ಕಳಸ ತಾಲ್ಲೂಕಿನಲ್ಲಿ ಸಾಕಷ್ಟು ಮನೆಗಳ ಕೊರತೆ ಇದೆ. ಬೇಡಿಕೆಯಂತೆ ಮನೆಗಳು ಸಿಗುತ್ತಿಲ್ಲ ಈ ಸಮಸ್ಯೆಯನ್ನು ಬಗೆಹರಿಸಿಕೊಡಬೇಕು ಎಂದು ವಸತಿ ಹಾಗೂ ಮೂಲ ಸೌಲಭ್ಯ ಅಭಿವೃದ್ಧಿ ಸಚಿವ ವಿ.ಸೋಮಣ್ಣನವರ ಬಳಿ ಕಳಸ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸುಜಯ ಸದಾನಂದ ಕೇಳಿಕೊಂಡರು.
ಹೊರನಾಡು ಅನ್ನಪೂಣೇಶ್ವರಿ ಕ್ಷೇತ್ರಕ್ಕೆ ಭಾನುವಾರ ಸಚಿವರು ಬೇಟಿ ನೀಡಿದ ಸಂದರ್ಭದಲ್ಲಿ ಅಧ್ಯಕ್ಷೆ ಸುಜಯ ದೇವಸ್ಥಾನಕ್ಕೆ ಬೇಟಿ ನೀಡಿ ಸಚಿವರನ್ನು ಬೇಟಿಯಾಗಿ ತಮ್ಮ ಅವಹಾಲನ್ನು ಇಟ್ಟರು.
ಇದಕ್ಕೆ ಸ್ಪಂದಿಸಿದ ಸಚಿವರು ನಾನು ಎಷ್ಟು ಮನೆಗಳನ್ನು ಬೇಕಾದರೂ ಕೊಡಲು ಸಿದ್ದನಿದ್ದೇನೆ.ತಾಲ್ಲೂಕಿನ ಆರು ಗ್ರಾಮ ಪಂಚಾಯಿತಿ ಪಿಡಿಒಗಳಿಗೆ ತಿಳಿಸಿ ಯಾವ್ಯಾವ ಪಂಚಾಯಿತಿಗೆ ಎಷ್ಟು ಮನೆಗಳು ಬೇಕು ಎಂದು ಪಟ್ಟಿ ಮಾಡಿ, ಅಷ್ಟೂ ಫಲಾನುಭವಿಗಳ ಆದಾರ್ ಕಾರ್ಡ್ ಮತ್ತು ದಾಖಲಾತಿಗಳೊಂದಿಗೆ ಇಒ ಮುಖಾಂತರ ಕಳುಹಿಸಿಕೊಡಿ.ಆದರೆ ಎಲ್ಲವೂ ನ್ಯಾಯಬದ್ದವಾಗಿರಬೇಕು.
ನಾನು ಮತ್ತೆ ಅಕ್ಟೋಬರ್ ತಿಂಗಳಿನಲ್ಲಿ ಹೊರನಾಡಿಗೆ ಬರಲಿದ್ದೇನೆ ಅಷ್ಟರೊಳಗೆ ಎಷ್ಟು ಮನೆಗಳು ಬೇಕು ಅಷ್ಟನ್ನು ಕೊಡುತ್ತೇನೆ ಎಂದು ಹೇಳಿದರು.
ಅಲ್ಲದೆ ಇದೇ ಸಂದರ್ಭದಲ್ಲಿ ಅತಿವೃಷ್ಠಿಯಿಂದ ಸಾಕಷ್ಟು ಜನ ಮನೆ ಕಳೆದುಕೊಂಡಿದ್ದಾರೆ.ಅವರಿಗೆ ನೆಮ್ಮದಿಯ ಬದುಕಿನ ವಾತಾವರಣ ಸೃಷ್ಠಿಯಾಗಬೇಕು.ಕಳಸ ರಸ್ತೆಗಳ ಪರಿಸ್ಥಿತಿ ಮತ್ತು ಹೆಬ್ಬಾಳೆ ಸೇತುವೆಯ ಬಗ್ಗೆ ಡಾ.ಜಿ.ಭೀಮೇಶ್ವರ ಜೋಷಿ ಸಚಿವರ ಗಮನ ಸೆಳೆದರು.
ಸರ್ಕಾರ ಎಷ್ಟು ಬೇಕಾದರೂ ಮನೆ ಕೊಡುತ್ತದೆ.ಆದರೆ ಸರ್ಕಾರ ಕೊಡುವ ಅನುದಾನಕ್ಕೆ ಹೆಚ್ಚುವರಿ ಹಣ ಹಾಕಿ ಮನೆ ಕಟ್ಟಿಕೊಳ್ಳಲು ಸಾಧ್ಯವಿಲ್ಲದವರೆ ಹೆಚ್ಚಿರುವುದು.ಗ್ರಾಮೀಣ ಭಾಗದ ಜನರ ಕಷ್ಟಗಳು ಸಮಸ್ಯೆಗಳು ನನಗೆ ಸಂಪೂರ್ಣ ಅರಿವಿದೆ.ಸರ್ಕಾರದ ಮಟ್ಟದಲ್ಲಿ ನನಗೆ ಎಷ್ಟು ಸಾಧ್ಯವೋ ಅಷ್ಟು ನೆರವು ನೀಡಬಲ್ಲೆ ಎಂದರು.