾಳೆ, ಅಡಕೆ ಗಿಡಗಳನ್ನು ನಾಶ ಮಾಡಿದೆ. ಈ ಬಾರಿಯ ಮಳೆಯಿಂದಾಗಿ ಕಾಫಿ, ಅಡಕೆಯನ್ನು ಕಳೆದುಕೊಂಡಿದ್ದೇವೆ.ಈಗ ಕಾಡಾನೆಗಳ ಹಾವಳಿಯಿಂದ ಉಳಿದ ಬೆಳೆಯನ್ನು ಕಳೆದುಕೊಂಡಿದ್ದೇವೆ. ಕಾಡಾನೆಗಳ ಉಪಟಳದಿಂದ ಊರಲ್ಲಿ ತಿರುಗಾಡಲು ಸಾಧ್ಯವಾಗುತ್ತಿಲ್ಲ ಅರಣ್ಯ ಇಲಾಖೆಯೂ ಯಾವುದೇ ರೀತಿಯಲ್ಲೂ ಸ್ಪಂದಿಸುತ್ತಿಲ್ಲ ಎಂದು ಇಲ್ಲಿಯ ಗ್ರಾಮಸ್ಥರು ಹೇಳುತ್ತಾರೆ.
ಹಗಲು ಕಾಡು ಸೇರುವ ಆನೆಗಳು ರಾತ್ರಿಯಾಗುತ್ತಿದ್ದಂತೆ ಊರಿಗೆ ಬಂದು ತೋಟಕ್ಕೆ ಲಗ್ಗೆ ಇಡುತ್ತಿರುವುದರಿಂದ ಇಲ್ಲಿಯ ಗ್ರಾಮಸ್ಥರು ಕಂಗಾಲಾಗಿದ್ದಾರೆ.