ಕಳಸ ತಾಲ್ಲೂಕಿನ ಚನ್ನಹಡ್ಲು ಭೂಕುಸಿತ ಸಂತ್ರಸ್ಥರು ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವವನ್ನು ತಮ್ಮ ಮನೆಗಳ ಅಡಿಪಾಯದ ಮೇಲೆ ಬಾವುಟ ಹಾರಿಸುವುದರ ಮೂಲಕ ಶನಿವಾರ ಆಚರಿಸಿದರು.
2019ರಲ್ಲಿ ಸುರಿದ ಮಹಾಮಳೆಯಲ್ಲಿ ತಮ್ಮ ಜಮೀನು ಮನೆಗಳನ್ನು ಕಳೆದುಕೊಂಡು ಸಂತ್ರಸ್ಥರಾಗಿದ್ದ ಚನ್ನಹಡ್ಲುವಿನ 16 ಕುಟುಂಬಗಳು ನಿವೇಶನಕ್ಕಾಗಿ ಕಳೆದ ಕೆಲ ತಿಂಗಳ ಹಿಂದೆ ಕಳಸ ತಾಲ್ಲೂಕು ಕಚೇರಿ ಮುಂಬಾಗ ಹಲವಾರು ದಿನಗಳ ಕಾಲ ಧರಣಿ ಕುಳಿತಿದ್ದರು.ನಂತರ ಓಡಿನಕುಡಿಗೆಯಲ್ಲಿ ನಿವೇಶನ ನೀಡಿ ಹಕ್ಕು ಪತ್ರ ನೀಡುವ ಭರವಸೆಯನ್ನು ನೀಡಿದ್ದರು.ಆದರೆ ನಿವೇಶನ ನೀಡಿದರಾದರೂ ಈ ವರೆಗೂ ಹಕ್ಕು ಪತ್ರವನ್ನು ನೀಡಲಿಲ್ಲ.
ನಿವೇಶನ ರಹಿತರು ಸರ್ಕಾರ ನೀಡಿದ ನಿವೇಶನದಲ್ಲಿ ಅಡಿಪಾಯ ಹಾಕಿ ಹಕ್ಕು ಪತ್ರಕ್ಕಾಗಿ ಕಾಯುತ್ತಿದ್ದಾರೆ.ಇದೇ ಅಡಿಪಾಯದ ಮೇಲೆ ಶನಿವಾರ ಸಂತ್ರಸ್ಥರು ಪ್ರತ್ಯೇಕವಾಗಿ ರಾಷ್ಟ್ರದ್ವಜ ಹಾರಿಸಿದ್ದಾರೆ.
ಈ ಬಗ್ಗೆ ಮಾತನಾಡಿದ ಯುವಕ ಅವಿನಾಶ್ ದೇಶದ ಎಲ್ಲರೂ ತಂತಮ್ಮ ಮನೆಗಳ ಮೇಲೆ ದ್ವಜ ಹಾರಿಸಲು ಕರೆ ನೀಡಿದ್ದಾರೆ.ನಮಗೆ ಮನೆ ಇಲ್ಲದ ಕಾರಣ ನಾವು ಅಡಿಪಾಯದ ಮೇಲೆ ಧ್ವಜಾರೋಹಣ ಮಾಡಿದ್ದೇವೆ.ಇದು ಯಾರ ವಿರುದ್ದವೂ ಅಲ್ಲ,ಪ್ರತಿಭಟನೆ ಅಥವಾ ಧ್ವಜಕ್ಕೆ ಅಗೌರವವೂ ಅಲ್ಲ.ನಮ್ಮ ದೇಶಭಕ್ತಿಯನ್ನು ತೋರಿಸುತ್ತಿದ್ದೇವೆ ಎಂದರು.
ಈ ಸಂದರ್ಭದಲ್ಲಿ ನಿರಾಶ್ರಿತರಾದ ನೀಲಯ್ಯ, ವೇದ ಪುಜಾರ್ತಿ,ಜಗದೀಶ್,ಸುರೇಶ್,ಮಂಜು,ರಾಜು ಪೂಜಾರಿ,ನಾರಾಯಣ ಪೂಜಾರಿ,ಸದಾಶಿವ ಪೂಜಾರಿ,ನೋಣಯ್ಯ,ದೂಜ,ರಾಜು,ರಮೇಶ್ ಶೆಟ್ಟಿ, ಸುರೇಶ್ ಶೆಟ್ಟಿ ಇದ್ದರು.