ಕಳಸದ ದುರ್ಗಾ ಮಂಟಪದಲ್ಲಿ ಭಾನುವಾರ ಕಳಸ ಸಂಜೀವಿನಿ ಗ್ರಾಮ ಪಂಚಾಯಿತಿ ಒಕ್ಕೂಟ ಮತ್ತು ಗ್ರಾಮ ಪಂಚಾಯಿತಿ ಕಳಸ ವತಿಯಿಂದ ಸಂಜೀವಿನಿ ಮಾಸಿಕ ಸಂತೆ, ಪ್ರದರ್ಶನ ಮತ್ತು ಮಾರಾಟ ವನ್ನು ಹಮ್ಮಿಕೊಳ್ಳಲಾಗಿತ್ತು.
ಈ ಸಂತೆಯಲ್ಲಿ ಒಕ್ಕೂಟದ ಸಂಘಗಳು ತಮ್ಮಲ್ಲಿ ಬೆಳೆದ ತರಕಾರಿ, ಹಣ್ಣುಗಳು, ಗುಡಿ ಕೈಗಾರಿಕೆಯಿಂದ ಮಾಡಿದ ಬ್ಯಾಗ್, ಬಟ್ಟೆಗಳ ವ್ಯಾಪಾರ ಮತ್ತು ಪ್ರದರ್ಶನ ಮಾಡಿದರು.ಸಂತೆಯಲ್ಲಿ ಗ್ರಾಮಾಂತರ ಪ್ರದೇಶದಲ್ಲಿ ಸಿಗುವಂತ ಒಂದೆಲಗ ಸೊಪ್ಪು, ನುಗ್ಗೆ ಸೊಪ್ಪು, ಕೆಸುವಿನ ಗೆಡ್ಡೆ, ಕೆಸು ದಂಟು ಎಲೆ, ಅಮ್ಟೆ ಕಾಯಿ, ಬಾಳೆ ದಿಂಡು, ಬಾಳೆ ಹೂ, ಮನೆಯಲ್ಲಿ ತಯಾರಿಸಿದ ಚಿಪ್ಸ್, ಹಪ್ಪಳ, ಸಂಡಿಗೆ, ಚಕ್ಕುಲಿ, ಒಬ್ಬಟ್ಟು ಮುಂತಾದ ತಿಂಡಿ ತಿನಸುಗಳು ಗ್ರಾಹಕರ ಗಮನ ಸೆಳೆದವು.ಬಲು ಅಪರೂಪಕ್ಕೆ ಸಿಗುವ ತರಕಾರಿಗಳು ಕ್ಷಣ ಮಾತ್ರದಲ್ಲಿ ಖಾಲಿಯಾದವು.
ಬಲು ಅಪರೂಪಕ್ಕೆ ನಡೆದ ಈ ಸಂತೆ ಮೇಳದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಹಕರು ಬಂದು ವ್ಯಾಪಾರ ವಹಿವಾಟು ಮಾಡಿದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸುಜಯ ಸದಾನಂದ, ಕಾರ್ಯಕ್ರಮದ ವ್ಯವಸ್ಥಾಪಕಿ ಶಾಲಿನಿ, ಪಿಡಿಒ ಕವೀಶ್, ವಲಯ ಮೇಲ್ವಿಚಾರಕ ರಕ್ಷಿತ್, ಒಕ್ಕೂಟದ ಅಧ್ಯಕ್ಷೆ ಸೌಮ್ಯ ಇದ್ದರು.