ಕಲಶೇಶ್ವರ ದೇವಾಲಯ ಜೀರ್ಣೋದ್ಧಾರ ಶಾಸನ
ಬರಹ :ಡಾ. ಸುಪ್ರೀತ ಕೆ. ಎನ್ ಕಳಸ
ಯಾವುದೇ ಸ್ಥಳವಾದರು ತನ್ನ ಒಡಲಿನಲ್ಲಿ ಇತಿಹಾಸವನ್ನು ಅಡಗಿಸಿಕೊಂಡಿರುತ್ತದೆ. ಅದನ್ನು ಎಷ್ಟೇ ಮರೆ ಮಾಚಿದರು ಒಂದಲ್ಲ ಒಂದು ದಿನ ಹೊರಬರುತ್ತದೆ. ಇತಿಹಾಸದ ಕುರುಹುಗಳಲ್ಲಿ ಶಾಸನದ ಪಾತ್ರ ಅಪಾರ. ಇದಕ್ಕೆ ಹೊರತಾಗಿ ಕಳಸವೇನು ಕಡಿಮೆ ಇಲ್ಲ, ಹೆಸರಲ್ಲೇ ಸಂಮೃದ್ಧಿ ಹೊಂದಿರುವ ಸ್ಥಳದ ಇತಿಹಾಸ ತಿಳಿಯಲು ಶಾಸನಗಳ ಕೊರತೆಯೇನು ಇಲ್ಲ. ಕಳಸ ಮತ್ತು ಇಲ್ಲಿನ ಸುತ್ತ ಮುತ್ತಲಿನ ಪ್ರದೇಶಗಳಲ್ಲಿ ಸುಮಾರು 80ಕ್ಕೂ ಹೆಚ್ಚು ಶಾಸನಗಳು ದೊರೆಯುತ್ತವೆ. ಕಲಶೇಶ್ವರ ದೇವಾಲಯದ ಆವರಣದಲ್ಲಿ ಅನಾಥವಾಗಿ ಬಿದ್ದಿರುವ ಶಾಸನಗಳು ಅಷ್ಟೇ. ಇವು ದೇವಾಲಯ ಮತ್ತು ಕಳಸದ ಕುರಿತು ಸಾಕಷ್ಟು ಮಾಹಿತಿ ನೀಡುತ್ತವೆ.
ಕಳಸೇಶ್ವರ ದೇವಾಲಯದಲ್ಲಿರುವ ಕೆಲವು ಶಿಲ್ಪಗಳು ಮತ್ತು ವಾಸ್ತು ಶಿಲ್ಪವನ್ನು ನೋಡುವುದಾದರೆ 11-12ನೇ ಶತಮಾನದ ಲಕ್ಷಣಕ್ಕೆ ಹೋಲಿಕೆಯಾದರು, ದೇವಾಲಯದ ಸಂಪೂರ್ಣ ವಾಸ್ತು ಶೈಲಿ ವಿಜಯನಗರ ಕಾಲದ್ದಾಗಿದೆ. ಎಲ್ಲರಲ್ಲೂ ಏಳುವ ಪ್ರಶ್ನೆ ಹಳೆಯ ದೇವಾಲಯವಾದರೂ 15ನೇ ಶತಮಾನದ ದೇವಾಲಯ ಶೈಲಿ ಹೇಗೆ? ಎಂಬುದು. ಸ್ಥಳೀಯರಿಗೆ, ಹಿರಿಯರಿಗೆ ತಿಳಿದಿರಬಹುದು, ಇದರ ಕುರಿತು ತಿಳಿಯದೆ ಇರುವ ಕುತೂಹಲ ಹೊಂದಿರುವವರಿಗೆ ತಿಳಿಸುವ ಪ್ರಯತ್ನ ಈ ಲೇಖನದಾಗಿದೆ.
ಕಳಸದ ಮುಖ್ಯ ಆರಾಧ್ಯ ದೇವಾಲಯ ಕಲಶೇಶ್ವರÀ. ಕಳಸವನ್ನು ಪ್ರವೇಶಿಸುತ್ತಿದ್ದಂತೆ ಕಾಣುವ ಈ ಶೈವ ದೇವಾಲಯ ಪೂರ್ವಕ್ಕಿದ್ದು, ‘ಕಳಸ ಸಾವಿರ ಸೀಮೆ’ ಎಂದು ಕರೆಯುವ ಈ ದೇವಾಲಯವನ್ನು ಕಟ್ಟಿಸಿದವನು “ಶ್ರುತಬಿಂದು” ಎಂಬ ಐತಿಹ್ಯವಿದೆ. ಪ್ರಾಂತ್ಯಾಡಳಿತ ಮಂತ್ರಿಯಾದ ಇವನು ಯಮುನಾ ತೀರದಲ್ಲಿದ್ದ ಸುರಸ ಎಂಬ ಪಟ್ಟಣದಲ್ಲಿ ಆಳುತ್ತಿದ್ದ. ಇವನು ಪರಿವಾರ ಸಮೇತನಾಗಿ ವನ್ಯ ಮೃಗಗಳ ಬೇಟೆಗಾಗಿ ಹೊರಟು ಹಲವಾರು ಮೃಗಗಳನ್ನು ಬೇಟೆಯಾಡಿದ. ಅದರ ಪಾಪ ಕಳೆಯಲು ಕಳಸದಲ್ಲಿ ಈಶ್ವರ ಗುಡಿಯನ್ನು ಸ್ಥಾಪಿಸಿದ ಎಂಬ ಐತಿಹ್ಯವಿದೆ.
ದೇವಾಲಯದ ಕೈಪಿಡಿ ಪ್ರಕಾರ ಶಿಥಿಲವಾಗಿದ್ದ ಮೂಲ ಗುಡಿಯನ್ನು ಸು. 1800 ವರ್ಷಗಳ ಹಿಂದೆ ಸೌರಾಷ್ಟ್ರದ ‘ಶೃತಬಿಂದು’ ಮಹಾರಾಜ ಪುನಃ ಪ್ರತಿಷ್ಠಾಪನೆ ಮಾಡಿದ ಎಂಬುದಾಗಿ ಹೇಳಲಾಗಿದೆ. ಆದರೆ ಇಲ್ಲಿದೊರೆತಿರುವ ಶಾಸನಗಳ ಆಧಾರದ ಮೇಲೆ ದೇವಾಲಯಕ್ಕೆ ಕ್ರಿ. ಶ. 1246ರಿಂದ 18ನೆಯ ಶತಮಾನದವರೆಗೆ ದಾನ ನೀಡಿದ ಉಲ್ಲೇಖಗಳಿವೆ. ಇಲ್ಲಿ ಇಂತಹ ಸುಮಾರು 57 ಶಾಸನಗಳು ದೊರೆಯುತ್ತವೆ. ಕಳಸ-ಕಾರ್ಕಳ ಪ್ರಭುಗಳ ಆಡಳಿತದಲ್ಲಿದ್ದ ಈ ಪ್ರಾಂತ್ಯದಲ್ಲಿ ಕ್ರಿ.ಶ. 1246ರಲ್ಲಿ ರಾಣಿ ಜಾಕಲ ಮಹಾದೇವಿಯು ಕಳಸದ ಕಲಶೇಶ್ವರನಿಗೆ ಪೂಜಾ ಕಾರ್ಯಕ್ಕೆ ಭೂಮಿಯನ್ನು ದಾನ ನೀಡಿದಳು. ಆದ್ದರಿಂದ ಈ ದೇವಾಲಯವನ್ನು ಕ್ರಿ.ಶ 1246ಕ್ಕಿಂತ ಹಿಂದೆಯೇ ನಿರ್ಮಾಣ ಮಾಡಿರುವುದು ಈ ಶಾಸನದಿಂದ ತಿಳಿಯುತ್ತದೆ. ಹಾಗೂ ದೇವಾಲಯವನ್ನು ಉಲ್ಲೇಖಿಸುವ ಮೊದಲ ಶಾಸನವಾಗಿದೆ.
ಮುಖ್ಯವಾಗಿ ಕ್ರಿ.ಶ. 1516ರ ಶಾಸನ, ಕಳಸದ ಕಳಸನಾಥ ದೇವಾಲಯ ಜೀರ್ಣೋದ್ಧಾರಕಾರ್ಯ ಮತ್ತು ಆ ಸಂದರ್ಭದಲ್ಲಿ ದೇವಾಲಯಕ್ಕೆ ನೀಡಲಾದ ದಾನದ ವಿವರಗಳನ್ನು ತಿಳಿಸುವುದು ಈ ಶಾಸನದ ಮೂಲ ಉದ್ದೇಶವಾಗಿದ್ದರೂ, ಕಳಸ ಮತ್ತು ಕಾರ್ಕಳ ರಾಜ ಮನೆತನದ ಇತಿಹಾಸ ದೃಷ್ಟಿಯಿಂದ ಇದೊಂದು ಮಹತ್ವದ ದಾಖಲೆಯಾಗಿದೆ. ವಿಜಯನಗರ ಅರಸ ಕೃಷ್ಣದೇವರಾಯನನ್ನು ಉಲ್ಲೇಖಿಸುವ ಈ ಶಾಸನದಲ್ಲಿ,ಇಮ್ಮಡಿ ಭೈರರಸ ಒಡೆಯನನ್ನು ವೀರ ಹಿರಿಯ ಭೈರರಸ ಒಡೆಯರ ಅಳಿಯ ಹಾಗೂ ಬೊಂಮಲ ದೇವಿಯರಕುಮಾರ ಎಂದು ವರ್ಣಿಸಲಾಗಿದೆ. ಈ ರಾಜ ಮನೆತನದವರು ಅಳಿಯ ಸಂತಾನ ಸಂಪ್ರದಾಯವನ್ನು ಅನುಸರಿಸುತ್ತಿದ್ದರು ಎಂಬುದು ಇಲ್ಲಿ ಉಲ್ಲೇಖಾರ್ಹ. ಈ ರಾಜ ಮನೆತನದಲ್ಲಿ ಇವನು ನಾಲ್ಕನೆಯ ಭೈರರಸನಾಗಿದ್ದರೂ, ಇವನನ್ನು ಇಮ್ಮಡಿ ಭೈರರಸ ಎಂದು ಶಾಸನಗಳಲ್ಲಿ ಉಲ್ಲೇಖಿಸಿದ್ದಾರೆ. ಕಳಸದ ಇನ್ನೆರಡು ಶಾಸನಗಳಲ್ಲಿಯು ಈತನನ್ನು ಇಮ್ಮಡಿ ಭೈರರಸ ಎಂದೇ ಕರೆಯಲಾಗಿದೆ.
ಇಮ್ಮಡಿ ಭೈರರಸ ಒಡೆಯನು ಕಳಸನಾಥ ದೇವಾಲಯವನ್ನು ಜೀರ್ಣೋದ್ಧಾರ ಮಾಡಿದ ಹಿನ್ನೆಲೆಯನ್ನು ಈ ಶಾಸನದಲ್ಲಿ ವಿವರಿಸಲಾಗಿದೆ. ಇದರಂತೆ ವಿಜಯನಗರದ ಅರಸ ಕೃಷ್ಣದೇವರಾಯನು ತುಳುನಾಡಿನ ಮೇಲೆ ದಾಳಿ ಮಾಡಿದಾಗ ಭೈರರಸ ಒಡೆಯನು ತನ್ನ ರಾಜ್ಯವನ್ನು ಕಳೆದುಕೊಳ್ಳಬೇಕಾಯಿತು. ನಂತರ ತನ್ನ ಸೇನೆಯೊಂದಿಗೆ ಮುನ್ನಡೆದ ಕೃಷ್ಣದೇವರಾಯನು ಮಂಗಳೂರಿಗೆ ತೆರಳಿ ಅಲ್ಲಿನ ಭುವನ ಶಾಲೆಯಲ್ಲಿ ಬೀಡುಬಿಟ್ಟ. (ಭುವನ ಶಾಲೆ ಎಂಬುದು ಪ್ರಾಯಶಃ ಒಂದು ಅರಮನೆಯಾಗಿದ್ದಿರಬೇಕು) ಮಧ್ಯಯುಗೀನ ಅಳುಪರ ಆಳ್ವಿಕೆಯ ಕಾಲದಲ್ಲಿ ಮಂಗಳೂರಿನಲ್ಲಿ ಭುವನಾಶ್ರಯ ಎಂಬ ಅರಮನೆ ಇತ್ತೆಂಬ ಶಾಸನ ಉಲ್ಲೇಖನಗಳನ್ನು ಇಲ್ಲಿ ನೆನಪಿಸಿಕೊಳ್ಳಬಹುದು. ಈ ಸಂದರ್ಭ ಕೃಷ್ಣದೇವರಾಯನ ಸೈನ್ಯವು ಹಿಂದಿರುಗಿ ತನಗೆ ತನ್ನ ರಾಜ್ಯವು ಪುನಃ ಪ್ರಾಪ್ತಿಯಾದರೆ ತಾನು ಕಳಸನಾಥ ದೇವಾಲಯದ ಜೀರ್ಣೋದ್ಧಾರÀವನ್ನು ಮಾಡುತ್ತೇನೆಂದು ಇಮ್ಮಡಿ ಭೈರರಸ ಹರಕೆಯನ್ನು ಹೊತ್ತುಕೊಳ್ಳುತ್ತಾನೆ. ಇದಕ್ಕೆ ಸರಿಯಾಗಿ ಕೃಷ್ಣದೇವರಾಯನ ಸೈನ್ಯ ಹಿಂದಿರುಗುತ್ತದೆ. ಇಮ್ಮಡಿ ಭೈರರಸನು ಕಳೆದುಕೊಂಡ ರಾಜ್ಯವನ್ನು ಪುನಃ ಪಡೆದುಕೊಳ್ಳುತ್ತಾನೆ. ಈ ಹಿನ್ನೆಲೆಯಲಿ ್ಲತಾನು ಹರಕೆ ಹೊತ್ತಂತೆ ಕಳಸನಾಥ ದೇವಾಲಯದ ಜೀರ್ಣೋದ್ಧಾರವನ್ನು ಮಾಡಿಸುತ್ತಾನೆ. ಕೃಷ್ಣದೇವರಾಯನ ತುಳುನಾಡಿನ ದಾಳಿಯ ಕಾರಣಗಳು ಸ್ಪಷ್ಟವಾಗಿ ತಿಳಿದು ಬರುವುದಿಲ್ಲ. ಪ್ರಾಯಶಃ ಇಮ್ಮಡಿ ಭೈರರಸನು ವಿಜಯನಗರದ ಅಧಿಕಾರವನ್ನು ಧಿಕ್ಕರಿಸುವ ಪ್ರಯತ್ನವನ್ನು ಮಾಡಿರಬೇಕು ಈ ಹಿನ್ನೆಲೆಯಲ್ಲಿ ಕೃಷ್ಣದೇವರಾಯನ ದಾಳಿ ನಡೆದಿದ್ದು, ತುಳುನಾಡಿನಿಂದ ಹಿಂದಿರುಗುವ ಮುನ್ನ ಕೃಷ್ಣದೇವರಾಯನು ಉದಾರ ಮನಸ್ಸಿನಿಂದ ತಾನೇ ಇಮ್ಮಡಿ ಭೈರರಸ ಒಡೆಯನಿಗೆ ಕಳಸ-ಕಾರ್ಕಳ ರಾಜ್ಯz Àಅಧಿಕಾರವನ್ನು ಪುನಃ ಒಪ್ಪಿಸಿದನು.
ಕೃಷ್ಣದೇವರಾಯ ತುಳುನಾಡಿನ ಮೇಲೆ ದಾಳಿ ಮಾಡಿದ ಘಟನೆಗೆ ಪೂರಕವಾದ ವಿಷಯಗಳು ತುಳುನಾಡಿನ ವಿಶಿಷ್ಟ ಮೌಖಿಕ ಪರಂಪರೆಯಾದ ತುಳು ಪಾಡ್ದನಗಳಲ್ಲಿಯೂ ವರ್ಣಿತವಾಗಿರುವುದು ಕುತೂಹಲಕರ. ಪಂಜುರ್ಲಿ ಭೂತಕ್ಕೆ ಸಂಬಂಧಿಸಿದ ಪಂಜುರ್ಲಿ ಪಾಡ್ದನದಲ್ಲಿ ಘಟ್ಟದ ಮೇಲಿನ ಅರಸನೊಬ್ಬ ಕಾರ್ಕಳದ ಭೈರರಸನ ರಾಜ್ಯದ ಮೇಲೆ ದಾಳಿ ಮಾಡಿದ ವಿವರಗಳಿವೆ. ಕಾರ್ಕಳದ ಭೈರರಸನು ಘಟ್ಟದ ಮೇಲಿನ ಕನ್ನಡದ ಅರಸನಿಗೆ ಕಾಲ-ಕಾಲಕ್ಕೆ ಸಂದಾಯ ಮಾಡಬೇಕಾದ ಕಪ್ಪಕಾಣಿಕೆಗಳನ್ನು ಬಹುಕಾಲ ಉಳಿಸಿಕೊಂಡು ಬಂದಿರುತ್ತಾನೆ. ಇದರಿಂದ ವಿಚಲಿತನಾದ ಘಟ್ಟದ ಮೇಲಿನ ಅರಸ ಕಪ್ಪಕಾಣಿಕೆಯನ್ನು ಕೂಡಲೇ ಪಾವತಿಸುವಂತೆ ಆದೇಶಿಸಿ, ತನ್ನ ಊಳಿಗದವನ ಮೂಲಕ ಭೈರರಸ ಒಡೆಯನಿಗೆ ‘ತಾಳೆಗರಿ’ ಪತ್ರವನ್ನು ಕಳುಹಿಸುತ್ತಾನೆ. ಆದರೆ ಈ ಪತ್ರವನ್ನು ನಿರ್ಲಕ್ಷಿಸಿದ ಭೈರರಸನು ಉಳಿಗದವರನ್ನು ಅಪಮಾನಿಸಿ ಹಿಂದಕ್ಕಟ್ಟುತ್ತಾನೆ. ಇದರಿಂದ ಸಿಟ್ಟಾದ ಕನ್ನಡದರಸನು ಕಾರ್ಕಳದ ಮೇಲೆ ದಾಳಿ ಮಾಡಿ ಭೈರರಸನ ರಾಜ್ಯ ಮತ್ತು ಅರಮನೆಯನ್ನು ವಶಪಡಿಸಿಕೊಂಡು ಆತನನ್ನು ಹೊರಗಟ್ಟುತ್ತಾನೆ. ಆಗ ಭೈರರಸನು ಮೂಡುಣ ದಿಕ್ಕಿಗೆ, ತನ್ನ ಮಾವನ ಊರಾದ ‘ಕುಡುಮ’ಕ್ಕೆ (ಧರ್ಮಸ್ಥಳ) ಹೋಗಿ ಅಲ್ಲಿ ಪಂಜುರ್ಲಿ ಭೂತವನ್ನಾರಾಧಿಸಿ ಅದರ ಕೃಪೆಯಿಂದ ಕಳೆದುಕೊಂಡಿದ್ದ ರಾಜ್ಯವನ್ನು ಪುನಃ ಪಡೆದುಕೊಳ್ಳುತ್ತಾನೆ. ಇಮ್ಮಡಿ ಭೈರರಸ ಒಡೆಯನ ರಾಜ್ಯದ ಮೇಲೆ ವಿಜಯನಗರದ ಅರಸ ಕೃಷ್ಣದೇವರಾಯನ ದಾಳಿ ಹಿನ್ನೆಲೆಯಲ್ಲಿ, ಅನಂತರ ಕೈಗೊಳ್ಳಲಾದ ಕಳಸದ ಕಳಸನಾಥ ದೇವಾಲಯದ ಜೀರ್ಣೋದ್ಧಾರದ ವಿವರಗಳನ್ನೊಳಗೊಂಡ ಇಮ್ಮಡಿ ಭೈರರಸ ಒಡೆಯನ ಕಳಸದ ಶಾಸನವು ಒಂದು ಅಪರೂಪದ ಐತಿಹಾಸಿಕ ದಾಖಲೆಯಾಗಿದೆ.
ಒಂದು ಊರಿನ ಇತಿಹಾಸ ತಿಳಿಯುವಲ್ಲಿ ಎಲ್ಲಾ ದಾಖಲೆಗಳು ಪ್ರಮುಖ ಸ್ಥಾನವನ್ನು ಹೊಂದಿವೆ ಇವುಗಳನ್ನು ಉಳಿಸಿ ಬೆಳೆಸುವುದು ನಮ್ಮ ಕರ್ತವ್ಯ, ಪ್ರವಾಸಿ ತಾಣಗಳಲ್ಲಿ ಒಂದಾದ ಕಳಸವನ್ನು ವೀಕ್ಷಿಸಲು ಕರ್ನಾಟಕದ ಅನೇಕ ಪ್ರದೇಶಗಳಿಂದ ಬರುವ ಜನರಿಗೂ ನಮ್ಮ ಊರಿನ ಇತಿಹಾಸವನ್ನು ಪರಿಚಯಿಸುವುದು ನಮ್ಮ ಹೊಣೆ ಕೂಡ ಆಗಿದೆ. ತಾಲೂಕು ಆಗಿ ಮುಂದುವರಿಯುತ್ತಿರುವ ನಮ್ಮ ಊರಿನಲ್ಲಿ ಒಂದು ವಸ್ತು ಸಂಗ್ರಹಾಲಯವಾದಲ್ಲಿ ಇತಿಹಾಸದ ಕುರುಹುಗಳು ಇದರಿಂದ ಉಳಿದು ಮುಂದಿನ ಹಂತಕ್ಕೂ ಬೆಳೆಯುತ್ತದೆ ಎಂಬ ಆಶಯ.