ಕಳಸ ತಾಲೂಕು ಅಚ್ಚ ಹಸಿರಿನ ಪ್ರಕೃತಿಯೊಂದಿಗೆ ಐತಿಹಾಸಿಕ, ಸಾಂಸ್ಕøತಿಕವಾಗಿ ಶ್ರೀಮಂತವಾಗಿದೆ. ಕ್ರಿ. ಶ. 1154 ರಿಂದ 19ನೇ ಶತಮಾನದವರೆಗೂ ಅನೇಕ ರಾಜಮನೆತನಗಳ ಆಳ್ವಿಕೆಗೆ ಒಳಪಟ್ಟಿತ್ತು ಎಂಬುದಕ್ಕೆ ಇಲ್ಲಿ ದೊರೆತಿರುವ ಶಾಸನ, ಸ್ಮಾರಕಗಳು ಪ್ರಮುಖ ಆಕರಗಳಾಗಿವೆ. ಹೊಂಬುಜದ ಸಾಂತರಸರು, ಕಳಸ-ಕಾರ್ಕಳ ಭೈರರಸರು, ವಿಜಯನಗರ ಅರಸರು, ಕೆಳದಿ ಅರಸರು, ಮೈಸೂರು ಒಡೆಯರು ಇಲ್ಲಿ ಆಳ್ವಿಕೆ ನಡೆಸಿದ ರಾಜಮನೆತನಗಳು ಸ್ಥಳ, ವ್ಯಕ್ತಿ, ವಸ್ತು ಎಲ್ಲಾ ವಿಷಯಕ್ಕೂ ತನ್ನದೇ ಆದ ಇತಿಹಾಸವಿರುತ್ತದೆ. ದೇಶದ ಇತಿಹಾಸದೊಂದಿಗೆ ಆಯಾ ಊರಿನ ಸ್ಥಳೀಯ ಚರಿತ್ರೆಯು ಮುಖ್ಯವಾಗಿದೆ. ಭಾರತದ ಇತಿಹಾಸದ ಪತದಲ್ಲಿ ಮೌರ್ಯ, ಶಾತವಾಹನ, ಚೋಳ, ಚೇರ, ಚಾಲುಕ್ಯ, ಪಲ್ಲವ, ಕದಂಬ, ಕಾಕತೀಯ, ಹೊಯ್ಸಳ, ವಿಜಯನಗರ ಅರಸು ಮನೆತನಗಳು ಪ್ರಮುಖ ಸ್ಥಾನದಲ್ಲಿದ್ದು, ಇವುಗಳ ಇತಿಹಾಸದ ಕುರಿತು ಪ್ರಾಥಮಿಕ ಶಿಕ್ಷಣದಿಂದಲೂ ತಿಳಿದುಕೊಂಡಿರುತ್ತೇವೆ. ಆದರೆ ನಮ್ಮ ಊರಿನ ಇತಿಹಾಸವನ್ನೇ ಮರೆತಿರುತ್ತೇವೆ.
ನಮ್ಮ ಊರಿನ ಪಾಂಡವರ ಉಪ್ಪರಿಗೆ, ಸ್ಥಳೀಯರಿಗೆ ಎಂದಾಕ್ಷಣ ನೆನಪಾಗುವುದು ನಮ್ಮ ಹಿರಿಯರು ಹೇಳುತ್ತಿದ್ದ ಕೆಲವೊಂದು ಐತಿಹ್ಯ, ಇಲ್ಲಿ ಪಾಂಡವರು ವಾಸವಾಗಿದ್ದರು, ಇಲ್ಲಿ ಜಾತ್ರೆ ನಡೆಯುತ್ತದೆ ಹೀಗೆಲ್ಲ ಹೇಳುತ್ತಿದ್ದ ಈ ಸ್ಥಳದ ಹೆಸರು ಕೂಡ ಕುತೂಹಲ ಮೂಡಿಸುತ್ತದೆ. ಕಳಸದಿಂದ ಸುಮಾರು 9 ಕಿ. ಮೀ. ದೂರದಲ್ಲಿರುವ ಕಲ್ಲುಗೋಡು ಸಮೀಪದ ಪಾಂಡವರ ಉಪ್ಪರಿಗೆ. ಈ ಸ್ಥಳದಲ್ಲಿ ಐದು ಗುಹೆಗಳಿದ್ದು, ಸ್ಥಳೀಯರು ಇಲ್ಲಿ ಪಾಂಡವರು ವಾಸವಾಗಿದ್ದರು ಎಂಬ ನಂಬಿಕೆಯನ್ನು ಹೊಂದಿದ್ದಾರೆ. ಪಾಂಡವರ ಉಪ್ಪರಿಗೆಯಲ್ಲಿ ಮೂರು ಮಾದರಿಯ ಸಮಾಧಿಗಳು ದೊರೆತ್ತಿದ್ದು, ಇವು ಆದಿಮಾನವನ ಚಟುವಟಿಕೆಗೆ ಒಳಪಟ್ಟ ಪ್ರದೇಶವೆಂದು ತಿಳಿದುಬರುತ್ತದೆ.
ಕೊಡೆಕಲ್ ಸಮಾಧಿ:
ದಕ್ಷಿಣ ಭಾರತದ ಎಲ್ಲೆಡೆ ವೈವಿಧ್ಯಮಯವಾದ ಬೃಹತ್ ಶಿಲಾಯುಗದ ಸಮಾಧಿಗಳು ಕಂಡುಬರುತ್ತವೆ. ಕರ್ನಾಟಕದಲ್ಲಿಯೂ ಸಹ ಅಸಂಖ್ಯಾತ ಮಾದರಿಯ ಬೃಹತ್ ಶಿಲಾಯುಗ ಸಮಾಧಿಗಳು ಕಂಡುಬಂದಿವೆ. ಆದರೆ, ಕೇರಳ ರಾಜ್ಯದಲ್ಲಿ ಕೆಲವು ವಿಶಿಷ್ಟ ಮಾದರಿಯ ಸಮಾಧಿಗಳು ಕಂಡು ಬಂದಿದ್ದು, ಅವುಗಳನ್ನು ಟೋಪಿಕಲ್ಲು ಸಮಾಧಿ, ಕೊಡೆಕಲ್ ಸಮಾಧಿಗಳೆಂದು ಕರೆಯಲಾಗುತ್ತದೆ. ಕಳಸದ ಪಾಂಡವರ ಉಪ್ಪರಿಗೆಯಲ್ಲಿ ದೊಡ್ಡ ಶಿಲಾವೃತ್ತದ ನಡುವೆ ಕೊಡೆ ಆಕಾರದ ಬೃಹತ್ ಶಿಲೆಯನ್ನು ಇರಿಸಲಾಗಿದೆ. ಕಳಸದಲ್ಲಿ ಕಂಡು ಬಂದ ಕೊಡೆಕಲ್ ಸಮಾಧಿಯು ಕರ್ನಾಟಕದಲ್ಲಿ ಕಂಡು ಬಂದ ಹೊಸ ಮಾದರಿಯ ಸಮಾಧಿಯಾಗಿದೆ. ಕೇವಲ ಕೇರಳಕ್ಕೆ ಸೀಮಿತವಾದ ಮಾದರಿಯೆಂದು ಭಾವಿಸಲಾಗಿದ್ದ ಕೊಡೆಕಲ್ ಮಾದರಿ ಸಮಾಧಿ ಕಳಸದ ಪಾಂಡವರ ಉಪ್ಪರಿಗೆಯಲ್ಲು ಇದೆ.
ಎರಡು ಕೊಡೆಕಲ್ ಸಮಾಧಿಗಳು ಇದ್ದು, ಒಂದು ಸಮಾಧಿಯಿಂದ ಇನ್ನೊಂದು ಸಮಾಧಿಗೆ ಸುಮಾರು 0.5 ಕಿ.ಮೀ ಅಂತರವಿದೆ. ಇದರಲ್ಲಿ ಒಂದು ಸಮಾಧಿಯು ಟೋಪಿಯಾಕಾರದಲ್ಲಿದ್ದು, ನೆಲಕ್ಕೆ ಸಮವಾಗಿದೆ. ಇನ್ನೊಂದು ಸಮಾಧಿಯನ್ನು ಎರಡು ಹಾಸುಗಲ್ಲಿನ ಮೇಲೆ ಕೊಡೆಯಾಕಾರದಲ್ಲಿ ನಿಲ್ಲಿಸಲಾಗಿದೆ. ಈ ಪ್ರಕಾರದ ಶಿಲಾ ಸಮಾಧಿಗಳು ಕರ್ನಾಟಕದಲ್ಲಿ ಅಪರೂಪವಾಗಿದ್ದು, ಕಳಸದ ಪಾಂಡವರ ಉಪ್ಪರಿಗೆಯಲ್ಲಿ ಕಂಡು ಬಂದಿರುವುದು ವಿಶೇಷವೆನಿಸಿದೆ.
ನಿಲುಸುಕಲ್ಲು ಸಮಾಧಿ:
ಕರ್ನಾಟಕದಾದ್ಯಂತ ಬಹಳ ಜನಪ್ರಿಯವಾಗಿ ಕಂಡುಬರುವ ಬೃಹತ್ ಶಿಲಾಯುಗದ ಸಮಾಧಿಗಳಲ್ಲಿ ನಿಲಿಸುಕಲ್ಲು ಮಾದರಿಯು ಒಂದು. ಪಾಂಡವರ ಉಪ್ಪರಿಗೆಯಲ್ಲಿ ಮೊದಲ ಬಾರಿಗೆ ಎರಡು ನಿಲಿಸುಕಲ್ಲು ಸಮಾಧಿಗಳು ಇವೆ. ಇಲ್ಲಿನ ಎರಡು ಸಮಾಧಿಗಳಲ್ಲಿ ಭೂಮಿಗೆ ಲಂಬವಾಗಿ ಪಶ್ಚಿಮಕ್ಕೆ ವಾಲಿದಂತೆ ನಿಲ್ಲಿಸಲಾಗಿದೆ. ಈ ಕಲ್ಲುಗಳು ತ್ರಿಕೋನಾಕಾರದಲ್ಲಿ ಕಂಡು ಬರುತ್ತವೆ. ಇವುಗಳ ಎತ್ತರ ಸುಮಾರು 9 ಅಡಿ ಉದ್ದ ಮತ್ತು ತಳ ಭಾಗದಲ್ಲಿ ಸುಮಾರು 6ಅಡಿ ಅಗಲವಾಗಿದೆ.
ಕಂಡಿಕೋಣೆ ಸಮಾಧಿ:
ಇದೇ ಪ್ರದೇಶದಲ್ಲಿ ಕಲ್ಮನೆ ಅಥವಾ ಕಂಡಿಕೋಣೆ ಸಮಾಧಿ ಅಥವಾ ಡಾಲ್ಮೆನ್ಎಂದು ಕರೆಯಲಾಗುವ ಸಮಾಧಿ ಇದೆ, ಪ್ರಸ್ತುತ ಈ ಸಮಾಧಿಯ ಕಲ್ಲು ಚಪ್ಪಡಿಗಳು ನೆಲಕ್ಕುರುಳಿದೆ. ಒಂದು ಕಲ್ಲು ಚಪ್ಪಡಿಯ ಮಧ್ಯಭಾಗದಲ್ಲಿ ವೃತ್ತಾಕಾರದ ರಂಧ್ರವನ್ನು ಮಾಡಲಾಗಿದೆ.
ಕಲ್ಗುಳಿಗಳು:
ಪಾಂಡವರ ಉಪ್ಪರಿಗೆಯಲ್ಲಿ ದೊರೆತಿರುವ ಕಲ್ಗುಳಿಗಳು:
ಆಫ್ರಿಕಾ, ಉತ್ತರ ಅಮೇರಿಕಾ ರಾಷ್ಟ್ರಗಳಲ್ಲಿ ‘ಮಂಕಾಲ’ ಎಂದು ಕರೆಯಲ್ಪಡುವ ಆಟವು ಭಾರತದ ಅಳಿಗುಳಿ ಮನೆ ಅಥವಾ ಚನ್ನ ಮಣೆ ಆಟದ ಹೋಲಿಕೆಯನ್ನು ಹೋಲುತ್ತದೆ. ಮಂಕಾಲ ಆಟವನ್ನು ಏಷ್ಯಾ ಮತ್ತು ಆಫ್ರಿಕಾದಾದ್ಯಂತ 7000 ವರ್ಷಗಳ ಹಿಂದಿನಿಂದ ಆಡಿರುವ ಇತಿಹಾಸವಿದೆ. ಇಂತಹ ಹೋಲಿಕೆಯನ್ನು ಹೊಂದಿರುವ ಕಲ್ಗುಳಿಗಳು ಪಾಂಡವರ ಉಪ್ಪರಿಗೆಯ ಬೃಹತ್ ಶಿಲಾಯುಗ ಸಮಾಧಿಗಳ ಆಸು ಪಾಸಿನಲ್ಲಿರುವ ನೈಸರ್ಗಿಕ ಬಂಡೆಗಳ ಮೇಲೆ ಕಂಡುಬರುತ್ತವೆ. ಸುಮಾರು ಏಳು ಕಡೆ ಕಲ್ಗುಳಿಗಳು ಕಂಡು ಬಂದಿದ್ದು, ಅದರಲ್ಲಿ ಐದು ಕಲ್ಗುಳಿಗಳು ಜಾನಪದೀಯ ಅಳಿಗುಳಿ ಮನೆ ಅಥವಾ ಚೆನ್ನೆಮಣೆಯನ್ನು ಹೋಲುತ್ತವೆ. ತುಳುನಾಡಿನ ಜಾನಪದೀಯ ಆಟಗಳಲ್ಲಿ ಚೆನ್ನ ಮಣೆ ಆಟವು ಪ್ರಮುಖ ಆಟವಾಗಿದೆ. ತುಳು ಜಾನಪದದಲ್ಲಿ ಚೆನ್ನಮಣೆ ಸಾವಿನ ಸಂಕೇತವಾಗಿದೆ. ಇಲ್ಲಿನ ಐತಿಹ್ಯದ ಪ್ರಕಾರ ಅಕ್ಕ-ತಂಗಿಯರು ಆಟವನ್ನು ಆಡುವಾಗ ಮಣೆಯಲ್ಲಿ ಹೊಡೆದುಕೊಂಡು ಸಾಯುತ್ತಾರೆ. ಆದರಿಂದ ಅಕ್ಕ-ತಂಗಿಯರು, ಅಣ್ಣ-ತಮ್ಮಂದಿರು ಆಟವನ್ನು ಆಡಬಾರದೆಂದಿದೆ. “ಚೆನ್ನೆ”ಎಂದರೆ“ಸುಂದರ”ಎಂಬ ಅರ್ಥವನ್ನು ಹೊಂದಿದೆ.
ಕಳಸದಲ್ಲಿ ಕಂಡುಬಂದಿರುವ ಕಲ್ಗುಳಿಗಳು ಎರಡು ಸಮಾನಾಂತರ ಸಾಲುಗಳಲ್ಲಿ 7+7 ಒಟ್ಟು14 ಗುಳಿಗಳು ಕಂಡುಬರುತ್ತವೆ. ಕೆಲವು ಕಡೆ 18 ಗುಳಿಗಳನ್ನು ಒಳಗೊಂಡಿವೆ. ಈ ಮೊದಲೇ ವಿವರಿಸಿದಂತೆ ಪಾಂಡವರ ಉಪ್ಪರಿಗೆಯಲ್ಲಿ ಐದು ಗುಹೆಗಳು ಮತ್ತು ಐದು ಸಮಾಧಿಗಳು ಕಂಡುಬರುತ್ತವೆ. ಆದರಿಂದ ಈ ಐದು ಕಲ್ಗುಳಿಗಳು ಐದು ಸಮಾಧಿಗಳ ಅಥವಾ ಐದು ಸಾವಿನ ಸಂಕೇತವಾಗಿರಬಹುದು ಎಂಬ ಊಹೆಯನ್ನು ಮಾಡಬಹುದು.
ಈ ಪ್ರದೇಶವು ಅರಣ್ಯ ಇಲಾಖೆಯ ವ್ಯಾಪ್ತಿಯಲ್ಲಿದ್ದು, ಸಾಕಷ್ಟು ದಟ್ಟಾರಣ್ಯದಿಂದ ಕೂಡಿದ್ದು ಸ್ಥಳಕ್ಕೆ ಹೋಗುವುದು ಕಷ್ಟಕರವಾದ ಪ್ರದೇಶವಾಗಿದೆ. ಸಾಕಷ್ಟು ಇತಿಹಾಸ ಹೊಂದಿದ ಈ ಪ್ರದೇಶವಾದರೂ ಮಾನವನ ಒಡನಾಟ ಆ ಪ್ರದೇಶಕ್ಕೆ ಇಲ್ಲದೆ ಇರುವುದರಿಂದ ಪಾಳು ಬಿದ್ದು ದಟ್ಟ ಕಾಡು ಆವರಿಸಿ, ಸ್ಥಳ ಭಯ ಹುಟ್ಟಿಸುವಂತಿದೆ.
ಬರಹ: ಡಾ. ಸುಪ್ರಿತ ಕೆ.ಎನ್, ಇತಿಹಾಸ ಸಂಶೋಧನಾರ್ಥಿ